ರಾಜ್ಯ ಸರ್ಕಾರ ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದ್ದು; ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೂ ‘ಇ-ಸ್ವತ್ತು’ (E-Swathu) ವಿತರಣೆಗೆ ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳನ್ನು ಡಿಜಿಟಲ್ ದಾಖಲೆಗಳ ಅಡಿಯಲ್ಲಿ ತರಲು ಸರ್ಕಾರವು ಬೃಹತ್ ಯೋಜನೆ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ಇನ್ನೂ ಒಂದೂವರೆ ತಿಂಗಳೊಳಗೆ ‘ಇ-ಸ್ವತ್ತು’ ವಿತರಣೆ ಹಾಗೂ 11 ಬಿ ಆಸ್ತಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ.
ಇಲ್ಲಿಯವರೆಗೆ ತೆರಿಗೆ ವಸೂಲಿ, ಆಸ್ತಿ ಹಕ್ಕು-ಹಸ್ತಾಂತರ ಹಾಗೂ ಕಾನೂನು ಪ್ರಕ್ರಿಯೆಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿದವು. ಈ ಸಮಸ್ಯೆಯನ್ನು ಪರಿಹರಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರಲ್ಲಿ ತಿದ್ದುಪಡಿ ಮಾಡಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸದರಿ (ತಿದ್ದುಪಡಿ) ಅಧಿನಿಯಮ ಅಂಗೀಕರಿಸಲ್ಪಟ್ಟಿದೆ.
ತಿದ್ದುಪಡಿ ಅಧಿನಿಯಮದ ಪ್ರಮುಖ ಅಂಶಗಳು
ಪ್ರಕರಣ 199 ಬಿ ಮತ್ತು ಪ್ರಕರಣ 199 ಸಿ ಸೇರಿಸಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ರಮಬದ್ಧವಲ್ಲದ ನಿವೇಶನಗಳು ಮತ್ತು ಕಟ್ಟಡಗಳನ್ನು ಸಹ ತೆರಿಗೆ ವ್ಯಾಪ್ತಿಗೆ ತರಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಭೂಮಿ, ಸ್ಥಳೀಯ ಸಂಸ್ಥೆಗಳ ಭೂಮಿ, ಶಾಸನಬದ್ಧ ಸಂಸ್ಥೆಗಳ ಭೂಮಿ ಮತ್ತು ಅರಣ್ಯ ಭೂಮಿಯನ್ನು ಹೊರತುಪಡಿಸಿ, ಇತರ ಎಲ್ಲ ಆಸ್ತಿಗಳನ್ನು ನೋಂದಾಯಿಸಿ ತೆರಿಗೆ ವಿಧಿಸಲಾಗುವುದು.
2025ರ ಏಪ್ರಿಲ್ 07ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ‘ಇ-ಸ್ವತ್ತು’ ತಂತ್ರಾAಶದಲ್ಲಿ ನಮೂನೆ- 11 ಬಿ ಅಡಿಯಲ್ಲಿ ಹೊಸ ಆಸ್ತಿ ಸೃಜನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಮುಂದಿನ ಕ್ರಮಗಳು
ತಿದ್ದುಪಡಿ ಅಧಿನಿಯಮಕ್ಕೆ ಅನುಗುಣವಾಗಿ ಕರಡು ನಿಯಮಾವಳಿ ರೂಪಿಸಲಾಗಿದೆ. ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಪಡೆದು, ಅಂತಿಮ ನಿಯಮಾವಳಿ ಸಿದ್ಧಪಡಿಸಲಾಗಿದೆ.
ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ನಂತರ, ಗ್ರಾಮ ಪಂಚಾಯತಿಗಳಲ್ಲಿ 11 ಬಿ ಆಸ್ತಿ ನೋಂದಣಿ ಹಾಗೂ ಇ-ಖಾತಾ ವಿತರಣೆ ಕಾರ್ಯ ಪ್ರಾರಂಭವಾಗಲಿದೆ. ಈ ಸಂಪೂರ್ಣ ಪ್ರಕ್ರಿಯೆ ಇನ್ನೂ 45 ದಿನಗಳ ಒಳಗೆ ಜಾರಿಗೆ ಬರಲಿದೆ.
ಸೆಪ್ಟೆಂಬರ್’ಗೆ ಎಲ್ಲಾ ಆಸ್ತಿಗೂ ಇ-ಸ್ವತ್ತು ವಿತರಣೆ
ಗ್ರಾಮೀಣಾಭಿವೃದ್ಧಿ ಸಚಿವರ ಪ್ರಕಾರ, ತಾಂತ್ರಿಕ ತಯಾರಿಗಳು ಪೂರ್ಣಗೊಂಡ ನಂತರ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ‘ಇ-ಸ್ವತ್ತು’ ಮತ್ತು ‘11 ಬಿ ನೋಂದಣಿ’ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಈ ಯೋಜನೆಯಿಂದ ಗ್ರಾಮೀಣ ಆಸ್ತಿ ನಿರ್ವಹಣೆ, ತೆರಿಗೆ ಸಂಗ್ರಹಣೆ ಮತ್ತು ಆಡಳಿತದಲ್ಲಿ ನಗರಗಳ ಸಮಾನ ಮಟ್ಟದ ಡಿಜಿಟಲ್ ಪಾರದರ್ಶಕತೆ ತರಲು ಸಾಧ್ಯವಾಗಲಿದೆ. ಅಂತೆಯೇ, ಗ್ರಾಮೀಣ ಜನತೆ ತಮ್ಮ ಆಸ್ತಿ ವಿವರಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ವೀಕ್ಷಿಸಿ, ಮುದ್ರಣ ಪಡೆಯುವಂತಾಗಲಿದೆ.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.