Vruddhapya Pension Document Verification: 17.97 ಲಕ್ಷಕ್ಕೂ ಹೆಚ್ಚು ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿದಾರರಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. 30 ದಿನದೊಳಗೆ ದಾಖಲೆ ಸಲ್ಲಿಸಬೇಕಿದ್ದು; ಸಂಪೂರ್ಣ ಮಾಹಿತಿ ಇಲ್ಲಿದೆ…
ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ (Social Security Pension) ಪಡೆಯುತ್ತಿರುವ ರಾಜ್ಯದ ಲಕ್ಷಾಂತರ ಮಂದಿಗೆ ಇದೀಗ ದಾಖಲೆ ಪರಿಶೀಲನೆಯ ಆತಂಕ ಎದುರಾಗಿದೆ.
ಇದನ್ನೂ ಓದಿ: Gruhalakshmi 32nd Installment Release: ಮಹಿಳೆಯರ ಖಾತೆಗೆ 32ನೇ ಕಂತಿನ ಗೃಹಲಕ್ಷ್ಮೀ ಹಣ ಜಮಾ | ₹2,443 ಕೋಟಿ ಬಿಡುಗಡೆ
ಅಗತ್ಯ ದಾಖಲೆಗಳನ್ನು ಸಲ್ಲಿಸದ 17.97 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಸರ್ಕಾರ ನೋಟಿಸ್ ನೀಡಿದೆ. ಅಲ್ಲದೆ, ಕೆಲವರಿಗೆ ಮೊಬೈಲ್ಗೆ ಎಸ್ಎಂಎಸ್ ಕಳುಹಿಸಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಸರ್ಕಾರದ ಈ ಕ್ರಮದ ಉದ್ದೇಶ ತಪ್ಪು ದಾಖಲೆ ನೀಡಿ ಪಿಂಚಣಿ ಪಡೆಯುತ್ತಿರುವವರನ್ನು ಪತ್ತೆಹಚ್ಚುವುದು. ಆದರೆ ಇದರ ನಡುವೆ ನಿಜವಾಗಿಯೂ ಪಿಂಚಣಿಗೆ ಅರ್ಹರಾಗಿರುವ ಹಿರಿಯ ನಾಗರಿಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರಿಗೆ ಪಿಂಚಣಿ ನಿಂತಿದ್ದರೂ ಏಕೆ ನಿಂತಿದೆ ಎಂಬುದೇ ಗೊತ್ತಾಗುತ್ತಿಲ್ಲ. ನೋಟಿಸ್ ಅಥವಾ ಎಸ್ಎಂಎಸ್ ಕೂಡ ಬಂದಿಲ್ಲ ಎಂಬ ದೂರುಗಳಿವೆ.
ಇದನ್ನೂ ಓದಿ: Karnataka Govt Employees: ಸರ್ಕಾರಿ ನೌಕರರಿಗೆ ಶಾಕ್: ಆಸ್ತಿ ಘೋಷಣೆ ಕಡ್ಡಾಯ, ರಾಜ್ಯ ಸರ್ಕಾರದ ಖಡಕ್ ಆದೇಶ
83 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಪರಿಶೀಲನೆ
ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿದ್ದ 83,12,411 ಮಂದಿಯ ಕುಟುಂಬದ ಮಾಹಿತಿಯನ್ನು ಸರ್ಕಾರ ಪರಿಶೀಲಿಸಿದೆ. ಈ ಮಾಹಿತಿಯನ್ನು ಬಿಎಂಎಸ್ ತಂತ್ರಾAಶದೊAದಿಗೆ ತಾಳೆ ಹಾಕಿದಾಗ 23,14,450 ಮಂದಿಯ ದಾಖಲೆಗಳಲ್ಲಿ ಅನುಮಾನ ಕಂಡುಬಂದಿದೆ.
ಹೀಗಾಗಿ ಈ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು.
ಇದಾದ ಬಳಿಕ ಕಳೆದ ಐದು ತಿಂಗಳಲ್ಲಿ 5.17 ಲಕ್ಷಕ್ಕೂ ಹೆಚ್ಚು ಮಂದಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಪರಿಶೀಲನೆಯ ನಂತರ ಇವರಲ್ಲಿ ಅರ್ಹರಾಗಿರುವವರಿಗೆ ಮತ್ತೆ ಪಿಂಚಣಿ ಸಿಗುವಂತಾಗಿದೆ. ಆದರೆ ಇನ್ನೂ 17,97,193 ಮಂದಿ ದಾಖಲೆಗಳನ್ನು ಸಲ್ಲಿಸಿಲ್ಲ. ಇವರಿಗೆ ಈಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Gruha Jyothi Survey: ದಾಖಲೆ ನೀಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಕಟ್ | ಸರ್ಕಾರದ ಹೊಸ ಎಚ್ಚರಿಕೆ
ತಪ್ಪು ದಾಖಲೆ ನೀಡಿದ 79 ಸಾವಿರ ಮಂದಿಯ ಪಿಂಚಣಿ ರದ್ದು
ಪರಿಶೀಲನೆ ವೇಳೆ ಪಿಂಚಣಿ ಪಡೆಯಲು ವಯಸ್ಸಿನ ಬಗ್ಗೆ ತಪ್ಪು ದಾಖಲೆಗಳನ್ನು ನೀಡಿದ್ದ ಪ್ರಕರಣಗಳೂ ಪತ್ತೆಯಾಗಿವೆ. ಇಂತಹ 79,988 ಮಂದಿಯ ಪಿಂಚಣಿಯನ್ನು ಸರ್ಕಾರ ರದ್ದುಗೊಳಿಸಿದೆ.
ಇದೇ ವೇಳೆ 2.53 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ನೀಡಿರುವ ವಿಳಾಸದಲ್ಲಿ ಇಲ್ಲ ಎಂಬುದು ಪರಿಶೀಲನೆಯ ವೇಳೆ ಗೊತ್ತಾಗಿದೆ. ಇಂತಹವರು ತಮ್ಮ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಗೆ ತೆರಳಿ ಸೂಕ್ತ ದಾಖಲೆಗಳನ್ನು ನೀಡುವಂತೆ ಇಲಾಖೆ ತಿಳಿಸಿದೆ.
ಇದರ ಜತೆಗೆ ಗ್ರಾಮ ಆಡಳಿತ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ದಾಖಲೆ ತೋರಿಸದವರು, ನೀಡಿರುವ ವಿಳಾಸದಲ್ಲಿ ವಾಸವಿಲ್ಲದವರು ಮತ್ತು ಆದಾಯ ಪ್ರಮಾಣಪತ್ರ ನೀಡದವರನ್ನೂ ಗುರುತಿಸಲಾಗಿದೆ.
ಇದನ್ನೂ ಓದಿ: LPG e-KYC Mandatory: ಎಲ್ಪಿಜಿ ಗ್ರಾಹಕರೇ ಗಮನಿಸಿ: ಆಗಸ್ಟ್ 15ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕ ಬಂದ್!?

ನೋಟಿಸ್ ಬಂದವರಿಗೆ 30 ದಿನ ಅವಕಾಶ
ನೋಟಿಸ್ ಪಡೆದವರು ಗಾಬರಿಯಾಗಬೇಕಾದ ಅಗತ್ಯವಿಲ್ಲ. ತಮ್ಮ ಬಳಿ ಇರುವ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಿಕೊಳ್ಳಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ವಯಸ್ಸಿನ ದೃಢೀಕರಣ, ಆದಾಯ ಪ್ರಮಾಣಪತ್ರ, ವಿಳಾಸದ ದಾಖಲೆ ಮತ್ತು ಹಿಂದಿನ ಪಿಂಚಣಿ ವಿವರಗಳನ್ನು ಸಂಬAಧಪಟ್ಟ ತಹಸೀಲ್ದಾರ್ ಕಚೇರಿಗೆ ಸಲ್ಲಿಸಬೇಕು.
ಕೆಲವರಿಗೆ ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (EDCS) ಮೂಲಕ ಎಸ್ಎಂಎಸ್ ಕೂಡ ಕಳುಹಿಸಲಾಗಿದೆ. ಆದಾಯ ಪ್ರಮಾಣಪತ್ರ ಅಥವಾ ಇತರೆ ಅಗತ್ಯ ದಾಖಲೆಗಳನ್ನು ಕಚೇರಿಗೆ ಸಲ್ಲಿಸುವಂತೆ ಅದರಲ್ಲಿ ತಿಳಿಸಲಾಗಿದೆ.
ಐದು ತಿಂಗಳಿಂದ ಪಿಂಚಣಿ ಬಂದಿಲ್ಲ ಎನ್ನುವ ಅಳಲು
ಸರ್ಕಾರದ ದಾಖಲೆ ಪರಿಶೀಲನೆ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ನಿಜವಾದ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಕೆಲ ಹಿರಿಯ ನಾಗರಿಕರಿಗೆ ಯಾವುದೇ ನೋಟಿಸ್ ಬಂದಿಲ್ಲ. ಮೊಬೈಲ್ಗೆ ಎಸ್ಎಂಎಸ್ ಕೂಡ ಬಂದಿಲ್ಲ. ಆದರೂ ಪಿಂಚಣಿ ಮಾತ್ರ ಖಾತೆಗೆ ಜಮೆಯಾಗುತ್ತಿಲ್ಲ. ಐದು ತಿಂಗಳಿಂದ ಹಣ ಬಂದಿಲ್ಲ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ.
ವಯಸ್ಸಾದವರಿಗೆ ಈ ಪಿಂಚಣಿ ಹಣ ದೊಡ್ಡ ಮೊತ್ತವಾಗಿರದೇ ಇರಬಹುದು. ಆದರೆ ಅವರ ದಿನನಿತ್ಯದ ಬದುಕಿನಲ್ಲಿ ಅದರ ಮಹತ್ವ ಬಹಳಷ್ಟಿದೆ. ಔಷಧಿ, ಊಟ, ಸಣ್ಣಪುಟ್ಟ ಖರ್ಚುಗಳಿಗೆ ಇದೇ ಹಣವನ್ನು ಅವಲಂಬಿಸಿರುವ ಅನೇಕ ಹಿರಿಯರಿದ್ದಾರೆ.
ವಿಶೇಷವಾಗಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿ ತೆಗೆದುಕೊಳ್ಳುವವರಿಗೆ ಪಿಂಚಣಿ ನಿಂತರೆ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ.
ಇದನ್ನೂ ಓದಿ: Crop Insurance Compensation: ರೈತರಿಗೆ ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು | ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ
ದಾಖಲೆ ಪಡೆಯಲು ಕಚೇರಿಗಳಿಗೆ ಅಲೆದಾಟ
ದಾಖಲೆ ಸಲ್ಲಿಸಲು ಮುಂದಾಗಿರುವ ಹಿರಿಯ ನಾಗರಿಕರಿಗೂ ಮತ್ತೊಂದು ಸಮಸ್ಯೆ ಎದುರಾಗಿದೆ. ಆದಾಯ ಪ್ರಮಾಣಪತ್ರ ಪಡೆಯಲು ತಾಲೂಕು ಕಚೇರಿಗಳಿಗೆ ತೆರಳುತ್ತಿರುವ ಕೆಲವರಿಗೆ ವಿವಿಧ ದಾಖಲೆಗಳನ್ನು ಕೇಳಲಾಗುತ್ತಿದೆ.
ಟಿಸಿ, ಅಂಕಪಟ್ಟಿ, ನೋಟರಿ ಸೇರಿದಂತೆ ಹಲವು ದಾಖಲೆಗಳನ್ನು ಒದಗಿಸುವಂತೆ ಕೇಳಲಾಗುತ್ತಿದೆ ಎಂಬ ಆರೋಪಗಳಿವೆ. ವಯಸ್ಸಾದವರು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡುವುದು ಅವರಿಗೆ ಸುಲಭದ ಕೆಲಸವಲ್ಲ.
ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯ ನಾಗರಿಕರಿಗೆ ಈ ಸಮಸ್ಯೆ ಇನ್ನಷ್ಟು ಕಷ್ಟಕರವಾಗಿದೆ. ವಾಹನದ ವ್ಯವಸ್ಥೆ ಇಲ್ಲದವರು ದೂರದ ತಾಲೂಕು ಕಚೇರಿಗೆ ತೆರಳಿ ದಿನವಿಡೀ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ತಪ್ಪಿತಸ್ಥರನ್ನು ಪತ್ತೆಹಚ್ಚಲಿ, ಅರ್ಹರಿಗೆ ತೊಂದರೆ ಕೊಡಬೇಡಿ
ನಕಲಿ ದಾಖಲೆ ನೀಡಿ ಪಿಂಚಣಿ ಪಡೆಯುತ್ತಿರುವವರನ್ನು ಪತ್ತೆಹಚ್ಚುವುದು ಸರ್ಕಾರದ ಜವಾಬ್ದಾರಿ. ಅರ್ಹರಲ್ಲದವರಿಗೆ ಸರ್ಕಾರಿ ಹಣ ಹೋಗುವುದನ್ನು ತಡೆಯುವುದೂ ಅಗತ್ಯ. ಆದರೆ ಈ ಪ್ರಕ್ರಿಯೆಯಲ್ಲಿ ನಿಜವಾದ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಇನ್ನೂ ಮುಖ್ಯ.
ದಾಖಲೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಸುಲಭವಾದ ಅವಕಾಶ ನೀಡಬೇಕು. ವಯಸ್ಸಾದವರು ಕಚೇರಿಗಳಿಗೆ ಅಲೆದಾಡುವ ಬದಲು ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲೇ ದಾಖಲೆ ಪರಿಶೀಲನೆ ನಡೆಸುವ ವ್ಯವಸ್ಥೆ ಮಾಡಬೇಕು.
ಅರ್ಹ ಹಿರಿಯ ನಾಗರಿಕರಿಗೆ ಪಿಂಚಣಿ ಸಿಗುವುದು ಅವರ ಹಕ್ಕು. ಸರ್ಕಾರದ ಪರಿಶೀಲನೆಯ ಉದ್ದೇಶ ನಕಲಿ ಫಲಾನುಭವಿಗಳನ್ನು ತೆಗೆದುಹಾಕುವುದಾಗಿರಬೇಕು; ನಿಜವಾದ ಫಲಾನುಭವಿಗಳನ್ನು ಪಿಂಚಣಿಯಿಂದ ದೂರ ಮಾಡುವುದಾಗಬಾರದು.
ಹೀಗಾಗಿ ನೋಟಿಸ್ ಪಡೆದವರು ಹೆದರುವ ಬದಲು ನೀಡಿರುವ 30 ದಿನಗಳ ಅವಧಿಯೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಉತ್ತಮ. ಅದೇ ಸಮಯದಲ್ಲಿ, ಯಾವುದೇ ನೋಟಿಸ್ ಅಥವಾ ಎಸ್ಎಂಎಸ್ ಬಾರದಿದ್ದರೂ ಪಿಂಚಣಿ ನಿಂತಿರುವ ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಯಲ್ಲಿ ವಿಚಾರಿಸಿ ಕಾರಣ ತಿಳಿದುಕೊಳ್ಳುವುದು ಸೂಕ್ತ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.