ರೇಷನ್ ಕಾರ್ಡ್ ಅರ್ಜಿಗೆ ಹೊಸ ನಿಯಮ ಕಡ್ಡಾಯಗೊಳಿಸುವಂತೆ (Ration Card New Rules) ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಬಿಪಿಎಲ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಶುದ್ಧೀಕರಿಸಲು ಕರ್ನಾಟಕ ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ. ಇನ್ಮುಂದೆ ಹೊಸದಾಗಿ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸುವವರಿಗೆ ಕಠಿಣ ನಿಯಮ ಜಾರಿಗೊಳಿಸಲಾಗುತ್ತಿದೆ. ಜೊತೆಗೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಅನರ್ಹರ ಕಾರ್ಡ್ ರದ್ದತಿಗೂ ಮುಂದಾಗಿದೆ.
ಈ ಸಂಬಂಧ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಸಲ್ಲಿಸಿದ್ದು, ಅವುಗಳನ್ನು ಆಧರಿಸಿ ರಾಜ್ಯ ಸರ್ಕಾರ ಇಷ್ಟರಲ್ಲೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಹೆಚ್ಚಾಗಿದೆ.
Rohini Rain- ಮೇ 25ರಿಂದ ರಾಜ್ಯದಲ್ಲಿ ರೋಹಿಣಿ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳು
2025ರ ಮೇ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ 8ನೇ ವರದಿಯಲ್ಲಿ, ಆಯೋಗದ ಅಧ್ಯಕ್ಷ ಶಾಸಕ ಆರ್.ವಿ. ದೇಶಪಾಂಡೆ ನೇತೃತ್ವದ ಸಮಿತಿ ಕೆಳಗಿನ ಪ್ರಮುಖ ಶಿಫಾರಸುಗಳನ್ನು ಮಾಡಿದೆ:
- ಆರ್ಥಿಕ ಆಧಾರದ ಮೇಲೆ ಅರ್ಹತೆ ನಿರ್ಧಾರ: ವಾರ್ಷಿಕ ಆದಾಯ ₹1.2 ಲಕ್ಷಕ್ಕಿಂತ ಹೆಚ್ಚು ಇದ್ದರೆ ಬಿಪಿಎಲ್ ಕಾರ್ಡ್’ಗೆ ಅರ್ಹತೆ ಇಲ್ಲ. ಬಡ ಕುಟುಂಬಗಳಿಗೆ ಸೀಮಿತವಾಗಿರುವ ಪಡಿತರ ಲಾಭವನ್ನು ಹಣವಂತರು ಪಡೆಯುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
- ಭೂಮಿ ಮತ್ತು ಆಸ್ತಿ ಅಂಶದ ಆಧಾರದ ಮೇಲೆ ತಪಾಸಣೆ: 3 ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ್ದರೆ, ಬಿಪಿಎಲ್ ಕಾರ್ಡಿಗೆ ಅರ್ಹರಾಗುವುದಿಲ್ಲ. 1,000 ಚದರ ಅಡಿ ಮೀರುವ ಪಕ್ಕಾ ಮನೆ ಇರುವವರನ್ನು ಕೂಡ ಪಡಿತರ ಲಾಭದಿಂದ ಹೊರಗಿಡಬೇಕು.
- ಡಿಜಿಟಲ್ ಡೇಟಾ ಜೋಡಣೆ: ಪಹಣಿ, ಜಮೀನಿನ ದಾಖಲೆಗಳು, ವಾಹನ ನೋಂದಣಿ ವಿವರಗಳು, ಸರ್ಕಾರಿ ನೌಕರರ ಮಾಹಿತಿ (HRMS), ಆಸ್ತಿ ನೋಂದಣಿ, ಜಿಎಸ್ಟಿ, ಇಪಿಎಫ್, ಆದಾಯ ತೆರಿಗೆ ದಾಖಲೆಗಳು ಇವೆಲ್ಲವನ್ನು ಪಡಿತರ ಚೀಟಿ ಮಾಹಿತಿಗೆ ಜೋಡಿಸಿ ತಪಾಸಣೆ ನಡೆಸಬೇಕು. ಈ ಮೂಲಕ ಆರಂಭದಲ್ಲಿಯೇ ಅನರ್ಹರನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
- ವಿದ್ಯುತ್ ಬಳಕೆ ಆಧಾರದ ಮೇಲೆ ಪರಿಶೀಲನೆ: ತಿಂಗಳಿಗೆ 200 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಬೇಕು.

ರೇಷನ್ ಕಾರ್ಡ್ ದುರ್ಬಳಕೆ ಅಂಕಿ-ಅಂಶಗಳು
ರಾಜ್ಯದಲ್ಲಿ ಪ್ರಸ್ತುತ 4.46 ಕೋಟಿ ರೇಷನ್ ಕಾರ್ಡ್’ಗಳು ಚಾಲ್ತಿಯದ್ದು, ಅವುಗಳಲ್ಲಿ ಅಂದಾಜು 25 ಲಕ್ಷ ಕಾರ್ಡ್’ಗಳನ್ನು ಅನರ್ಹರು ಬಳಸುತಿದ್ದಾರೆ. ಸುಮಾರು 46 ಲಕ್ಷ ಕಾರ್ಡ್’ಗಳು ಹೆಚ್ಚುವರಿಯಾಗಿದ್ದು, ಈ ಅಂಶವನ್ನೂ ಆಯೋಗ ಗುರುತಿಸಿದೆ. ಅನೇಕ ದೊಡ್ಡ ಹಿಡುವಳಿದಾರ ರೈತರು, ಉದ್ಯೋಗಿಗಳು ಮತ್ತು ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿ ಅಕ್ರಮವಾಗಿ ರೇಷನ್ ಕಾರ್ಡ್ ಪ್ರಯೋಜನ ಪಡೆಯುತ್ತಿದ್ದಾರೆ.
ಹೊಸ ಅರ್ಜಿ ಪ್ರಕ್ರಿಯೆ ಮತ್ತಷ್ಟು ಕಠಿಣ
ಇನ್ನುಮುಂದೆ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವ ಹಂತದಲ್ಲೇ ಅರ್ಹ ಮತ್ತು ಅನರ್ಹರ ಪತ್ತೆ ಮಾಡಲು ಆನ್ಲೈನ್ ತಪಾಸಣಾ ವ್ಯವಸ್ಥೆ ಜಾರಿಯಾಗಲಿದೆ. ಈ ಮೂಲಕ ಅನರ್ಹರು ಅರ್ಜಿ ಸಲ್ಲಿಸಿದ ಕೂಡಲೇ ನಿರಾಕರಣೆ ಆಗುವ ವ್ಯವಸ್ಥೆ ನಿರ್ಮಾಣವಾಗಲಿದೆ.
ಬಿಪಿಎಲ್ ಕಾರ್ಡ್ ವಿತರಣೆ ನ್ಯಾಯಸಮ್ಮತ ಆಗಿರಬೇಕೆಂಬ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಿಲ್ ಕಲೆಕ್ಟರ್ಗಿಂತ ಮೇಲಿನ ಸರ್ಕಾರಿ ಅಧಿಕಾರಿ, ಒಬ್ಬ ಎಸ್ಸಿ/ಎಸ್ಟಿ ವರ್ಗದ ಮಹಿಳಾ ಪಡಿತರದಾರರು, ಆರು ಒಬಿಸಿ ವರ್ಗದ ಮಹಿಳೆಯರನ್ನು ಸೇರಿಸಿ ಸಮಿತಿ ರಚನೆಯಾಗಬೇಕು ಎಂದು ಆಯೋಗ ತಿಳಿಸಿದೆ.
ಪಡಿತರ ವ್ಯವಸ್ಥೆ ಸುಧಾರಣೆ
ಈ ಹೊಸ ನಿಯಮಗಳು ಜಾರಿಯಾದರೆ, ಪಡಿತರ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯನ್ನು ಹೆಚ್ಚಿಸಲು, ನಿಜವಾದ ಬಡ ಕುಟುಂಬಗಳಿಗೆ ಮಾತ್ರ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಇನ್ನು ಮುಂದೆ ಅನರ್ಹರು ಸರ್ಕಾರದ ಸಬ್ಸಿಡಿ ಪಡೆಯುವುದು ಕಷ್ಟವಾಗಲಿದೆ. ಡೇಟಾ ಆಧಾರಿತ ಪರಿಶೀಲನೆಯ ಮೂಲಕ ಪಡಿತರ ವ್ಯವಸ್ಥೆ ಸುಧಾರಿಸಲಿದೆ.
ಸರ್ಕಾರ ಈ ಶಿಫಾರಸುಗಳನ್ನು ಕೈಗೆತ್ತಿಕೊಂಡು ತಕ್ಷಣ ಜಾರಿಗೊಳಿಸಿದರೆ, ಪಡಿತರ ಯೋಜನೆ ಯಶಸ್ವಿಯಾಗಲು ಅನುಕೂಲವಾಗಲಿದೆ. ಇದರ ಜೊತೆಗೆ ಸಾರ್ವಜನಿಕ ಸಂಪತ್ತು ಉಳಿಸಬಹುದಾದ ಮಹತ್ತರ ಹೆಜ್ಜೆಯೂ ಆಗಲಿದೆ. ಸರ್ಕಾರದ ಅಧಿಕೃತ ತೀರ್ಮಾನ ಇನ್ನು ಮೇಲಷ್ಟೇ ಪ್ರಕಟವಾಗಬೇಕಿದೆ.