Karnataka Arogya Sanjeevini Scheme : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹತ್ವದ ಮೂರು ಬೇಡಿಕೆಗಳ ಪೈಕಿ ರಾಜ್ಯ ಸರ್ಕಾರ ಈಗಾಗಲೇ 7ನೇ ವೇತನ ಆಯೋಗದ (7th Pay Commission) ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಅದೇ ರೀತಿ ಇನ್ನೊಂದು ಪ್ರಮುಖ ಬೇಡಿಕೆಯಾದ ಹೊಸ ಪಿಂಚಣಿ ರದ್ದುಗೊಳಿಸಿ ಹೊಸ ಪಿಂಚಣಿ ಯೋಜನೆಯನ್ನು (New Pension Scheme – NPS) ಮರುಸ್ಥಾಪಿಸುವ ಪ್ರಯತ್ನ ಕೂಡ ನಡೆಯುತ್ತಿದೆ.
ಏತನ್ಮಧ್ಯೆ ಸರ್ಕಾರಿ ನೌಕರರ 3ನೇ ಬೇಡಿಕೆಯಾದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (Karnataka Arogya Sanjeevini Scheme – KASS) ಜಾರಿ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದ್ದು; ಸದರಿ ಯೋಜನೆ ಆಗಸ್ಟ್ ತಿಂಗಳಲ್ಲಿ ಜಾರಿಗೊಳಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿರುತ್ತದೆ ಎಂಬ ಮಾಹಿತಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಹೇಳಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ? ಮೊಬೈಲ್’ನಲ್ಲೇ ಚೆಕ್ ಮಾಡಿ… 7th Pay Commission Calculation
ಆರೋಗ್ಯ ಸಂಜೀವಿನ ಜಾರಿ ಭರವಸೆ
ಕಳೆದ ಜುಲೈ 23ರಂದು ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳ ಸಭೆ ನಡೆದಿದ್ದು; ಈ ಸಭೆಯಲ್ಲಿ 29-07-2024 ರಿಂದ ನಡೆಸಲು ಉದ್ದೇಶಿಸಿದ್ದ ಮುಷ್ಕರ ಮುಂದೂಡಿಕೆ, ಸಿಎಂ, ಡಿಸಿಎಂಗೆ ಸನ್ಮಾನ, ರಾಜ್ಯ 7ನೇ ವೇತನ ಆಯೋಗದ ವರದಿ ಅನುಷ್ಠಾನ ಹಾಗೂ ಹೊಸ ಪಿಂಚಣಿ ಮತ್ತು ಹಳೇ ಪಿಂಚಣಿ ಯೋಜನೆ ಕುರಿತಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಈ ಪೈಕಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಇದೇ ಆಗಸ್ಟ್ ತಿಂಗಳಲ್ಲಿ ಯೋಜನೆಯನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿರುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರಟಣೆಯ ಮೂಲಕ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ವೃಂದ ಸಂಘಗಳ ಪದಾಧಿಕಾರಿಗಳ ಗಮನಕ್ಕೆ ತಂದಿದೆ.
ಹಾಗಾದರೆ, ಏನಿದು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ? ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಆಗುವ ಪ್ರಯೋಜನವೇನು? ಯಾರೆಲ್ಲ ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…

ಸರ್ಕಾರಿ ನೌಕರರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ
‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯು ಸರ್ಕಾರಿ ನೌಕರರ ಮಟ್ಟಿಗೆ ಜೀವದಾಯಿ ಯೋಜನೆ ಎಂದರೆ ತಪ್ಪಾಗಲಾರದು. ಈ ಯೋಜನೆಯಡಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಅಂದರೆ ಸಂಪೂರ್ಣ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿದೆ.
2021ರ ರಾಜ್ಯ ಬಜೆಟ್’ನಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಘೋಷಿಸಲಾಗಿತ್ತು. ಕರ್ನಾಟಕ ರಾಜ್ಯ ಸಚಿವ ಸಮಿತಿಯು 2021ರ ಜುಲೈ 22ರಂದು ಈ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿತ್ತು.
ಕೋವಿಡ್ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ತಾತ್ಕಾಲಿಕವಾಗಿ ಅನ್ವಯವಾಗಿದ್ದ ಈ ಯೋಜನೆ ಆನಂತರ ಸ್ಥಗಿತಗೊಂಡಿದೆ. ಇದನ್ನು ಮತ್ತೆ ಜಾರಿಸಬೇಕು ಎಂದು ನೌಕರರು ಆಗ್ರಹಿಸುತ್ತ ಬಂದಿದ್ದು; ಇದೀಗ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿದೆ.
ಉಚಿತ ಚಿಕಿತ್ಸೆಗೆ ಯಾರೆಲ್ಲ ಅರ್ಹರು?
ಕರ್ನಾಟಕ ಆರೋಗ್ಯ ಸಂಜೀವನಿ ಯೋಜನೆಯು ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡಿರುತ್ತದೆ. ನಗದು ರಹಿತ ವೈದ್ಯಕೀಯ ಚಿಕಿತ್ಸೆಯನ್ನು ರಾಜ್ಯ ನೌಕರರು ಮತ್ತು ಅವರ ಕುಟುಂಬಗಳಿಗೆ ನೀಡಲಾಗುತ್ತದೆ.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳು ನಗದು ರಹಿತ ಅಥವಾ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಈ ಯೋಜನೆ ಅನುಕೂಲಕರವಾಗಿದ್ದು; ಚಿಕಿತ್ಸೆಯ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವು ಭರಿಸಲಿದೆ.

ಯಾವೆಲ್ಲ ಕಾಯಿಲೆಗಳಿಗೆ ಚಿಕಿತ್ಸೆ?
ಮಾರಣಾಂತಿಕ ಕಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ನರ ಶಸ್ತ್ರಚಿಕಿತ್ಸೆ, ಯುರಾಲಜಿ, ಸುಟ್ಟ ಪ್ರಕರಣ, ಪಾಲಿ ಟ್ರಾಮಾ ಪ್ರಕರಣ, ಮಕ್ಕಳ ಮತ್ತು ನವಜಾತ ಮಕ್ಕಳ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಖಾಯಿಲೆಗಳು ಈ ಯೋಜನೆಯಡಿ ಒಳಗೊಳ್ಳುತ್ತವೆ.
ಸರಕಾರಿ ಹಾಗೂ ಸರಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆದೇಶದಲ್ಲಿ ಸರಕಾರ ಸೂಚಿತ ತುರ್ತು ಸಂದರ್ಭದಲ್ಲಿ ನೋಂದಾಯಿತವಲ್ಲದ ಆರೋಗ್ಯ ಸಂಸ್ಥೆಗಳಲ್ಲೂ ಚಿಕಿತ್ಸೆ ಪಡೆದು ಸಿಜಿಎಚ್ಎಸ್ ದರಪಟ್ಟಿ ಅನ್ವಯ ಆಯಾ ಇಲಾಖಾ ಹಂತದಲ್ಲಿ ಮಂಜೂರಾತಿ ಪಡೆಯಲು ತಿಳಿಸಿದೆ.
ಇದೇ ಆಗಸ್ಟ್ ತಿಂಗಳಿAದ ‘ಆರೋಗ್ಯ ಸಂಜೀವಿನಿ ಯೋಜನೆ” ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಜಾರಿ ನಂತರ ಒಟ್ಟಾರೆ ಯೋಜನೆಯಲ್ಲಿ ಇನ್ನಷ್ಟು ಮಾರ್ಪಾಡುಗಳು ಆಗಲಿದ್ದು; ಈ ಕುರಿತ ನಿರಂತರ ಅಪ್ಡೇಟ್’ಗಾಗಿ ಮಾಹಿತಿಮನೆ ಫಾಲೋ ಮಾಡಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.