Gruhalakshmi Payment- ನವೆಂಬರ್ 28ರೊಳಗೆ ಗೃಹಲಕ್ಷ್ಮಿ ಹಣ ಜಮಾ | ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ
Gruhalakshmi Payment

ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಹಣಕ್ಕಾಗಿ (Gruhalakshmi Payment) ಕಾತುರದಿಂದ ಕಾಯುತ್ತ ಕೂತಿರುವ ಮಹಿಳೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಭsಸುದ್ದಿ ನೀಡಿದ್ದು; ಹಣ ಜಮಾ ಕುರಿತು ಮಾಹಿತಿ ನೀಡಿದ್ದಾರೆ…
ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಖಾತೆಗೆ ಹಾಕುವ ಗೃಹಲಕ್ಷ್ಮೀ ಯೋಜನೆ ಹಣ ಆಗಸ್ಟ್ ತಿಂಗಳಿನಿಂದ ಇದುವರೆಗೆ ಬಾಕಿ ಬರಬೇಕಿದ್ದು, ನವೆಂಬರ್ ಕಳೆದರೆ ನಾಲ್ಕು ತಿಂಗಳ ಕಂತು ಸರಕಾರ ಬಾಕಿ ಉಳಿಸಿಕೊಂಡಂತಾಗುತ್ತದೆ!
ಗೃಹಲಕ್ಷ್ಮೀ ಯೋಜನೆಗಾಗಿಯೇ 2025-26ನೇ ಸಾಲಿನ ಬಜೆಟ್ನಲ್ಲಿ 29,000 ಕೋಟಿ ರೂ. ನಿಗದಿ ಮಾಡಲಾಗಿದೆ. ಆದರೂ ಪ್ರತೀ ತಿಂಗಳು ಡಿಬಿಟಿ ಮೂಲಕ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ.
ಬಿಹಾರ ಚುನಾವಣೆ ಗದ್ದಲದಲ್ಲಿ ವಿಳಂಬ
ಬಿಹಾರ ಚುನಾವಣೆ ಗದ್ದಲದಲ್ಲಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮೂರು ತಿಂಗಳಿಂದ ಕುಟುಂಬದ ಯಜಮಾನಿಗೆ ಹಣ ಪಾವತಿಯೇ ಮಾಡಿಲ್ಲ. ನವೆಂಬರ್ ತಿಂಗಳು ಕಳೆಯಲು ಇನ್ನೂ ಎಂಟು ದಿನ ಬಾಕಿ ಉಳಿದಿದೆ.
ಮೂರು ತಿಂಗಳ ಹಣ ಒಟ್ಟಿಗೆ ಬರಲಿದೆ ಎಂದು ಆಸೆಗಣ್ಣಿನಿಂದ ಸರಕಾರದ ಕಡೆ ನೋಡುತ್ತಿರುವ ಮನೆ ಯಜಮಾನಿಯರಿಗೆ ನವೆಂಬರ್ ಬಳಿಕವೂ ಹಣ ಬಾರದೇ ಇದ್ದರೆ ಇನ್ನಷ್ಟು ನಿರಾಸೆಯಾಗಲಿದೆ.

ಇದನ್ನೂ ಓದಿ: PM KISAN 21st Installment- ಸಣ್ಣ ರೈತರ ಬ್ಯಾಂಕ್ ಖಾತೆಗೆ ₹2,000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…
ಪ್ರತೀ ತಿಂಗಳು 2,500 ಕೋಟಿ ರೂ. ಜಮಾ
ರಾಜ್ಯದಲ್ಲಿ ಒಟ್ಟು 1.27 ಕೋಟಿ ಕುಟುಂಬದ ಯಜಮಾನಿಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಒಂದು ತಿಂಗಳಿಗೆ 2,500 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಖಾತೆಗಳಿಗೆ ವರ್ಗಾವಣೆ ಮಾಡಬೇಕಿದೆ.
ಹಣಕಾಸಿನ ಕೊರತೆ, ತಾಂತ್ರಿಕ ದೋಷ ಸೇರಿ ಹಲವು ಕಾರಣಗಳಿಂದ ಆಗಸ್ಟ್ನಿಂದ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲ. ಸರಕಾರ ಕೆಲ ದಿನಗಳ ಹಿಂದೆಯಷ್ಟೇ ಆಗಸ್ಟ್ ತಿಂಗಳ 2,500 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.
ಆದರೆ, ಈ ಹಣ ಇನ್ನು ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಇನ್ನು ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಸುಮಾರು 5,000 ಕೋಟಿ ರೂ. ಬಿಡುಗಡೆಗೆ ಸರಕಾರ ಹಣಕಾಸು ಹೊಂದಾಣಿಕೆಗೆ ಪ್ರಯತ್ನ ಮಾಡುತ್ತಿದೆ.
23ನೇ ಕಂತಿನ ಹಣ ಬಿಡುಗಡೆ ಯಾವಾಗ?
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 1.27ಕೋಟಿ ಫಲಾನುಭವಿಗಳಿದ್ದಾರೆ. ಈವರೆಗೆ 22 ಕಂತಿನ ಯೋಜನೆಯ ಹಣ ಜಮಾವಣೆಯಾಗಿದೆ. ಈವರೆಗೂ ತಲಾ 44,000 ರೂ ಖಾತೆಗೆ ಹಾಕಲಾಗಿದೆ.
ಇದೀಗ ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ಬಿಡುಗಡೆಗೆ ಕ್ರಮವಹಿಸಲಾಗಿದ್ದು, ಒಂದು ವಾರದಲ್ಲಿ (ನವೆಂಬರ್ 28ರೊಳಗೆ) ಹಣ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.



