ಮೇ 25ರಿಂದ ರೋಹಿಣಿ ಮಳೆಯ (Rohini Rain) ಆರ್ಭಟ ಶುರುವಾಗಲಿದ್ದು; ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಒಳನಾಡು ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಮುಂಗಾರು ಪ್ರವೇಶಕ್ಕೆ ದಿನಗಣನೆ ಶುರುವಾಗಿದೆ. ಇದರೊಂದಿಗೆ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಈ ಬಾರಿಗೆ ರೋಹಿಣಿ ಮಳೆ ನಕ್ಷತ್ರ ಭಾರಿ ಮಳೆಯೊಂದಿಗೆ ಪ್ರಾರಂಭವಾಗಲಿದೆ ಎಂಬ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಮೇ 25ರಿಂದ ಆರಂಭವಾಗಿ ಜೂನ್ 6ರ ವರೆಗೆ ಇರುವ ರೋಹಿಣಿ ಮಳೆಯು ಮುಂದುವರೆಯಲಿದ್ದು, ಇದರ ಪರಿಣಾಮವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಕೆಲವು ಒಳನಾಡು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಮೇ 23 ಹಾಗೂ 24ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇರುತ್ತದೆ. ಬಳಿಕ ಮೇ 25ರಿಂದ 27ರ ವರೆಗೆ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ, ವಸತಿ ಪ್ರದೇಶ ಜಲಾವೃತ, ರಸ್ತೆಗಳು ನದಿಯಂತಾಗುವುದು, ಮಣ್ಣು ಕುಸಿತ ಹಾಗೂ ವಿದ್ಯುತ್ ವ್ಯತ್ಯಯದಂತಹ ಸಮಸ್ಯೆಗಳಾಗುವ ಅಪಾತ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಒಳನಾಡು ಜಿಲ್ಲೆಗಳಿಗೂ ಮಳೆ ಎಚ್ಚರಿಕೆ
ಕರಾವಳಿ ಭಾಗದ ಜಿಲ್ಲೆಗಳಿಗೆ ಮಾತ್ರವಲ್ಲದೇ ಒಳನಾಡು ಜಿಲ್ಲೆಗಳಲ್ಲಿಯೂ ರೋಹಿಣಿ ಮಳೆ ಬಿರುಸು ಪಡೆಯಲಿದೆ. ಹೀಗಾಗಿ ಮೇ 25ರಿಂದ 29ರ ವರೆಗೆ ಅಲರ್ಟ್ ಘೋಷಿಸಲಾಗಿದ್ದು; ಜಿಲ್ಲಾವಾರು ವಿವರ ಈ ಕೆಳಗಿನಂತಿದೆ:
ಆರೆಂಜ್ ಅಲರ್ಟ್ (ಮೇ 25-27)
- ಬೆಳಗಾವಿ
- ಬಾಗಲಕೋಟೆ
- ಧಾರವಾಡ
- ಚಿಕ್ಕಮಗಳೂರು
- ಶಿವಮೊಗ್ಗ
- ಕೊಡಗು
- ಹಾಸನ

ಆರೆಂಜ್ ಅಲರ್ಟ್ (ಮೇ 27-29)
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಚಾಮರಾಜನಗರ
- ಚಿಕ್ಕಬಳ್ಳಾಪುರ
- ರಾಮನಗರ
- ಮಂಡ್ಯ
ಯೆಲ್ಲೋ ಅಲರ್ಟ್ (ಮೇ 25-27)
- ಗದಗ
- ಹಾವೇರಿ
- ಮೈಸೂರು
ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಜೊತೆಗೆ ಕೆಲವೊಂದಿಷ್ಟು ಪ್ರದೇಶಗಳಲ್ಲಿ ಭೂಕುಸಿತ, ನದೀ ಪ್ರವಾಹ ಮತ್ತು ರೈತರ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಕೃಷಿಕರು ತಮ್ಮ ಜಮೀನುಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ!
ಕರಾವಳಿ ಪ್ರದೇಶಗಳಿಗೆ ಸಮೀಪದ ಪೂರ್ವ-ಮಧ್ಯ ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಒತ್ತಡ ಹೆಚ್ಚಾಗಿರುವುದರಿಂದ, 55 ಕಿಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ, ಗೋವಾ, ಕೊಂಕಣ, ಲಕ್ಷದ್ವೀಪ ಹಾಗೂ ಆಂಧ್ರ ಪ್ರದೇಶದ ಮೀನುಗಾರರಿಗೆ ಸಮುದ್ರದತ್ತ ತೆರಳಬಾರದು ಎಂಬ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇದೇ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯೂ ಅಲ್ಲಿನ ಮೀನುಗಾರರಿಗೆ ವಿಶೇಷ ಎಚ್ಚರಿಕೆಯನ್ನು ನೀಡಿದ್ದು; ಸಮುದ್ರದ ಅಬ್ಬರ ಹೆಚ್ಚಿರುವುದರಿಂದ ದೋಣಿ ಮತ್ತು ಬೋಟ್ಗಳಿಗೆ ಅಪಾಯ ಎದುರಾಗಬಹುದು.
KEA CET Result 2025- ಕೆಇಎ ಸಿಇಟಿ ಫಲಿತಾಂಶ 2025 | ರಿಸಲ್ಟ್ ಬಿಡುಗಡೆ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…
ರಾಜ್ಯಾದ್ಯಂತ ಉಷ್ಣಾಂಶ ಕುಸಿತ
ಭಾರಿ ಮಳೆಯ ಕಾರಣದಿಂದಾಗಿ ಮುಂದಿನ 5 ದಿನಗಳಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಮಟ್ಟದ ಕುಸಿತ ಕಾಣಬಹುದು. ಇದರಿಂದ ಹವಾಮಾನದಲ್ಲಿ ತಂಪು ಹೆಚ್ಚಾಗುವ ಸಾಧ್ಯತೆ ಇದೆ.
ವಿವಿಧ ರಾಜ್ಯಗಳಲ್ಲೂ ಮಳೆ ಅಬ್ಬರ
ಇದು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಭಾರತದ ವಿವಿಧ ಭಾಗಗಳಲ್ಲಿಯೂ ತೀವ್ರ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮೇ 24ರ ಶನಿವಾರದ ವರೆಗೆ ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ.
ದೆಹಲಿ, ತಮಿಳುನಾಡು, ಗುಜರಾತ್, ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಳೆ ಜೋರಾಗಿರುವ ಬಗ್ಗೆ ವರದಿಯಾಗಿದೆ. ಇದೇ ವೇಳೆ, ತೀವ್ರ ಚಂಡಮಾರುತದ ಒತ್ತಡದ ಪರಿಣಾಮವಾಗಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.