ರಾಜ್ಯದಲ್ಲಿ ಹೊಸ ಬಿಪಿಎಲ್ ರೇಷನ್ ಅರ್ಜಿ ಆಹ್ವಾನ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹೊಸ ಕಾರ್ಡ್ ವಿತರಣೆ ಯಾವಾಗ? ಎಂಬ ಪ್ರಶ್ನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ…
ಕಳೆದ ಎರಡು ವರ್ಷಗಳಿಂದ ಯಾರಿಗೂ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ವಿತರಣೆ ಮಾಡಿಲ್ಲ. ಕೂಡು ಕುಟುಂಬದಿಂದ ಬೇರೆಯಾದ ಸಾವಿರಾರು ಕುಟುಂಬಗಳು ಹೊಸ ಕಾರ್ಡಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಈಚೆಗೆ ವಿಧಾನಸಭೆ ಅಧಿವೇಶನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ದಕ್ಷಿಣ ಭಾರತದಲ್ಲಿಯೇ ರಾಜ್ಯದಲ್ಲಿ ಅತೀ ಹೆಚ್ಚು ಅಂದರೆ ಸುಮಾರು 1.28 ಕೋಟಿ ಬಿಪಿಎಲ್ ಕಾರ್ಡುಗಳಿವೆ ಎಂದು ಮಾಹಿತಿ ನೀಡಿದ್ದರು.
ಲಕ್ಷಾಂತರ ಅರ್ಜಿಗಳು ಬಾಕಿ
ಕಳೆದ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಪಡಿತರ ಚೀಟಿ ವಿತರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದೇ ಕೊನೆ, ಈ ತನಕ ಯಾರಿಗೂ ಹೊಸ ಕಾರ್ಡ್ ವಿತರಣೆ ಆಗಿಲ್ಲ. ಇದರಿಂದ ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ.
ರಾಜ್ಯದಲ್ಲಿ ಅನರ್ಹರ ಬಿಪಿಎಲ್ ರೇಷನ್ ಕಾರ್ಡ್ ಪರಿಷ್ಕರಣೆಯ ಕಾರಣಕ್ಕೆ ಹೊಸ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ. ಈ ಪರಿಷ್ಕರಣೆ ಮುಗಿದ ಬಳಿಕ ಹಂತ ಹಂತವಾಗಿ ಹೊಸ ಕಾರ್ಡ್ ಅರ್ಜಿ ಮತ್ತು ವಿತರಣೆ ನಡೆಯಲಿದೆ ಎಂದು ರಾಜ್ಯ ಸರ್ಕಾರ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ: Karnataka Old Age Pension- 4,52,451 ಜನರ ವೃದ್ಧಾಪ್ಯ ವೇತನಕ್ಕೆ ಕತ್ತರಿ | ಅನರ್ಹರ ಪತ್ತೆ ಅಭಿಯಾನಕ್ಕೆ ಮುಂದಾದ ಸರ್ಕಾರ
ಹೊಸ ಪಡಿತರ ಚೀಟಿ ಯಾವಾಗ?
ಬಿಪಿಎಲ್ ಕಾರ್ಡುಗಳ ಜೊತೆಗೆ ಎಪಿಎಲ್ ಕಾರ್ಡುಗಳ ವಿತರಣೆ ಕೂಡ ನಡೆಯುತ್ತಿಲ್ಲ. ಪರಿಷ್ಕರಣೆಯ ಹೆಸರಿನಲ್ಲಿ ಕೆಲವರ ಕಾರ್ಡುಗಳು ರದ್ದಾಗಿವೆ. ಇವರನ್ನು ಎಪಿಎಲ್ ಕಾರ್ಡಿಗೆ ಪರಿವರ್ತಿಸುವುದಾಗಿ ಹೇಳಲಾಗುತ್ತಿದೆಯಾದರೂ ಈ ಕಾರ್ಯ ನಡೆಯುತ್ತಿಲ್ಲ. ಎಪಿಎಲ್ ಕಾರ್ಡ್ ವಿತರಣೆಯನ್ನಾದರೂ ಮಾಡಿದರೆ ಅರ್ಧ ಅರ್ಜಿಗಳು ವಿಲೇವಾರಿ ಆಗುತ್ತವೆ.
ಇದೀಗ ಎರಡು ವರ್ಷದಿಂದ ಪಡಿತರ ಚೀಟಿ ಪರಿಷ್ಕರಣೆಯ ನೆಪದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಕೂಡಲೇ ಹೊಸ ಕಾರ್ಡ್ ವಿತರಣೆಯಾಗಬೇಕು ಎಂಬ ಒತ್ತಾಯ ಹೆಚ್ಚಾಗುತ್ತಿದ್ದು; ಇದೇ ಅಕ್ಟೋಬರ್ ತಿಂಗಳಿನಿಂದ ಹೊಸ ರೇಷನ್ ಕಾರ್ಡಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ತ್ವರಿತವಾಗಿ ಹೊಸ ರೇಷನ್ ಕಾರ್ಡ್ ನೀಡಲಾಗುತ್ತಿದೆ. ಸರ್ಕಾರದ ಪ್ರತಿಯೊಂದು ಯೋಜನೆಗೂ ರೇಷನ್ ಕಾರ್ಡ್ ಅನಿವಾರ್ಯವಾಗಿದ್ದು; ಅರ್ಹರೆಲ್ಲರಿಗೂ ಹೊಸ ಕಾರ್ಡ್ ನೀಡಲಿ ಎಂಬ ಆಗ್ರಹ ಕೇಳಿ ಬರುತ್ತಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.