ಕರ್ನಾಟಕದ 7,49,420 ರೈತರಿಗೆ ಪಿಎಂ ಕಿಸಾನ್ (PM-KISAN) ಹಣ ಸ್ಥಗಿತವಾಗಿದ್ದು; ಕೇಂದ್ರ ಕೃಷಿ, ರೈತರ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN)’ ಯೋಜನೆ ಅಡಿಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲಾ ಅರ್ಹ ರೈತರಿಗೆ ವರ್ಷಕ್ಕೆ ₹6,000 ನಗದು ಸಹಾಯವನ್ನು ಮೂರು ಕಂತುಗಳಾಗಿ ನೀಡಲಾಗುತ್ತದೆ.
ಈ ಯೋಜನೆಯಡಿ ಈಚೆಗೆ ಲಕ್ಷಾಂತರ ಅನರ್ಹರು ಹಣ ಪಡೆಯುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಹಿನ್ನಲೆಯಲ್ಲಿ ಲಕ್ಷಾಂತರ ರೈತರ ಖಾತೆಗಳನ್ನು ಬಂದ್ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಫಲಾನುಭವಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.
Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…
7.19 ಲಕ್ಷ ರೈತರಿಗೆ ಹಣ ಬಂದ್
ದೇಶಾದ್ಯಂತ ಅನರ್ಹ ರೈತರ ಖಾತೆಗಳನ್ನು ಸ್ಥಗಿತಗೊಳಿಸುತ್ತಿರುವ ಕೇಂದ್ರ ಕೃಷಿ, ರೈತರ ಕಲ್ಯಾಣ ಸಚಿವಾಲಯವು ಕರ್ನಾಟಕದಲ್ಲಿ 2020ರಿಂದ 2025ರ ವರೆಗೆ ಒಟ್ಟು 7,19,420 ರೈತರನ್ನು ಯೋಜನೆಯಿಂದ ಹೊರಗಿಟ್ಟಿದೆ. ಕಂತುವಾರು ಹೊರಗುಳಿದ ರೈತರ ಅಂಕಿ-ಅಂಶ ಈ ಕೆಳಗಿನಂತಿದೆ:
- 5ನೇ ಕಂತು (2020 ಏಪ್ರಿಲ್-ಜುಲೈ): ₹1,033 ಕೋಟಿ ಹಣ 51,44,512 ರೈತರಿಗೆ ಪಾವತಿಯಾಗಿದೆ.
- 6ನೇ ಕಂತು (2020 ಆಗಸ್ಟ್-ನವೆಂಬರ್): ₹1,061 ಕೋಟಿ ಹಣ 52,19,763 ರೈತರಿಗೆ ಹಂಚಿಕೆಯಾಯಿತು.
- 19ನೇ ಕಂತು (2025 ಡಿಸೆಂಬರ್-ಮಾರ್ಚ್): ₹897 ಕೋಟಿ ಹಣ 43,95,092 ರೈತರಿಗೆ ಮಾತ್ರ ಪಾವತಿಯಾಗಿದೆ.
5ನೇ ಕಂತಿನಿಂದ 19ನೇ ಕಂತಿನ ವೇಳೆಗೆ 7,19,420 ಖಾತೆಗಳು ಸ್ಥಗಿತಗೊಂಡಿವೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
416 ಕೋಟಿ ರೂ. ಮರು ವಸೂಲಿ
ಪಿಎಂ ಕಿಸಾನ್ ಯೋಜನೆಯಡಿ ಈ ತನಕ ಒಟ್ಟು 19 ಕಂತುಗಳಲ್ಲಿ ಬರೋಬ್ಬರಿ 3.68 ಲಕ್ಷ ಕೋಟಿ ರೂ. ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ರೈತರ ಹೆಸರಲ್ಲಿ ಅರ್ಹತೆ ಇಲ್ಲದವರ ಖಾತೆಗಳಿಗೆ ಹಣ ಪಾವತಿಯಾಗಿದ್ದು, ಅದರಲ್ಲಿ ಈವರೆಗೆ 416 ಕೋಟಿ ರೂ. ಮರು ವಸೂಲಿ ಮಾಡಲಾಗಿದೆ.
ಪ್ರೋತ್ಸಾಹಧನ ಸ್ಥಗಿತಗೊಂಡಿರುವ ಬಹುತೇಕ ರೈತರು ತೆರಿಗೆ ಪಾವತಿದಾರರಾಗಿದ್ದಾರೆ. ಇವರಿಗೆ ಈವರೆಗೆ ಸಂದಾಯವಾಗಿರುವ ಹಣವನ್ನು ಮರು ವಸೂಲಿ ಮಾಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ, ಆಯಾ ರಾಜ್ಯಗಳಿಗೆ ಕೊಟ್ಟಿದ್ದು, ವಸೂಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಖಾತೆ ಡಿಲೀಟ್ಗೆ ಕಾರಣಗಳೇನು?
ಪಿಎಂ ಕಿಸಾನ್ ಯೋಜನೆ ಪ್ರೋತ್ಸಾಹಧನ ಸ್ಥಗಿತಕ್ಕೆ ಹಲವು ಕಾರಣಗಳಿದ್ದು, ಕೇಂದ್ರ ಕೃಷಿ, ರೈತರ ಕಲ್ಯಾಣ ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ ರೈತರ ಹೆಸರಿನಲ್ಲಿ ಪ್ರೋತ್ಸಾಹಧನ ಪಡೆಯುತ್ತಿದ್ದ ಈ ಕೆಳಗಿನ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ:
ಆದಾಯ ತೆರಿಗೆ ಪಾವತಿದಾರರಾಗಿರುವವರು: ಯೋಜನೆ ಪ್ರಕಾರ ವರ್ಷಕ್ಕೆ ₹2.5 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಪಿಎಂ ಕಿಸಾನ್ ಪ್ರೋತ್ಸಾಹಧನ ಪಡೆಯಲು ಅರ್ಹರಲ್ಲ. ಇಂಥವರಿಗೆ ಪ್ರೋತ್ಸಾಹಧನ ಸ್ಥಗಿತವಾಗಿದೆ.
ಇ-ಕೆವೈಸಿ (e-KYC) ಪೂರ್ಣಗೊಳಿಸದಿರುವವರು: ಯಾವ ವ್ಯಕ್ತಿಯು ತನ್ನ ಮೊಬೈಲ್ ನಂಬರ್ ಹಾಗೂ ಆಧಾರ್ ಮೂಲಕ ತಮ್ಮ ಖಾತೆಗೆ ಜೋಡಣೆ ಮಾಡಿಲ್ಲವೋ, ಅವರ ಖಾತೆಗೆ ಹಣ ಜಮೆ ಬಂದ್ ಮಾಡಲಾಗಿದೆ.
ಆಧಾರ್ ಜೋಡಣೆ ಮಾಡದಿರುವವರು: ಕೇಂದ್ರ ಸರ್ಕಾರ ಯೋಜನೆಯ ನಿಖರ ದೃಢತೆಗೆ ಆಧಾರ್ ಕಡ್ಡಾಯಗೊಳಿಸಿದ್ದು; ಆಧಾರ್ ಜೋಡಣೆ ಮಾಡದವರಿಗೆ ಹಣ ಸ್ಥಗಿತಗೊಳಿಸಲಾಗಿದೆ.
ರಾಜ್ಯ/ಕೇಂದ್ರ ಸರಕಾರಿ ನೌಕರರು: ಪಿಎಂ ಕಿಸಾನ್ ಯೋಜನೆ ಕೇವಲ ಸಣ್ಣ ರೈತರಿಗೆ ಮಾತ್ರ ಮೀಸಲಾಗಿದ್ದು; ಸರ್ಕಾರಿ ನೌಕರರು ಅಥವಾ ನಿವೃತ್ತಿಯ ನಂತರ ಪಿಂಚಣಿ ಪಡೆಯುತ್ತಿರುವವರು ಕೂಡ ರೈತರ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೆ. ಇಂಥವರನ್ನು ಯೋಜನೆಯಿಂದ ಹೊರಗಿಡಲಾಗಿದೆ.
ಸರಿಯಾದ ಭೂ ದಾಖಲೆಗಳನ್ನು ಒದಗಿಸದವರು: ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ರೈತರು ತಮ್ಮ ಹಿಡುವಳಿ ಪ್ರಮಾಣವನ್ನು ಅಂದರೆ ಭೂ ದಾಖಲೆಗಳನ್ನು ಒದಗಿಸಬೇಕು. ನಿಖರ ಭೂ ದಾಖಲೆ ಒದಗಿಸದೇ ಇರುವವರಿಗೆ ಹಣ ಬಂದ್ ಮಾಡಲಾಗಿದೆ.
Gold Price Hike- ಬಂಗಾರದ ಬೆಲೆ ಈಗ ಬರೋಬ್ಬರಿ ₹1 ಲಕ್ಷ | 4 ತಿಂಗಳಲ್ಲಿ ₹18,710 ಏರಿಕೆ ಕಂಡ ಹಳದಿ ಲೋಹ
2024ರಲ್ಲಿ 30 ಲಕ್ಷ ಹೊಸ ಸೇರ್ಪಡೆ
ಅರ್ಹ ರೈತರು ಪಿಎಂ ಕಿಸಾನ್ ಯೋಜನೆಯಿಂದ ಹೊರಗುಳಿಯ ಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ. ದೇಶಾದ್ಯಂತ 2024 ಸೆಪ್ಟೆಂಬರ್ನಿಂದ ಆರಂಭಿಸಲಾದ ಅಭಿಯಾನದಲ್ಲಿ ಈವರೆಗೆ 30 ಲಕ್ಷಕ್ಕೂ ಹೆಚ್ಚು ಬಾಕಿ ಉಳಿದಿದ್ದ ಸ್ವಯಂ-ನೋಂದಣಿ ಪ್ರಕರಣಗಳಿಗೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ 19ನೇ ಕಂತಿನಲ್ಲಿ 9.88 ಕೋಟಿ ರೈತರು ಪ್ರೋತ್ಸಾಹಧನ ಸ್ವೀಕರಿಸಿದ್ದಾರೆ.
ರೈತರು ಏನು ಮಾಡಬೇಕು?
ಮೊದಲೇ ಹೇಳಿದಂತೆ ಈಗ ಪಿಎಂ ಕಿಸಾನ್ ಪ್ರೋತ್ಸಾಹಧನ ಬಾರದೇ ಇರುವವರು ಬಹುತೇಕ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ನೀವು ಕೂಡ ಈ ಪಟ್ಟಿಯಲ್ಲಿದ್ದರೆ ಮತ್ತು ರಾಜ್ಯ- ಕೇಂದ್ರ ಸರ್ಜಾರಿ ನೌಕರರರಾಗಿದ್ದರೆ ಯಾವುದೇ ಕಾರಣಕ್ಕೂ ಮತ್ತೆ ಯೋಜನೆಗೆ ಸೇರುವ ಪ್ರಯತ್ನ ಮಾಡಬೇಡಿ.
ಇನ್ನು ಅನೇಕ ಅರ್ಹ ರೈತರೂ ಕೂಡ ಪಿಎಂ ಕಿಸಾನ್ ಯೋಜನೆಯ ಪ್ರೋತ್ಸಾಹಧನದಿಂದ ವಂಚಿತರಾಗಿದ್ದಾರೆ. ಇ-ಕೆವೈಸಿ ಪೂರ್ಣಗೊಳಿಸದಿರುವುದು, ಆಧಾರ್ ಜೋಡಣಿ ಮಾಡದಿರುವುದು ಮತ್ತು ಸರಿಯಾದ ಭೂ ದಾಖಲೆ ಒದಗಿಸದೇ ಇರುವುದೇ ಅದಕ್ಕೆ ಕಾರಣವಾಗಿದೆ. ನೀವು ಅರ್ಹ ರೈತರಾದರೂ ಹಣ ಬಂದಿಲ್ಲದಿದ್ದರೆ, ತಕ್ಷಣ ಮೇಲ್ಕಾಣಿಸಿದ ಲೋಪಗಳನ್ನು ಸರಿಪಡಿಸಿಕೊಂಡು ಯೋಜನೆಯ ಪ್ರಯೋಜನ ಪಡೆಯಿರಿ.
Monsoon Forecast 2025- ಈ ವರ್ಷದ ಮುಂಗಾರು ಮಳೆ ಸೂಪರ್: ಹವಾಮಾನ ಇಲಾಖೆಯ ಮಹತ್ವದ ಮುನ್ಸೂಚನೆ