KSRTC Employees Salary by HRMS Technology : ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ (Karnataka State Transport Department) ನೌಕರರ ಬಹುದಿನದ ಬೇಡಿಕೆಯಾಗಿದ್ದ ವೇತನ ಪಾವತಿಸುವ ಮಾದರಿಯನ್ನು ಬದಲಾಯಿಸುವ ಬೇಡಿಕೆಯನ್ನು ಸರ್ಕಾರ ಕೊನೆಗೂ ಜಾರಿಗೆ ತಂದಿದೆ. ಇನ್ನು ಮುಂದೆ ಸಾರಿಗೆ ನೌಕರರ ವೇತನವು HRMS ತಂತ್ರಾಂಶದ ಮೂಲಕ ಪಾವತಿಸುವಂತೆ ಕರ್ನಾಟಕ ಸರಕಾರವು ಆದೇಶ ಹೊರಡಿಸಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ…
ಸಾರಿಗೆ ಇಲಾಖೆಯ ನೌಕರರು ಇತರೆ ಸರ್ಕಾರಿ ನೌಕರರಿಗೆ ನೀಡುವಂತೆ ನಮಗೂ ಕೂಡ ಎಚ್ಆರ್ಎಂಎಸ್ ತಂತ್ರಾಂಶದ (HRMS Technology) ಮುಖಾಂತರ ವೇತನ ನೀಡುವಂತೆ 2020ರಿಂದ ಸರ್ಕಾರಕ್ಕೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ.
ಇದೀಗ ರಾಜ್ಯ ಸರ್ಕಾರವು ಇದೇ ಆಗಸ್ಟ್ ತಿಂಗಳಿನಿ೦ದ ಸಾರಿಗೆ ನೌಕರರ ವೇತನವನ್ನು ಈ ಹೊಸ ತಂತ್ರಾಂಶದ ಅಡಿಯಲ್ಲಿ ಪಾವತಿಸಲು ಕ್ರಮ ಕೈಗೊಂಡಿದೆ. ಹಾಗಿದ್ದರೆ ಏನಿದು ಹೊಸ ತಂತ್ರಾಂಶ? ಇದರ ಉಪಯೋಗಗಳೇನು? ಇದರಿಂದ ಸರ್ಕಾರಿ ನೌಕರರಿಗೆ ಆಗುವ ಲಾಭಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಆಗಸ್ಟ್ ತಿಂಗಳಿ೦ದ ಸಾರಿಗೆ ನೌಕರರ ವೇತನ ವ್ಯವಸ್ಥೆ ಬದಲು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಈಗಾಗಲೇ ಹೆಚ್.ಆರ್.ಎಂ.ಎಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ದಾಖಲಾಗುವ ಹಾಜರಾತಿ ಮತ್ತು ರಜಾ ಮಂಜೂರಾತಿಯನ್ವಯ 2024ರ ಆಗಸ್ಟ್ ತಿಂಗಳಿ೦ದ ಕಡ್ಡಾಯವಾಗಿ ಹೆಚ್.ಆರ್.ಎಂ.ಎಸ್ ತಂತ್ರಾಂಶದ ಅಡಿಯಲ್ಲಿ ಸಾರಿಗೆ ನಿಗಮದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ತಯಾರಿಸಿ ಪಾವತಿಸಲು ಕ್ರಮಕೈಗೊಳ್ಳಬೇಕು.
ಹೆಚ್.ಆರ್.ಎಂ.ಎಸ್ ತಂತ್ರಾಂಶ ಹೊರತುಪಡಿಸಿ, ಇತರೇ ಮಾದರಿಯ ವೇತನ ಬಿಲ್ಲುಗಳನ್ನು ತಯಾರಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಘಟಕ, ವಿಭಾಗ, ಪ್ರಾದೇಶಿಕ ಕಾರ್ಯಾಗಾರ ಹಾಗೂ ಕೇಂದ್ರ ಕಛೇರಿಗಳಲ್ಲಿ ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ವೇತನ ಬಿಲ್ಲುಗಳನ್ನು ತಯಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕರು ಕಳೆದ ಆಗಸ್ಟ್ 06ರಂದು ಆದೇಶ ಹೊರಡಿಸಿದ್ದಾರೆ.

ಏನಿದು ಹೆಚ್.ಆರ್.ಎಂ.ಎಸ್ ತಂತ್ರಾಂಶ?
ಈ ಹೊಸ HRMS ತಂತ್ರಾಂಶದ ಪೂರ್ಣಾರ್ಥ Human Resource Management System ಎಂದು. ಇದನ್ನು ಕನ್ನಡದಲ್ಲಿ ‘ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ’ ಎಂದು ಕರೆಯಲಾಗುತ್ತದೆ. ಇದರ ಸೌಲಭ್ಯದಿಂದ ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮುಖಾಂತರ ನೋಂದಣಿಯಾಗಿ ನೇರವಾಗಿ ತಮ್ಮ ಪೇ ಸ್ಲಿಪ್ (Pay Slip) ಅನ್ನು ಪಡೆಯಲು ಅವಕಾಶವಿದೆ.
ಸರ್ಕಾರದ ಈ ವ್ಯವಸ್ಥೆಯ ಸೌಲಭ್ಯಗಳೇನು?
ಸರ್ಕಾರಿ ನೌಕರರು ಈ ಹೊಸ ತಂತ್ರಾಂಶದ ಮುಖಾಂತರ ವೇತನ ಪಡೆಯುವುದರಿಂದ ಹಲವು ಪ್ರಯೋಜನಗಳಿದ್ದು ಇದರಿಂದ ನೌಕರರು ತಮ್ಮ ರಜೆಯನ್ನು ವೀಕ್ಷಿಸಬಹುದು ಹಾಗೂ ಸಾಲ ಅಥವಾ ಮುಂಗಡದ ವಿವರಗಳನ್ನು ಕೂಡ ನೋಡಬಹುದು. ಸರ್ಕಾರಿ ನೌಕರರ ವೇತನದಲ್ಲಿ ಕಡಿತಗಳಾಗುವ ಆದಾಯ ತೆರಿಗೆ (Income Tax), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ ಹಾಗೂ ಮುಂತಾದವುಗಳನ್ನು ಇದರಲ್ಲಿ ಸುಲಭವಾಗಿ ವೀಕ್ಷಿಸಬಹುದು.
ಈ ತಂತ್ರಾಂಶವು ನೌಕರರು ಆಫೀಸಿಗೆ 50 ಮೀಟರ್ ದೂರ ಇರುವಾಗಲೇ ಸ್ವಯಂ ಚಾಲಿತವಾಗಿ ಲಾಗಿನ್ ಆಗುತ್ತದೆ ಹಾಗೂ 50 ಮೀಟರ್ ದೂರ ಹೋದರೆ ಸ್ವಯಂ ಚಾಲಿತ ಲಾಗ್ ಔಟ್ ಆಗುತ್ತದೆ. ಈ ತಂತ್ರಾಂಶದ ಮುಖಾಂತರ ನೌಕರರ ದಾಖಲಾಗುವ ಹಾಜರಾತಿ ಮತ್ತು ರಜೆ ಮಂಜೂರಾತಿಯನ್ನು ಸಹ ವೀಕ್ಷಿಸಲು ಅವಕಾಶವಿದ್ದು ಇದರ ಅನ್ವಯ ಸರ್ಕಾರಿ ನೌಕರರಿಗೆ ವೇತನವನ್ನು ಪಾವತಿಸಲಾಗುತ್ತದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.