ಮಿನಿ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್ ಸೇರಿದಂತೆ ಇತರ ತೋಟಗಾರಿಕೆ ಘಟಕಗಳನ್ನು ಸಬ್ಸಿಡಿಯಲ್ಲಿ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್, ಹನಿ ನೀರಾವರಿ ಘಟಕ ಸೇರಿದಂತೆ ಹಲವು ತೋಟಗಾರಿಕೆ ಘಟಕಗಳಿಗೆ ಸಬ್ಸಿಡಿ (Subsidy) ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಬ್ಸಿಡಿ ಯೋಜನೆಗಳು ರಾಷ್ಟ್ರೀಯ ಮಟ್ಟದ ಯೋಜನೆಗಳಾದ:
- ರಾಷ್ಟ್ರೀಯ ತೋಟಗಾರಿಕೆ ಮಿಷನ್ (MIDH – Mission for Integrated Development of Horticulture)
- ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY – Pradhan Mantri Krishi Sinchayee Yojana)
ಅಡಿಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು, ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಗೆ ನೇರ ಆರ್ಥಿಕ ನೆರವು ನೀಡುವುದು ಯೋಜನೆಯ ಉದ್ದೇಶವಾಗಿದೆ.
ಯೋಜನೆಗಳ ಉದ್ದೇಶ ಮತ್ತು ಪ್ರಯೋಜನಗಳು
ಈ ಯೋಜನೆಗಳ ಅಡಿಯಲ್ಲಿ ತೋಟಗಾರಿಕೆ ಬೆಳೆಯ ವಿಸ್ತರಣೆ, ಕೃಷಿ ಸಾಧನಗಳ ಬಳಕೆ, ಹೂವಿನ, ಹಣ್ಣು ಮತ್ತು ತರಕಾರಿ ಬೆಳೆಯ ಅಭಿವೃದ್ಧಿ, ಶೇಖರಣಾ ಘಟಕಗಳ ಸ್ಥಾಪನೆ ಹಾಗೂ ನೀರಾವರಿ ವ್ಯವಸ್ಥೆಯ ಸುಧಾರಣೆ ಮುಂತಾದವನ್ನು ಉತ್ತೇಜಿಸಲಾಗುತ್ತಿದೆ.
ಈ ಮೂಲಕ ಕೃಷಿ ಉತ್ಪಾದನೆಯಲ್ಲಿನ ಪರಿಣಾಮಕಾರಿ ಬದಲಾವಣೆ, ಕೃಷಿ ಆದಾಯದ ಹೆಚ್ಚಳ, ಶಾಶ್ವತ ಕೃಷಿ ಸಾಧನೆ, ನೀರಿನ ಸಮರ್ಪಕ ಬಳಕೆ ಸಾಧ್ಯವಾಗಲಿದೆ.
ಸಬ್ಸಿಡಿ ಲಭಿಸುವ ಪ್ರಮುಖ ಘಟಕಗಳು
2025-26ನೇ ಸಾಲಿಗೆ ರೈತರು ಅರ್ಜಿ ಸಲ್ಲಿಸಬಹುದಾದ ಪ್ರಮುಖ ಘಟಕಗಳು ಈ ಕೆಳಗಿನಂತಿವೆ:
- ಹಣ್ಣು ಬೆಳೆಯ ವಿಸ್ತರಣೆ (ಉದಾ: ಬಾಳೆ)
- ಹೈಬ್ರಿಡ್ ತರಕಾರಿ ಹಾಗೂ ಹೂವಿನ ಪ್ರದೇಶ ವಿಸ್ತರಣೆ (ಕತ್ತರಿಸಿದ ಹೂಗಳು, ಗಡ್ಡೆ ಹೂಗಳು, ಬಿಡಿ ಹೂಗಳು)
- ವೈಯಕ್ತಿಕ ಕೃಷಿಹೊಂಡ ಸ್ಥಾಪನೆ
- ಸಣ್ಣ ಟ್ರ್ಯಾಕ್ಟರ್/ಮಿನಿ ಟ್ರ್ಯಾಕ್ಟರ್ ಖರೀದಿ
- ಪಾಲಿಹೌಸ್ ನಿರ್ಮಾಣ
- ನೆರಳು ಪರದೆ (Shade Net) ಘಟಕ
- ಈರುಳ್ಳಿ ಶೇಖರಣಾ ಘಟಕ
- ಎರೆಹುಳು ಘಟಕ
- ಜೇನುಪೆಟ್ಟಿಗೆ ಘಟಕ
- ಪ್ಲಾಸ್ಟಿಕ್ ಮಲ್ಚಿಂಗ್ ಉಪಕರಣಗಳು
- ಮಾವಿನ ಮರಗಳ ಪುನಃಶ್ಚೇತನ ಯೋಜನೆ
- ಪವರ್ ಟಿಲ್ಲರ್
- ತಳ್ಳುವ ಗಾಡಿ ಘಟಕ
Rohini Rain- ಮೇ 25ರಿಂದ ರಾಜ್ಯದಲ್ಲಿ ರೋಹಿಣಿ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ಹನಿ ನೀರಾವರಿ ಘಟಕ
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗೆ ನೀರಾವರಿ ವ್ಯವಸ್ಥೆಯನ್ನು ಸುಧಾರಿಸಲು ಹನಿ ನೀರಾವರಿ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತದೆ. ಇದರಿಂದ ರೈತರು ಕಡಿಮೆ ನೀರಿನಿಂದ ಉತ್ತಮ ಫಲಿತಾಂಶ ಪಡೆಯಬಹುದು. ನೀರಿನ ಬಳಕೆಯಲ್ಲಿ ಉಳಿತಾಯವಾಗುತ್ತದೆ. ಬೆಳೆಗಳ ಬೆಳವಣಿಗೆಯಲ್ಲಿ ಗುಣಮಟ್ಟ ಹೆಚ್ಚಾಗುತ್ತದೆ.
ಸಬ್ಸಿಡಿ ಶೇಕಡಾವಾರು ಪ್ರಮಾಣ ಎಷ್ಟು?
ತೋಟಗಾರಿಕೆ ಮಿಷನ್ ಹಾಗೂ ಹನಿ ನೀರಾವರಿ ಯೋಜನೆಗಳ ಅಡಿಯಲ್ಲಿ ಕನಿಷ್ಠ 50% ರಿಂದ ಗರಿಷ್ಠ 90% ವರೆಗೆ ಸಹಾಯಧನ ಲಭ್ಯವಿದೆ. ರೈತರ ವರ್ಗ, ಜಾತಿ, ಉದ್ದೇಶಿತ ಘಟಕದ ಪ್ರಕಾರ ಸಬ್ಸಿಡಿಯ ಪ್ರಮಾಣ ವ್ಯತ್ಯಾಸವಾಗುತ್ತದೆ.
ಈ ವರ್ಗದ ರೈತರಿಗೆ ವಿಶೇಷ ಮೀಸಲಾತಿ
ಮೇಲ್ಕಾಣಿಸಿದ ಎರಡೂ ಯೋಜನೆಗಳ ಅಡಿಯಲ್ಲಿ ವಿವಿಧ ತೋಟಗಾರಿಕೆ ಘಟಕ ಅಳವಡಿಸಿಕೊಳ್ಳು ಇಚ್ಛಿಸುವ ರೈತರಿಗೆ ವಿಶೇಷ ಮೀಸಲಾತಿ ಕೂಡ ಇದೆ. ಜಾತಿ/ವರ್ಗಗಳ ಅನುಸಾರ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:
- ಪರಿಶಿಷ್ಟ ಜಾತಿಗೆ: 17% ಮೀಸಲಾತಿ
- ಪರಿಶಿಷ್ಟ ಪಂಗಡ: 7%
- ಮಹಿಳಾ ರೈತರಿಗೆ: 33%
- ಅಲ್ಪಸಂಖ್ಯಾತರು: 5%
- ಅಂಗವಿಕಲರಿಗೆ: 3%
Ration Card New Rules- ರೇಷನ್ ಕಾರ್ಡ್ ಅರ್ಜಿ | ಇನ್ಮುಂದೆ ಕಠಿಣ ನಿಯಮ | 25 ಲಕ್ಷ ಕಾರ್ಡುಗಳ ರದ್ದತಿ?
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
- ತಮ್ಮ ಹೆಸರಲ್ಲಿ ಸ್ವಂತ ಜಮೀನು ಹೊಂದಿರಬೇಕು
- ಸಣ್ಣ ಅಥವಾ ಅತೀ ಸಣ್ಣ ರೈತರ ವರ್ಗಕ್ಕೆ ಸೇರಿದವರಾಗಿರಬೇಕು
- ತಮ್ಮ ಜಮೀನಿಗೆ ನೀರಾವರಿ ಮೂಲ ಇರುವುದು ಅಗತ್ಯ (ಕೊಳವೆ ಬಾವಿ, ಮೋಟಾರ್ ಇತ್ಯಾದಿ)
ಅರ್ಜಿಯನ್ನು ಎಲ್ಲಿಗೆ ಸಲ್ಲಿಸಬೇಕು?
ರೈತರು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು ಸಲ್ಲಿಸಬೇಕು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳ ನಕಲು ನೀಡುವುದು ಕಡ್ಡಾಯ. ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ಬುಕ್ ನಕಲು
- ಪಾಸ್ಪೋರ್ಟ್ ಗಾತ್ರದ ಫೋಟೋ
- ಜಮೀನಿನ ಪಹಣಿ (ಉತಾರ / RTC ಪ್ರತಿ)
- ರೇಷನ್ ಕಾರ್ಡ್
- ನೀರಾವರಿ ಮೂಲದ ಪ್ರಮಾಣ ಪತ್ರ (ಕೊಳವೆ ಬಾವಿ ಅಥವಾ ಮೋಟಾರ್ ಪ್ರಮಾಣ ಪತ್ರ)
- ಗಣಕೀಕೃತ ಬೆಳೆ ದೃಢೀಕರಣ ಪತ್ರ
ಪ್ರಸ್ತುತ ಅರ್ಜಿ ಆಹ್ವಾನಿತ ಜಿಲ್ಲೆಗಳು
2025-26ನೇ ಸಾಲಿನಲ್ಲಿ ಪ್ರಸ್ತುತ ಉತ್ತರ ಕನ್ನಡ ಮತ್ತು ಧಾರವಾಡ (ಹುಬ್ಬಳ್ಳಿ) ಹಾಗೂ ತುಮಕೂರು ಜಿಲ್ಲೆಗಳ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇತರ ಜಿಲ್ಲೆಗಳಲ್ಲಿ ಕ್ರಮೇಣ ಅರ್ಜಿ ಆಹ್ವಾನ ಪ್ರಕಟವಾಗುವ ನಿರೀಕ್ಷೆ ಇದೆ.
ಆಸಕ್ತ ರೈತರು ಸ್ಥಳೀಯ ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ರಾಜ್ಯದ ತೋಟಗಾರಿಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು
ಈ ಯೋಜನೆಯ ಸದುಪಯೋಗ ಪಡೆದು ರೈತರು ತಮ್ಮ ತೋಟಗಾರಿಕೆ ಆಧಾರಿತ ಕೃಷಿಯನ್ನು ಮೌಲ್ಯವರ್ಧಿತ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು. ಸರಕಾರದ ಈ ಸಹಾಯಧನ ಯೋಜನೆಗಳು ಕೃಷಿ ಚಟುವಟಿಕೆಗಳನ್ನು ಲಾಭದಾಯಕವಾಗಿ ರೂಪಿಸಲು ಸಹಕಾರಿಯಾಗಿವೆ.