Kisan Credit Card Loan Scheme : ಕೃಷಿ ಮತ್ತು ಪಶುಪಾಲನಾ (Agriculture and Animal Husbandry) ಚಟುವಟಿಕೆಗಳಿಗೆ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card – KCC) ಯೋಜನೆ ಜಾರಿಗೆ ತಂದಿದ್ದು; ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಕಮ್ಮಿ ಬಡ್ಡಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಕೃಷಿಗಾಗಿ 3 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯಬಹುದು. ಈ ಮೊತ್ತವನ್ನು ಶೇ.4ರ ಬಡ್ಡಿ ದರದಲ್ಲಿ ರೈತರಿಗೆ ನೀಡಲಾಗುತ್ತದೆ. ಹೈನುಗಾರಿಕೆ, ಕುರಿ-ಮೇಕೆ, ಕೋಳಿ, ಮೀನು ಸಾಕಣೆೆಗಾಗಿ 2 ಲಕ್ಷ ರೂಪಾಯಿ ವರೆಗೆ ಸಾಲ ಪಡೆಯಬಹುದು. ಈ ಕಾರ್ಡ್ ಪಡೆಯುವ ಕುರಿತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಕೆಸಿಸಿ ಲೋನ್ ಜಾಗೃತಿಗೆ ಕೃಷಿ ಆಯುಕ್ತರ ಆದೇಶ
ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದ ಕೆಸಿಸಿ ಸಾಲದ ಸದುಪಯೋಗವನ್ನು ಪಡೆಯುವಂತೆ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಮಿತಿ ಸಭೆಯಲ್ಲಿ (DLBC) ಚರ್ಚಿಸಿ ರೈತರಲ್ಲಿ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಕೃಷಿ ಆಯುಕ್ತರು ಕಡಿಮೆ ಬಡ್ಡಿ ದರದ ಕೆಸಿಸಿ ಸಾಲದ ಸದುಪಯೋಗವನ್ನು ಪಡೆಯುವಂತೆ ರೈತರಲ್ಲಿ ಅರಿವು ಮೂಡಿಸುವ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪ್ರಕಟಣೆ ಹೊರಡಿಸಿದ್ದಾರೆ.

ವಿತರಣೆಯಾದ ಕೆಸಿಸಿ ಸಾಲದ ವಿವರ
ರಾಜ್ಯದಲ್ಲಿ ಒಟ್ಟು 86 ಲಕ್ಷ ರೈತರಿದ್ದು, ಇವರಲ್ಲಿ ಒಟ್ಟು 77,68,363 ರೈತರು 88,008 ಕೋಟಿ ರೂಪಾಯಿ ಕೆಸಿಸಿ ಲೋನ್ ಪಡೆದಿರುತ್ತಾರೆ. ಕೃಷಿ ಆಯುಕ್ತರ ಪ್ರಕಟಣೆ ಅನ್ವಯ ಕೆಸಿಸಿ ಯೋಜನೆಯಡಿ ರೈತರಿಗೆ ನೀಡಿದ ಸಾಲದ ವಿವರ ಈ ಕೆಳಗಿನಂತಿದೆ:
- ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯದ 31 ಜಿಲ್ಲೆಗಳ 48,31,453 ರೈತರು 65,026 ಕೋಟಿ ರೂಪಾಯಿ ಪಡೆದಿದ್ದಾರೆ.
- ಸಹಕಾರಿ ಬ್ಯಾಂಕುಗಳಿAದ 21 ಜಿಲ್ಲೆಗಳ 29,26,910 ರೈತರು 22,992 ಕೋಟಿ ಸಾಲ ಪಡೆದಿರುತ್ತಾರೆ.
- ಆದರೆ ರಾಜ್ಯದ ಇನ್ನೂ 8,31,637 ರೈತರು ಕೆಸಿಸಿ ಸಾಲ ಪಡೆದಿರುವುದಿಲ್ಲ ಹಾಗೂ 10 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ರೈತರಿಗೆ ಸಹಕಾರ ಬ್ಯಾಂಕುಗಳು ಕೆಸಿಸಿ ಸಾಲವನ್ನು ಪಡೆಯಲು ಸೂಕ್ತ ಪ್ರೇರಣೆಯನ್ನು ನೀಡಬೇಕಾಗಿರುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್ಗಳು ಕಿಸಾನ್ ಕ್ರೆಡಿಟ್ ಕಾರ್ಡ್’ಗಳನ್ನು ನೀಡುತ್ತವೆ. ಬಡ್ಡಿ ದರಗಳು ಬ್ಯಾಂಕ್ನಿ೦ದ ಬ್ಯಾಂಕ್ಗೆ ಬದಲಾಗುತ್ತವೆ. ಸಂಸ್ಕರಣಾ ಶುಲ್ಕಗಳು ಮತ್ತು ವಿಮಾ ಪ್ರೀಮಿಯಂ ಸಹ ಅನ್ವಯಿಸುತ್ತದೆ.
ಸಾಲ ಪಡೆದ ರೈತರಿಗೆ ಬೆಳೆ ಕಟಾವು ಅವಧಿ ಆಧರಿಸಿ ಬ್ಯಾಂಕ್ಗಳು ಮರುಪಾವತಿಯ ಗಡುವನ್ನು ಸೂಚಿಸುತ್ತವೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಕೂಡ ಲಭ್ಯವಿದೆ. ಸಾಲಗಾರರು ವೈಯಕ್ತಿಕ ಅಪಘಾತ ವಿಮೆ ಮತ್ತು ಆರೋಗ್ಯ ವಿಮೆಯನ್ನು ಸಹ ತೆಗೆದುಕೊಳ್ಳಬಹುದು.

ಕೆಸಿಸಿ ಲೋನ್ ವಿಶೇಷತೆಗಳು
ರೈತರು 1.60 ಲಕ್ಷ ರೂಪಾಯಿಂದ 3 ಲಕ್ಷ ರೂಪಾಯಿ ತನಕ ಸಾಲ ಪಡೆಯಬಹುದು. ಸಾಲ ಪಡೆದವರಿಗೆ ಅಪಘಾತ ವಿಮೆ ಹಾಗೂ ಆರೋಗ್ಯ ವಿಮೆ ಸೌಲಭ್ಯವಿರುತ್ತದೆ. ಅಪಘಾತದಿಂದ ಅಂಗವೈಕಲ್ಯ ಅಥವಾ ಸಾವಾದರೆ 50,000 ರೂಪಾಯಿ ಹಾಗೂ ಇತರ ಸಂದರ್ಭಗಳಲ್ಲಿ 25,000 ರೂಪಾಯಿ ವಿಮೆ ಸೌಲಭ್ಯವಿದೆ.
ಬ್ಯಾಂಕಿನಿ೦ದ ನಗದು ವಿತ್ ಡ್ರಾಗೆ ಪಾಸ್ ಬುಕ್ ನೀಡಲಾಗುತ್ತದೆ. 25,000 ರೂಪಾಯಿ ನಗದು ಮಿತಿಯೊಂದಿಗೆ ಚೆಕ್ ಬುಕ್ ವಿತರಿಸಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ೦ತಹ ರೈತರಿಗೆ ಬಡ್ಡಿ ಮೇಲೆ ಸಬ್ಸಿಡಿ ಸಹ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವವರು ಆನ್ಲೈನ್ ಹಾಗೂ ಆಫ್ಲೈನ್ ಎರಡೂ ವಿಧದಲ್ಲೂ ಕಿಸಾನ್ ಕ್ರೆಢಿಟ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೇಲ್ಕಾಣಿಸಿದ ಬ್ಯಾಂಕುಗಳ ವೆಬ್ಸೈಟ್ಗೆ ಭೇಟಿ ನೀಡಿ ಸೂಕ್ತ ದಾಖಲಾತಿಗಳೊಂದಿಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಅಥವಾ ಸಾಲದ ಅಗತ್ಯ ಇರುವ ರೈತರು ಹತ್ತಿರದ ಬ್ಯಾಂಕುಗಳಿಗೆ ನೇರವಾಗಿ ಭೇಟಿ ನೀಡಿ ಕೆಸಿಸಿ ಯೋಜನೆ ಬಗ್ಗೆ ಮಾಹಿತಿ ಪಡೆಯಬಹುದು. ಆನಂತರ ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ನಮೂನೆ ಪಡೆದು ದಾಖಲಾತಿಯೊಂದಿಗೆ ಸಲ್ಲಿಸಬಹುದು. ಬಳಿಕ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿ ಹತ್ತಿರದ ಬ್ಯಾಂಕಿಗಳಿಗೆ ಭೇಟಿ ನೀಡಿ ಅಥವಾ ರಾಜ್ಯ ಕೃಷಿ ಆಯುಕ್ತರು ಕೆಸಿಸಿ ಲೋನ್ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಆದೇಶ ಮಾಡಿರುವುದರಿಂದ ಸ್ಥಳೀಯ ಕೃಷಿ ಅಧಿಕಾರಿಗಳನ್ನು ವಿಚಾರಿಸಿ ರೈತರು ಕೆಸಿಸಿ ಲೋನ್ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.