ಮನೆ ಬಾಗಿಲಿಗೆ ಇ-ಪೌತಿ (e-Pouthi) ಯೋಜನೆ ಜಾರಿಗೊಳಿಸುವ ಮಹತ್ವದ ನಿರ್ಧಾರವನ್ನು ಕಂದಾಯ ಇಲಾಖೆ (Karnataka Revenue Dept) ಕೈಗೊಂಡಿದೆ. ಪೌತಿ ಖಾತೆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ…
ರಾಜ್ಯದ ರೈತರು ಸಾವಿನ ನಂತರವೂ ಸರಕಾರಿ ದಾಖಲೆಗಳಲ್ಲಿ ಜೀವಂತವಾಗಿರುವುದನ್ನು ತೋರುವಂತಹ ಭೂ ಪಹಣಿ ವಿವರಗಳ ಗೊಂದಲ ಸರಿಪಡಿಸಲು, ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಕಂದಾಯ ಇಲಾಖೆ ‘ಇ-ಪೌತಿ’ ಆಂದೋಲನವನ್ನು ಶೀಘ್ರದಲ್ಲೇ ರಾಜ್ಯದಾದ್ಯಂತ ಹಮ್ಮಿಕೊಳ್ಳಲಿದ್ದು, ಇಲ್ಲಿಯವರೆಗೆ ದಿಕ್ಕು ಕಾಣದೇ ಉಳಿದಿದ್ದ ಭೂಮಿ ಖಾತೆ ಪ್ರಕ್ರಿಯೆಗೆ ಹೊಸ ದಿಕ್ಕು ನೀಡುತ್ತಿದೆ.
ಪೌತಿ ಖಾತೆ ಎಂದರೇನು?
ಪೌತಿ ಖಾತೆ ಎನ್ನುವುದು ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಉಳಿದಿರುವ ಜಮೀನಿನ ಮಾಲೀಕತ್ವವನ್ನು ಅವನ ವಾರಸುದಾರರಿಗೆ ಕಾನೂನುಬದ್ಧವಾಗಿ ವರ್ಗಾಯಿಸುವ ಪ್ರಕ್ರಿಯೆ. ಇದು ಕೇವಲ ದಾಖಲೆ ತಿದ್ದುಪಡಿಯಾಗಿ ಕಾಣಸಿಗುತ್ತಿದೆಯಾದರೂ, ಅಳವಡಿಕೆಯಲ್ಲಿ ರೈತರ ಭದ್ರತೆ ಮತ್ತು ಸರ್ಕಾರದ ಸಹಾಯಧನಗಳು ತಲುಪಲಿ ನೇರ ಸೇತುವೆಯಾಗಿದೆ.
ರಾಜ್ಯದಲ್ಲಿ ನಡೆದ ಆಧಾರ್ ಸೀಡಿಂಗ್ ಕಾರ್ಯಚಟುವಟಿಕೆಯ ವೇಳೆ ಬಹುಸಂಖ್ಯೆಯ ಜಮೀನಿನ ಪಹಣಿಗಳು ಮೃತರ ಹೆಸರಿನಲ್ಲಿಯೇ ಇರುವ ಅಂಶ ಬೆಳಕಿಗೆ ಬಂದಿದೆ. ಇದರಿಂದ ರೈತರಿಗೆ ವಿವಿಧ ನಷ್ಟಗಳು ಸಂಭವಿಸುತ್ತಿದ್ದು, ಕಂದಾಯ ಇಲಾಖೆಯು ಇನ್ನು ಮುಂದೆ ಈ ಗೊಂದಲ ನಿವಾರಣೆಯೊಂದಿಗೆ ರೈತರ ಹಕ್ಕು ಸ್ಥಿರವಾಗಿಸುವ ನಿಟ್ಟಿನಲ್ಲಿ ‘ಇ-ಪೌತಿ’ ಯೋಜನೆಗೆ ಚಾಲನೆ ನೀಡಿದೆ.
ಆಧಾರ್ ಸೀಡಿಂಗ್ ಪ್ರಕ್ರಿಯೆಯಿಂದ ಬಹಿರಂಗವಾದ ಅಂಶಗಳು
- ರಾಜ್ಯದ ಒಟ್ಟು ಜಮೀನು: 4.11 ಕೋಟಿ
- ಸಂಪರ್ಕಕ್ಕೆ ಬಂದ ಭೂ ಮಾಲೀಕರು: 3.5 ಕೋಟಿ
- ಇ-ಕೆವೈಸಿ ಪೂರ್ಣವಾದ ಜಮೀನುಗಳು: 2.2 ಕೋಟಿ
- ಮೃತರ ಹೆಸರಿನಲ್ಲಿರುವ ಜಮೀನುಗಳು: 51.13 ಲಕ್ಷ
- ಕೃಷಿಯೇತರ ಉದ್ದೇಶಕ್ಕೆ ಬಳಕೆಯಾದ ಜಮೀನುಗಳು: 70 ಲಕ್ಷ
- ಇನ್ನೂ ಬಾಕಿ ಇರುವ ಜಮೀನುಗಳು: ಸುಮಾರು 60 ಲಕ್ಷ
ಈ ಅಂಕಿ-ಅಂಶಗಳು ರಾಜ್ಯದ ಭೂ ಹಕ್ಕು ವ್ಯವಸ್ಥೆಯಲ್ಲಿನ ಮೂಲ ಸಮಸ್ಯೆಯನ್ನು ಬಹಿರಂಗಪಡಿಸಿವೆ.

ರೈತರ ಸಮಸ್ಯೆಗಳಿಗೆ ಧ್ವನಿಯಾದ ಇ-ಪೌತಿ
ಮೃತರ ಹೆಸರಿನಲ್ಲಿ ಜಮೀನು ಇರುವುದರಿಂದ ರೈತರಿಗೆ ಕೃಷಿ ಸಾಲ, ಬಿತ್ತನೆ ಹಾಗೂ ಗೊಬ್ಬರ ಸಬ್ಸಿಡಿ, ಬೆಳೆ ನಷ್ಟ ಪರಿಹಾರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆ ಸೌಲಭ್ಯಗಳು ಸಿಗುವುದಿಲ್ಲ. ಬೆಳೆ ವಿಮೆಗೆ ಅರ್ಹರಾಗುವುದಿಲ್ಲ. ಇವೆಲ್ಲಾ ಸಮಸ್ಯೆಗಳಿಗೆ ಈ ಇ-ಪೌತಿ ಯೋಜನೆ ಒಂದೇ ಉತ್ತರವಾಗಿದೆ.
‘ಇ-ಪೌತಿ’ಯಿಂದ ಪಹಣಿಗಳಿಗೆ ಆಧಾರ್ ಜೋಡಣೆ ಮೂಲಕ ನಿಖರವಾಗಿ ಎಷ್ಟು ಕೃಷಿ ಭೂಮಿ ಇದೆ ಎಂಬ ಮಾಹಿತಿ ಸಿಗುತ್ತದೆ. ಸಣ್ಣ ಹಾಗೂ ಅತಿಸಣ್ಣ ರೈತರ ಸಂಖ್ಯೆ ನಿಖರವಾಗಿ ಸಿಗುತ್ತದೆ. ಸರ್ಕಾರಿ ಕಚೇರಿಗಳ ಅಲೆದಾಟ ತಪ್ಪಿಸಿ, ಪಾರದರ್ಶಕ ಪ್ರಕ್ರಿಯೆ ಒದಗಿಸಲಾಗುತ್ತದೆ.
ಮನೆ ಮನೆಗೆ ತೆರಳಿ ಖಾತೆ ದಾಖಲಿಸುವ ಹೊಸ ವಿಧಾನ
ಈ ಬಾರಿ ಪೌತಿ ಆಂದೋಲನವನ್ನು ನಿಖರವಾಗಿ ರೀತಿಯಲ್ಲಿ ಜಾರಿಗೆ ತರುವ ಉದ್ದೇಶದಿಂದ, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಅವರು ನೇರವಾಗಿ ರೈತರ ಮನೆಗೆ ತೆರಳಿ:
- ವಾರಸುದಾರರ ಮಾಹಿತಿ ಸಂಗ್ರಹಿಸುತ್ತಾರೆ
- ವಂಶವೃಕ್ಷದ ಆಧಾರದ ಮೇಲೆ ವಾರಸುದಾರರನ್ನು ಗುರುತಿಸುತ್ತಾರೆ
- ಆಧಾರ್ ಸಂಖ್ಯೆ ಮೂಲಕ OTP ಪಡೆದು ಖಾತೆ ದಾಖಲು ಮಾಡುತ್ತಾರೆ
- ಇದೇ ವೇಳೆ ವಿವಾದಿತ ಆಸ್ತಿಗಳಲ್ಲಿ ಜಂಟಿ ಖಾತೆ ಅಥವಾ ನ್ಯಾಯಾಲಯದ ಮಾರ್ಗ ಅನುಸರಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ.
ಪ್ರತ್ಯೇಕ ಸಾಫ್ಟ್ವೇರ್ ಮೂಲಕ ಪೌತಿ ಪ್ರಕ್ರಿಯೆ
ಈ ಪ್ರಕ್ರಿಯೆಗೆ ಸರ್ಕಾರ ಬಜೆಟ್ನಲ್ಲಿ ಹಣ ಮೀಸಲಿಟ್ಟು, ಪೌತಿ ಖಾತೆ ಪ್ರಕ್ರಿಯೆ ನಡೆಸಲು ಪ್ರತ್ಯೇಕ ಡಿಜಿಟಲ್ ಪ್ಲಾಟ್ಫಾರ್ಮ್ ಅಭಿವೃದ್ಧಿಪಡಿಸಿದೆ. ಈ ಮೂಲಕ, ಯಾವುದೇ ಹಸ್ತಚಾಲಿತ ಅವಲಂಬನೆ ಇಲ್ಲದೆ, ಸಂಪೂರ್ಣವಾಗಿ ಡಿಜಿಟಲ್ ದಾಖಲೆ ಸೃಷ್ಟಿಯ ಮೂಲಕ ರೈತರ ಭದ್ರತೆ ಖಚಿತಗೊಳ್ಳಲಿದೆ.
ಆಂದೋಲನದ ಪ್ರಾರಂಭದ ವೇಳೆ ಗ್ರಾಮ ಅಭಿವೃದ್ಧಿ ಅಧಿಕಾರಿಗಳು (ಪಿಎ) ತಮ್ಮ ವಿರೋಧವನ್ನು ವ್ಯಕ್ತಪಡಿಸಿ, ಮನೆಗೆ ತೆರಳಿ ವೈಯಕ್ತಿಕ ವಿವಾದಗಳಲ್ಲಿ ತಾವು ಪಾಲುದಾರರಾಗುವುದಿಲ್ಲವೆಂದು ಆಕ್ಷೇಪಿಸಿದ್ದರು. ಆದರೆ ಸರ್ಕಾರವು ಈ ಕಾರ್ಯವನ್ನು ರೈತರ ಹಿತಕ್ಕಾಗಿ ಅವಶ್ಯಕವೆಂದು ಗುರುತಿಸಿ, ಅಧಿಕಾರಿಗಳನ್ನು ಮನವೊಲಿಸಿ ಕಾರ್ಯಕ್ಕೆ ಒತ್ತಾಯಿಸುತ್ತಿದೆ.
ಇ-ಪೌತಿ ಆಂದೋಲನವು ಕೇವಲ ದಾಖಲೆ ತಿದ್ದುಪಡಿಯ ಕಾರ್ಯವಲ್ಲ; ಇದು ರೈತರ ಹಕ್ಕುಗಳನ್ನು ಸ್ಥಿರಗೊಳಿಸುವ, ಭೂಮಿಯ ಮಾಲೀಕತ್ವವನ್ನು ನ್ಯಾಯಬದ್ಧವಾಗಿ ನಿರ್ಧರಿಸುವ ಹಾಗೂ ಸರ್ಕಾರದ ಸೌಲಭ್ಯಗಳು ನಿಖರವಾಗಿ ತಲುಪುವಂತೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.
ಬಾಕಿ ಉಳಿದಿರುವ ಪೌತಿ ಖಾತೆ ಜಿಲ್ಲಾವಾರು ಪ್ರಕರಣಗಳು
ರಾಜ್ಯದಲ್ಲಿ 51 ಲಕ್ಷಕ್ಕೂ ಹೆಚ್ಚು ಪೌತಿ ಖಾತೆಗಳು ಬಾಕಿ ಉಳಿದಿದ್ದು, ಲಕ್ಷಾಂತರ ಕುಟುಂಬಗಳು ತಮ್ಮ ಪೂರ್ವಜರ ಜಮೀನುಗಳನ್ನು ಹಾಗೆ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಬಾಕಿ ಉಳಿದಿರುವ ಪೌತಿ ಖಾತೆ ಜಿಲ್ಲಾವಾರು ಪ್ರಕರಣಗಳು ಹೀಗಿವೆ:
- ಬೆಂಗಳೂರು ಗ್ರಾ – 83,751
- ಬೆಂಗಳೂರು ನಗರ – 29,816
- ಚಿಕ್ಕಬಳ್ಳಾಪುರ- 2,26,749
- ಕೋಲಾರ- 2,84,206
- ರಾಮನಗರ – 1,79,793
- ತುಮಕೂರು-5,61,107
- ಚಿಕ್ಕಮಗಳೂರು- 96,636
- ಮಂಡ್ಯ-3,70,207
- ಮೈಸೂರು- 2,57,345
- ಹಾಸನ- 2,73,761
- ದಾವಣಗೆರೆ- 95,079
- ಬಳ್ಳಾರಿ- 70,702
- ಗದಗ- 66,136
- ಹಾವೇರಿ- 1,05,871
- ಬಾಗಲಕೋಟೆ- 67,599
- ಧಾರವಾಡ- 62,267
- ಚಾಮರಾಜನಗರ- 1,29,478
- ಬೀದರ್- 72,935
- ಕೊಪ್ಪಳ- 69,293
- ಚಿತ್ರದುರ್ಗ- 1,95,854
- ವಿಜಯನಗರ- 1,29,976
- ಕಲಬುರಗಿ- 97,739
- ರಾಯಚೂರು – 91,426
- ಯಾದಗಿರಿ- 1,04,611
- ಉತ್ತರ ಕನ್ನಡ- 2,01,957
- ಶಿವಮೊಗ್ಗ- 90,846
- ಕೊಡಗು- 2,81,199
- ವಿಜಯಪುರ- 60,383
- ಬೆಳಗಾವಿ- 4,75,625
- ಉಡುಪಿ- 2,89,433
- ದಕ್ಷಿಣ ಕನ್ನಡ – 1,18,255

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.