ರಾಜ್ಯ ಸರ್ಕಾರವು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿ-ಮೇಕೆ ಸಾಕಾಣಿಕೆ ಹಲವು ಸಬ್ಸಿಡಿ ಯೋಜನೆಗಳನ್ನು (Sheep and Goat Subsidy Scheme) ಜಾರಿಗೊಳಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕದಲ್ಲಿ ಕೃಷಿಯೊಂದಿಗೆ ಪಶುಸಂಗೋಪನೆಯೂ ಕೂಡಾ ಗ್ರಾಮೀಣ ಆರ್ಥಿಕತೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಕುರಿ ಹಾಗೂ ಮೇಕೆ ಸಾಕಾಣಿಕೆ ಗ್ರಾಮೀಣ ಜನತೆಗೆ ಸ್ಥಿರ ಆದಾಯದ ಮೂಲವಾಗಿದೆ. ಈ ಹಿನ್ನಲೆಯಲ್ಲಿ ಕುರಿ-ಮೇಕೆ ಸಾಕಾಣಿಕೆದಾರರಿಗೆ ಹಲವು ಸಬ್ಸಿಡಿ ಯೋಜನೆಗಳನ್ನು ಜಾರಿಗೊಳಿಸಿದೆ.
ರಾಜ್ಯ ಸರಕಾರದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತವು ಹಲವಾರು ಆರ್ಥಿಕ ನೆರವು ಹಾಗೂ ಸಹಾಯಧನ ಯೋಜನೆಗಳನ್ನು ಜಾರಿಯಲ್ಲಿವೆ. ಈ ಯೋಜನೆಗಳ ಸದುಪಯೋಗದಿಂದ ನೂರಾರು ಕುರಿಗಾರರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಂಡಿದ್ದಾರೆ.
Ashlesha Male- ವಾಯುಭಾರ ಕುಸಿತ: ರಾಜ್ಯದಲ್ಲಿ ಒಂದು ವಾರ ವ್ಯಾಪಕ ಮಳೆ
1. ಕುರಿ ದೊಡ್ಡಿ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ
ಆರ್ಥಿಕವಾಗಿ ಹಿಂದುಳಿದ ವರ್ಗದ ಕುರಿಗಾರರಿಗೆ ನಿಗಮವು ಸುಸಜ್ಜಿತ ವಸತಿ ಸೌಲಭ್ಯದ ಉದ್ದೇಶದಿಂದ ಕುರಿ ದೊಡ್ಡಿ ನಿರ್ಮಿಸಲು ₹5,00,000 ರೂ. ಸಹಾಯಧನ ನೀಡುತ್ತದೆ. ಇದರಿಂದ ಕುರಿ-ಮೇಕೆಗಳಿಗಾಗಿ ಸುರಕ್ಷಿತ ಮತ್ತು ವೈಜ್ಞಾನಿಕ ನಿರ್ವಹಣೆಯ ನಿಲಯ ನಿರ್ಮಿಸಲು ಅನುಕೂಲವಾಗುತ್ತದೆ.
2. ವಲಸೆ ಕುರಿಗಾರರಿಗೆ ವಿಮಾ ಸೌಲಭ್ಯ
ವಲಸೆ ಕುರಿಗಾರರು ಆಕಸ್ಮಿಕವಾಗಿ ಮರಣ ಹೊಂದಿದರೆ, ಅವರ ಕುಟುಂಬದ ಆರ್ಥಿಕ ಸಂಕಷ್ಟವನ್ನು ತಗ್ಗಿಸಲು ₹5 ಲಕ್ಷ ರೂಪಾಯಿಯ ವಿಮಾ ಸಹಾಯಧನ ಒದಗಿಸಲಾಗುತ್ತದೆ.
3. ಆಕಸ್ಮಿಕ ಮರಣಕ್ಕೆ ಅನುಗ್ರಹ ನೆರವು ಯೋಜನೆ
ಆರು ತಿಂಗಳ ಮೇಲ್ಪಟ್ಟ ಕುರಿ/ಮೇಕೆ ಆಕಸ್ಮಿಕ ಅಥವಾ ರೋಗದಿಂದ ಸತ್ತರೆ ಮಾಲೀಕರಿಗೆ ₹5,000 ಪರಿಹಾರ ಸಿಗುತ್ತದೆ. 3-6 ತಿಂಗಳ ವಯಸ್ಸಿನ ಕುರಿ/ಮೇಕೆಗೆ ₹3,500 ಪರಿಹಾರ ಲಭ್ಯ.
4. ಉಚಿತ ವೈಜ್ಞಾನಿಕ ತರಬೇತಿ ಮತ್ತು ಔಷಧೋಪಚಾರ
ನಿಗಮದ ಮೂಲಕ ನೋಂದಾಯಿತ ಕುರಿ ಸೊಸೈಟಿಗಳ ಸದಸ್ಯರಿಗೆ ಉಚಿತವಾಗಿ ಕುರಿ ಸಾಕಾಣಿಕೆ ಕುರಿತು ವೈಜ್ಞಾನಿಕ ತರಬೇತಿ ನೀಡಲಾಗುತ್ತದೆ.ಜೊತೆಗೆ ಜಂತು ನಾಶಕ ಔಷದಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಉಚಿತ ಔಷಧಿ, ಲಸಿಕೆ ಒದಗಿಸಲಾಗುತ್ತಿದೆ.

5. ತಳಿ ಅಭಿವೃದ್ಧಿ ಮತ್ತು ಸಾಧನಗಳ ವಿತರಣೆ
ಮಿಶ್ರ ತಳಿ ಟಗರುಗಳ ವಿತರಣೆಯೊಂದಿಗೆ ತೂಕದ ಅಳೆಯುವ ಯಂತ್ರ (Weighing Scales) ವಿತರಣೆ, ವಲಸೆ ಕುರಿಗಾರರಿಗೆ ಟೆಂಟ್, ಸೌರಟಾರ್ಚ್, ರಬ್ಬರ್ ಪ್ಲೂರ್ ಮ್ಯಾಟ್, ರೇನ್ ಕೋಟ್ ಇತ್ಯಾದಿಗಳ ಕಿಟ್ಗಳನ್ನು ಒದಗಿಸಲಾಗುತ್ತಿದೆ.
Dairy Farming Subsidy- ಹಸು-ಎಮ್ಮೆ ಖರೀದಿಗೆ ₹1.25 ಲಕ್ಷ ಸಹಾಯಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ
6. 10+1 ಕುರಿ-ಮೇಕೆ ಸಾಕಾಣಿಕೆ ಘಟಕ
ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ 10 ಕುರಿ + 1 ಟಗರು ಘಟಕಗಳನ್ನು ಸಹಾಯಧನದೊಂದಿಗೆ ವಿತರಿಸಲಾಗುತ್ತದೆ. ಇದರಲ್ಲಿ ನಿಗಮದ ಸಹಭಾಗಿತ್ವವೂ ಇರುತ್ತದೆ.
7. ಅಮೃತ ಸ್ವಾಭಿಮಾನಿ ಯೋಜನೆ
20 ಕುರಿ/ಮೇಕೆ + 1 ಟಗರು ಘಟಕ ಸ್ಥಾಪನೆಗೆ ಪ್ರತಿ ಫಲಾನುಭವಿಗೆ ₹1.75 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯು ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ಸಹಭಾಗಿತ್ವದೊಂದಿಗೆ ಜಾರಿಗೆ ಬಂದಿದೆ.
ಯಾರು ಅರ್ಹರು?
ರಾಜ್ಯದ ಪ್ರತಿ ಹೋಬಳಿಯಲ್ಲಿ ಕನಿಷ್ಠ 15,000 ಕುರಿ/ಮೇಕೆಗಳಿಗೊಂದು ಸಹಕಾರ ಸಂಘ ಇರುವಂತೆ, ರಾಜ್ಯದಾದ್ಯಂತ 625 ಸಂಘಗಳು ಇವೆ. ಹೀಗೆ ನಿಗಮದ ಮೂಲಕ ಸ್ಥಾಪಿತ ‘ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ’ದ ಸದಸ್ಯರು ಮಾತ್ರ ಈ ಯೋಜನೆಗಳಿಗೆ ಅರ್ಹರಾಗಿರುತ್ತಾರೆ.
ಅರ್ಜಿ ಹೇಗೆ ಸಲ್ಲಿಸಬೇಕು?
ನಿಗಮದ ಯೋಜನೆಗಳ ಅನುದಾನದ ಲಭ್ಯತೆ ಅನುಸಾರವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅರ್ಜಿ ಆಹ್ವಾನ ಪ್ರಕಟಣೆ ಹೊರಡಿಸಲಾಗುತ್ತದೆ. ಅರ್ಹ ಫಲಾನುಭವಿಗಳು ತಮ್ಮ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಅಥವಾ ಪಶುಸಂಗೋಪನೆ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಸರಕಾರದ ಈ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಂಡು, ನವೀನ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸಾಕಾಣಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ, ಕುರಿ-ಮೇಕೆ ಸಾಕಾಣಿಕೆದಾರರು ಅಭಿವೃದ್ಧಿ ಪಥದಲ್ಲಿ ಸಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸ್ಥಳೀಯ ಪಶುಸಂಗೋಪನೆ ಇಲಾಖೆ ಕಚೇರಿ ಅಥವಾ ನಿಮ್ಮ ಹತ್ತಿರದ ಸಹಕಾರ ಸಂಘದ ಕಾರ್ಯದರ್ಶಿಯನ್ನು ಸಂಪರ್ಕಿಸಿ. ಕುರಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕರ ಸಂಪರ್ಕಕ್ಕೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ವೆಬ್ಸೈಟ್ ಲಿಂಕ್: kswdcl.karnataka.gov.in