ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ನಿವೇಶನಗಳನ್ನು (Rural Property) ಸಕ್ರಮಗೊಳಿಸಲು (E-Swathu) ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಾವಿರಾರು ಮನೆಗಳು ಇಂದಿಗೂ ಸರಿಯಾದ ದಾಖಲೆಗಳಿಲ್ಲದೇ, ತಮ್ಮದೇ ಆದ ಮನೆಗಳಲ್ಲಿ ವಾಸವಿದ್ದರೂ ಕೂಡ ಕಾನೂನು ಮಾನ್ಯತೆ ಇಲ್ಲದೆ ಬದುಕು ನಡೆಸುತ್ತಿದ್ದಾರೆ. ಇಂತಹ ಆಸ್ತಿಗಳಿಗೆ ಸರಿಯಾದ ದಾಖಲೆ ನೀಡುವ ಉದ್ದೇಶದಿಂದ ಆರಂಭಗೊAಡ ‘ಇ-ಸ್ವತ್ತು’ (E-Swathu) ಯೋಜನೆಯು ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕುರಿತು ಪರಿಹಾರ ಶೋಧಿಸಲು ಇತ್ತೀಚೆಗೆ ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.
ಇ-ಸ್ವತ್ತು ಸಮಸ್ಯೆಗೆ ಪರಿಹಾರ
ಸದರಿ ಸಮಿತಿಯು ಮೇ 5ರಂದು ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ಇ-ಸ್ವತ್ತು ಯೋಜನೆಯಡಿ ದಾಖಲೆ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಈ ಕೆಳಕಂಡ ಪ್ರಶ್ನೆಗಳಿಗೆ ಗಂಭೀರ ಚರ್ಚೆ ನಡೆಸಲಾಗಿದೆ:
- ಈಗಾಗಲೇ ಕಟ್ಟಡಗಳು ನಿರ್ಮಾಣವಾಗಿರುವ ಆದರೆ ದಾಖಲೆಗಳಿಲ್ಲದ ಆಸ್ತಿಗಳಿಗೆ ಕಾನೂನುಬದ್ಧ ಹಕ್ಕು ನೀಡುವುದು ಹೇಗೆ?
- ಸರ್ಕಾರಿ ಜಾಗ, ಅರಣ್ಯ ಮತ್ತು ಕೃಷಿ ಭೂಮಿಗಳಲ್ಲಿ ನಿರ್ಮಿಸಿದೆ ಮನೆಗಳಿಗೆ ಪರಿಹಾರ ರೂಪಿಸುವುದು ಹೇಗೆ?
- ಹಿಂದಿನ ದಿನಗಳಲ್ಲಿ ನೀಡಲಾದ ಹಕ್ಕುಪತ್ರಗಳ ಮಾನ್ಯತೆ ಮತ್ತು ಅದರ ಸಮಸ್ಯೆಗಳಿಗೆ ತೀರ್ಮಾನ ಕಾಣುವುದು ಹೇಗೆ?
Post office Savings Schemes- 100% ಗ್ಯಾರಂಟಿ ಲಾಭ ತರುವ ಪೋಸ್ಟ್ ಆಫೀಸ್ ಸ್ಕೀಮುಗಳು | ಸಂಪೂರ್ಣ ಮಾಹಿತಿ ಇಲ್ಲಿದೆ…
ಬಿ ಖಾತೆ, 11ಬಿ, 9, 11 ದಾಖಲೆಗಳ ಕುರಿತು ಸ್ಪಷ್ಟತೆ: ಗ್ರಾಮ ಪಂಚಾಯತ್ ವ್ಯಾಪ್ತಿಯ ಆಸ್ತಿಗಳಿಗೆ ನೀಡಬೇಕಾದ ದಾಖಲೆಗಳ ಪ್ರಮಾಣಿತ ಕ್ರಮಗಳ ಕೊರತೆಯಿಂದ ಹಲವರು ತಮ್ಮ ಆಸ್ತಿಗೆ ಸರಿಯಾದ ದಾಖಲೆ ಪಡೆಯಲು ಪರದಾಡುತ್ತಿದ್ದಾರೆ. ಯಾವ ಆಸ್ತಿಗೆ ಯಾವ ಹಕ್ಕುಪತ್ರ ನೀಡಬೇಕು ಎಂಬ ಬಗ್ಗೆ ಸಮಿತಿ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಮಾರ್ಗಸೂಚಿ ರೂಪಿಸುವ ನಿರೀಕ್ಷೆಯಿದೆ.
ಹಿಂದಿನ ಹಕ್ಕುಪತ್ರಗಳ ಮಾನ್ಯತೆ: ಕೆಲ ವರ್ಷಗಳ ಹಿಂದೆ ಕೆಲವು ಗ್ರಾಮ ಪಂಚಾಯತಿಗಳು ಗ್ರಾಮಸ್ಥರಿಗೆ ಹಕ್ಕುಪತ್ರ ನೀಡಿದ್ದರೂ, ಈಗ ಕೇಂದ್ರ ಇ-ಸ್ವತ್ತು ಯೋಜನೆಯಡಿಯಲ್ಲಿ ಅವುಗಳನ್ನು ಮಾನ್ಯ ಮಾಡುವುದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಸಭೆಯಲ್ಲಿ ಈ ಹಕ್ಕುಪತ್ರಗಳ ಸ್ಥಿತಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ.

94ಸಿ ಮತ್ತು 94ಸಿಸಿ ಅಡಿಯಲ್ಲಿ ಪರಿಹಾರ: ಸರ್ಕಾರಿ ಜಾಗಗಳಲ್ಲಿ ನಿರ್ಮಿಸಿದ ಮನೆಗಳಿಗೆ 94ಸಿ ಮತ್ತು 94ಸಿಸಿ ಅಡಿಯಲ್ಲಿ ಕಂದಾಯ ಇಲಾಖೆ ಹಕ್ಕುಪತ್ರ ನೀಡಲು ಕ್ರಮ ಕೈಗೊಂಡಿದೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಕಾನೂನಾತ್ಮಕ ಭದ್ರತೆ ಸಿಗುವ ನಿರೀಕ್ಷೆಯಿದೆ.
ಅನುಮೋದನೆ ಇಲ್ಲದೇ ನಿರ್ಮಿಸಿದ ವಸತಿ ಪ್ರದೇಶಗಳ ವಿವಾದ: ಕೃಷಿ ಭೂಮಿಯನ್ನು ಬೇಸಾಯವಲ್ಲದ ಉಪಯೋಗಕ್ಕೆ ಪರಿವರ್ತಿಸಿ, ಅನುಮೋದನೆ ಇಲ್ಲದೇ ವಸತಿಯಾಗಿ ಬಳಸಿದ ಪ್ರಕರಣಗಳು ಹೆಚ್ಚಾಗಿವೆ. ಇವುಗಳಲ್ಲಿ ಈಗಾಗಲೇ ರಸ್ತೆ, ವಿದ್ಯುತ್ ಮುಂತಾದ ಮೂಲಸೌಕರ್ಯ ಒದಗಿಸಲಾಗಿದೆ. ಇವುಗಳಿಗೆ ಹೇಗೆ ಕಾನೂನಾತ್ಮಕ ಸ್ಥಿತಿ ನೀಡುವುದು ಎಂಬುದರ ಬಗ್ಗೆ ಪ್ರಾಥಮಿಕ ಚರ್ಚೆ ನಡೆದಿದೆ.
ಅರಣ್ಯ ಹಾಗೂ ಕಂದಾಯ ಗಡಿ ವಿವಾದಗಳು: ಕೆಲವು ಗ್ರಾಮಗಳಲ್ಲಿನ ಆಸ್ತಿಗಳು ಅರಣ್ಯ ಅಥವಾ ಕಂದಾಯ ಇಲಾಖೆ ಗಡಿಯಲ್ಲಿ ಒಳಪಟ್ಟಿರಬಹುದು. ಇಂತಹ ಗಡಿಭಾಗದ ಮನೆಗಳಿಗೆ ಸ್ಪಷ್ಟತೆಯಿಲ್ಲದ ಕಾರಣದಿಂದ ಹಕ್ಕುಪತ್ರಗಳ ಬಿಡುಗಡೆ ಅಸಾಧ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಸಮನ್ವಯದ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಈ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ತಜ್ಞರು, ಪ್ರಾದೇಶಿಕ ಆಡಳಿತಗಾರರು ಹಾಗೂ ಯೋಜನಾ ವಿಶ್ಲೇಷಕರು ಭಾಗವಹಿಸಿದ್ದು, ಪ್ರಮುಖ ಸದಸ್ಯರಾಗಿ ಕೆ.ಜಿ. ಜಗದೀಶ್, ವಿಜಯ ಅಜೂರೆ, ಶಿವಶಂಕರ್ ಪಿ, ಬಸವರಾಜು ಶರಬಯ್ಯ, ಆಶಾ ಎಂ.ಜೆ., ಸಿದ್ದರಾಜು, ಪ್ರಭಾಕರ್ ಎನ್. ಭಟ್, ಚಾಲುಕ್ಯ ಭಾರವಿ, ಯಶವಂತ ಬೆಳಡ ಮೊದಲಾದವರು ಸೇರಿದ್ದಾರೆ. ಒಟ್ಟು 12 ಸದಸ್ಯರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಶೀಘ್ರದಲ್ಲಿಯೇ ದಾಖಲೆ ರಹಿತ ಸ್ವತ್ತುಗಳು ಸಕ್ರಮ
ಇ-ಸ್ವತ್ತು ಯೋಜನೆ ಗ್ರಾಮೀಣ ಭಾಗದಲ್ಲಿ ಆಸ್ತಿಗಳನ್ನು ಡಿಜಿಟಲ್ಗೊಳಿಸುವ ಮಹತ್ವದ ಹೆಜ್ಜೆಯಾಗಿದೆ. ಆದರೆ, ಹಲವು ಸಮಸ್ಯೆಗಳು ಎದುರಾಗಿವೆ. ಈ ಸಮಸ್ಯೆಗಳ ಪರಿಹಾರದ ಪ್ರಾಥಮಿಕ ಹಂತವಾಗಿ ಸಮಿತಿಯ ಸಭೆ ನೆರವೇರಿದೆ. ಮುಂದಿನ ದಿನಗಳಲ್ಲಿ ಈ ಸಮಿತಿ ನೀಡಲಿರುವ ಶಿಫಾರಸುಗಳು ಮಹತ್ವದ ಬದಲಾವಣೆಗಳಿಗೆ ಚಾಲನೆ ನೀಡಲಿವೆ.
ಈಗ ನಡೆದಿರುವ ಸಭೆಯು ಬಡವರ ಮನೆಗಳಿಗೆ ಕಾನೂನು ಹಕ್ಕು ನೀಡುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿವಿಧ ಇಲಾಖೆಗಳ ಮಧ್ಯೆ ಸೂಕ್ತ ಸಂವಹನ ನಡೆದರೆ, ಇಂತಹ ಮನೆಗಳಿಗೆ ಸರಿಯಾದ ದಾಖಲೆ ಸಿಗಲು ಸಾಧ್ಯವಾಗುತ್ತದೆ. ಇದರಿಂದ ಆಸ್ತಿಯ ಮೇಲೆ ಸಾಲ ಪಡೆಯುವುದು, ಮಾರಾಟ ಅಥವಾ ಬದಲಿ ಮಾಡುವುದು, ಸರಕಾರಿ ಸೌಲಭ್ಯ ಪಡೆಯುವುದು ಸುಲಭವಾಗಲಿದೆ.