New APL BPL Ration Card Application : ಹಲವು ವರ್ಷಗಳಿಂದ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ಸಿಗದೆ ಲಕ್ಷಾಂತರ ಜನ ಪರಿತಪಿಸುತ್ತಿದ್ದಾರೆ. ಹಾಗಾದರೆ ಇವರಿಗೆಲ್ಲ ಹೊಸ ರೇಷನ್ ಕಾರ್ಡ್ ಯಾವಾಗ ಸಿಗಲಿದೆ? ಈ ವಿಳಂಬಕ್ಕೆ ಕಾರಣವೇನು? ರೇಷನ್ ಕಾರ್ಡ್ ಸಿಗದೇ ಬಡ ಜನರಿಗೆ ಆಗುತ್ತಿರುವ ತೊಂದರೆಗಳೇನು? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ…
ಹೊಸ ಪಡಿತರ ಚೀಟಿಗಾಗಿ ಕುಕ್ಕರುಗಾಲಿನಲ್ಲಿ ಕೂತು ಕಾಯುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಲಕ್ಷಾಂತರ ಜನರ ಅರ್ಜಿಗಳಿಗೆ ಸದ್ಗತಿ ಸಿಗುತ್ತಿಲ್ಲ. ಹೊಸ ರೇಷನ್ ಕಾರ್ಡ್ (New Ration Card) ಅರ್ಜಿ ಸಲ್ಲಿಕೆಗೂ ಅವಕಾಶ ಸಿಗುತ್ತಿಲ್ಲ. ಸರಕಾರ ಇಂದೋ ನಾಳೆಯೋ ನಮಗೆ ಪಡಿತರ ಚೀಟಿ ವಿತರಿಸಲಿದೆ ಅಥವಾ ಹೊಸ ಅರ್ಜಿ ಅವಕಾಶ ಕಲ್ಪಿಸಲಿದೆ ಎಂದು ಕಾಯುತ್ತಿರುವ ಅರ್ಜಿದಾರರ ಏಕೈಕ ಪ್ರಶ್ನೆ ‘ನಮಗೆ ಹೊಸ ಪಡಿತರ ಚೀಟಿ ಯಾವಾಗ ಸಿಗುತ್ತದೆ?’ ಎಂಬುವುದಾಗಿದೆ.
ಇದಕ್ಕೆ ಸರಕಾರ ಅಥವಾ ಆಹಾರ ಇಲಾಖೆಯಲ್ಲೂ ಸೂಕ್ತವಾದ ಉತ್ತರವಿಲ್ಲ. ಹೊಸ ಪಡಿತರ ಕಾರ್ಡ್’ಗೆ ಅರ್ಜಿ ಸಲ್ಲಿಸಿದವರು ಕಾರ್ಡು ಇಂತಿಷ್ಟೇ ದಿನಕ್ಕೆ ಬರಲಿದೆ ಎಂಬುವುದನ್ನು ನಿರೀಕ್ಷಿಸಬೇಡಿ ಎಂಬ ಉತ್ತರ ಆಹಾರ ಇಲಾಖೆಯ ಮೂಲಗಳಿಂದ ಸಿಗುತ್ತದೆ. ವರ್ಷಗಳ ಹಿಂದೆಯೇ ಹೊಸ ಪಡಿತರ ಚೀಟಿಗೆಂದು ಅರ್ಜಿ ಸಲ್ಲಿಸಿ ಕಾಯುತ್ತಿರುವ ಲಕ್ಷಾಂತರ ಮಂದಿಗೆ ಈವರೆಗೂ ಪಡಿತರ ಚೀಟಿ ಸಿಕ್ಕಿಲ್ಲ. ಇನ್ನೂ ಹೊಸದಾಗಿ ಅರ್ಜಿ ಸಲ್ಲಿಸಿದವರ ಪಾಡು ಏನೋ? ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಈಚೆಗೆ ಕಳೆದ ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಪ್ರಕ್ರಿಯೆ ಹಾಗೂ ಬಾಕಿ ಉಳಿದ ಅರ್ಜಿ ವಿಲೇವಾರಿ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅಧಿಕೃತ ಭರವಸೆ ನೀಡಿದ್ದರು. ಅಷ್ಟರಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಿ, ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿ ಉಳಿದಿರುವ ಪಡಿತರ ಚೀಟಿ ವಿತರಣೆಯನ್ನು ಮುಂದೂಡಲಾಗಿತ್ತು.
ಹಲವು ವರ್ಷಗಳಿಂದ ಪರದಾಟ
2017ರಲ್ಲಿ ರಾಜ್ಯದಲ್ಲಿ ಅನರ್ಹರು ಪಡೆದಿದ್ದ ರೇಷನ್ ಕಾರ್ಡ್’ಗಳನ್ನು ರದ್ದುಗೊಳಿಸಲು ಆಹಾರ ಇಲಾಖೆ ಹೊಸ ಅರ್ಜಿಗಳ ವಿಲೇವಾರಿಗೆ ತಡೆ ಹಿಡಿಯಲಾಗಿತ್ತು. ಮಾತ್ರವಲ್ಲ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆನಂತರ 2019-20ರ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕ ಹಾವಳಿಯ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿತ್ತು.
2021ರ ಸೆಪ್ಟೆಂಬರ್ ವೇಳೆಗೆ ಕೊರೋನಾ ಸೋಂಕು ಇಳಿಕೆಯಾದ ತಕ್ಷಣ ಹೊಸ ರೇಷನ್ ಕಾರ್ಡ್ ವಿತರಣೆಗೆ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಅವಕಾಶ ನೀಡಿತ್ತು. ಕೊರೋನಾ 3ನೇ ಅಲೆಯೂ ಹೆಚ್ಚು ಬಾಧಿಸದ ಕಾರಣ ಪಡಿತರ ಚೀಟಿ ಹಂಚಿಕೆ ಮುಂದುವರೆಸಲಾಗಿತ್ತು. ಆದರೆ ಅನರ್ಹರ ಅಕ್ರಮ ರೇಷನ್ ಕಾರ್ಡ್ ತನಿಖೆಯ ಕಾರಣಕ್ಕೆ ನಿಗದಿತ ಸಮಯಕ್ಕೆ ಹೊಸ ರೇಷನ್ ಕಾರ್ಡ್ ಸಿಗಲಿಲ್ಲ.
ಈಗ್ಗೆ ಒಂದು ವರ್ಷದ ಹಿಂದೆ ರಾಜ್ಯ ವಿಧಾನಸಭೆ ಚುನಾವಣೆ ಘೊಷಣೆಯಾಗಿ, ನೀತಿ ಸಂಹಿತೆ ಜಾರಿಯಾದಾಗಲೂ ರೇಷನ್ ಕಾರ್ಡ್ ವಿಲೇವಾರಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಚೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆಯ ಕಾರಣಕ್ಕೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಹೀಗೆ ಹಲವು ಫಲಾನುಭವಿಗಳು ವರ್ಷಗಳಿಂದ ಪಡಿತರ ಚೀಟಿ ಸಿಗದೆ, ಜೊತೆಗೆ ಪಡಿತರ ಆಹಾರ ಧಾನ್ಯವೂ ಸಿಗದೆ ಪರಿತಪಿಸುತ್ತಿದ್ದಾರೆ.
ಎಫ್ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಮಾಹಿತಿ FID Registration
ಸರಕಾರಿ ಸವಲತ್ತುಗಳಿಂದ ವಂಚಿತರು
ಅರ್ಜಿದಾರರಿಗೆ ಪಡಿತರ ಚೀಟಿ ಸಿಗದೇ ಇದ್ದ ಕಾರಣಕ್ಕೆ ಬಡ ಜನರು ಪಡಿತರ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಯಿಂದ ಸರಕಾರಿ ಸೌಲಭ್ಯ ಪಡೆಯಲು, ಆಧಾರ್ ಕಾರ್ಡ್, ಆರೋಗ್ಯ ಭಾರತ್ ಕಾರ್ಡ್ ಮಾಡಿಸಲು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣಪತ್ರ, ಚಾಲಕರ ಪರವಾನಗಿ, ಪ್ಯಾನ್ ಕಾರ್ಡ್ ಇತ್ಯಾದಿಗಳಿಗೆ ಅರ್ಜಿ ಸಲ್ಲಿಸುವಾಗ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ ಆದರೆ ಸಕಾಲದಲ್ಲಿ ರೇಷನ್ ಕಾರ್ಡ್ ಸಿಗದ ಕಾರಣ ಹಲವು ಸರಕಾರಿ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ರಾಜ್ಯಾದ್ಯಂತ ಆರ್ಥಿಕ ಬಲವುಳ್ಳ ಅನರ್ಹರು ಕ್ರಮವಾಗಿ ಹೊಂದಿದ್ದ 3,30,024 ಪಡಿತರ ಕಾರ್ಡ್ಗಳನ್ನು ಈ ಹಿಂದೆ ಆಹಾರ ಇಲಾಖೆ ರದ್ದು ಮಾಡಿದೆ. ಈ ಕಾರ್ಯ ಯಥಾಪ್ರಮಾರ ಮುಂದೆವರೆದಿದ್ದು; ಅಕ್ರಮ ಪಡಿತರ ಕಾರ್ಡ್ದಾರರನ್ನು ಪತ್ತೆ ಹಚ್ಚಲು ಆಹಾರ ಇಲಾಖೆ ತೊಡಗಿಸಿಕೊಂಡಿದ್ದು; ಹೊಸ ಕಾರ್ಡ್ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಮಾಹಿತಿಯಿದೆ.
ಲಕ್ಷ ಲಕ್ಷ ಅರ್ಜಿಗಳು ಬಾಕಿ
ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಕೋರಿ 2,95,986 ಅರ್ಜಿಗಳು ಸಲ್ಲಿಕೆಯಾಗಿದ್ದು; ಇವೆಲ್ಲವೂ ಬಾಕಿ ಉಳಿದಿವೆ. ಸರ್ಕಾರ ಅನುಮತಿ ಕೊಟ್ಟರೆ ‘ಅನರ್ಹರ ಪತ್ತೆ ಮೊದಲು; ಪಡಿತರ ಚೀಟಿ ವಿತರಣೆ ಆನಂತರ’ ಎಂಬ ಸೂತ್ರ ಅಳವಡಿಸಿಕೊಂಡು ಆಹಾರ ಇಲಾಖೆಯು ಅರ್ಜಿ ವಿಲೇವಾರಿ ಮಾಡಲಿದೆ.
ಈಗಾಗಲೇ ರೇಷನ್ ಕಾರ್ಡ್ನಲ್ಲಿ ಹೆಸರು ಬದಲಾವಣೆ, ಹೊಸ ಹೆಸರು ಸೇರ್ಪಡೆ, ಮೃತಪಟ್ಟವರ ಹೆಸರು ತೆಗೆದು ಹಾಕುವುದು, ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಹಾಗೂ ವಿಳಾಸ ಪರಿಷ್ಕರಣೆ ಸೇರಿದಂತೆ ಹಲವು ತಿದ್ದುಪಡಿಗೆ ಆಹಾರ ಇಲಾಖೆ ಅವಕಾಶ ಕೊಟ್ಟಿದೆ. ಈಚೆಗೆ ಅದು ಕೂಡ ಸ್ಥಗಿತಗೊಂಡಿದ್ದು; ಜೂನ್ 6ರ ನಂತರ, ನೀತಿ ಸಂಹಿತೆ ತೆರವುಗೊಂಡ ಬಳಿಕ ಎಲ್ಲವೂ ಮತ್ತೆ ಶುರುವಾಗಲಿವೆ ಎಂದು ಹೇಳಲಾಗುತ್ತಿದೆ.
Government Schemes for Women : ಮಹಿಳೆಯರಿಗಾಗಿ ಇರುವ ವಿಶೇಷ ಸರಕಾರಿ ಯೋಜನೆಗಳು
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
ಆನ್ಲೈನ್ ಮೂಲಕವೇ ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೊಸದಾಗಿ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಈ ಕೆಳಗಿನ ದಾಖಲಾತಿಗಳು ಬೇಕು…
- ವಾಸಸ್ಥಳದ ಪುರಾವೆ (ವೋಟರ್ ಐಡಿ, ಆಧಾರ್ ಕಾರ್ಡ್)
- ಕುಟುಂಬದ ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ
- ವಾರ್ಡ್ ಕೌನ್ಸಿಲರ್ ನೀಡಿದ ಸ್ವಯಂ ಘೋಷಣೆ ಪ್ರಮಾಣಪತ್ರ
ಅರ್ಜಿ ಎಲ್ಲಿ ಸಲ್ಲಿಸಬೇಕು?
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬರಲಿರುವ ಜೂನ್ 6ರ ಆನಂತರ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವ ಸಂಭವ ಹೆಚ್ಚಿದೆ. ಸಂಬAಧಿಸಿದ ಸಮಸ್ತ ದಾಖಲಾತಿಗಳ ಜೊತೆಗೆ www.ahara.kar.nic.in ಜಾಲತಾಣದ ಮೂಲಕ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸ್ವಯಂ ಅರ್ಜಿ ಸಲ್ಲಿಕೆಯ ಬಗ್ಗೆ ಗೊತ್ತಿಲ್ಲದವರು ಬಯೋಮೆಟ್ರಿಕ್ ಸೌಲಭ್ಯವಿರುವ ನಿಮ್ಮೂರಿನ ಗ್ರಾಮ ಒನ್ ಕೇಂದ್ರ, ನಗರ-ಪಟ್ಟಣ ಪ್ರದೇಶದವರಾದರೆ ಕರ್ನಾಟಕ ಒನ್, ಬೆಂಗಳೂರು ಒನ್ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.