ಕಾರ್ಮಿಕರ ಕಲ್ಯಾಣ ಪರಿಹಾರವನ್ನು 8 ಲಕ್ಷ ರೂ.ಗೆ ಹೆಚ್ಚಿಸಿ (Karnataka Labour Welfare Scheme) ಸರ್ಕಾರ ಆದೇಶ ಹೊರಡಿಸಿದೆ. ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ…
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಹಲವು ಕಲ್ಯಾಣ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಪೈಕಿ ಮಕ್ಕಳ ಶಿಕ್ಷಣ ಸಹಾಯಧನ, ಮಾಸಿಕ ಪಿಂಚಣಿ ಯೋಜನೆ, ಅಪಘಾತ, ಸಾವು, ಗಂಭೀರ ರೋಗಗಳಿಗೆ ವೈದ್ಯಕೀಯ ನೆರವು, ಗರ್ಭಿಣಿಯರಿಗೆ ಸಹಾಯಧನ, ಕಾರ್ಮಿಕರ ಮಕ್ಕಳ ಮದುವೆ ಸಹಾಯಧನದಂತಹ ಹಲವು ಪರಿಹಾರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ.
ಇದೀಗ ರಾಜ್ಯ ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕಾಗಿ ನೀಡುವ ಸಹಾಯಧನ ಮೊತ್ತವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಪರಿಷ್ಕೃತ ಆದೇಶದ ಅನ್ವಯ ಅಪಘಾತದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ₹8 ಲಕ್ಷ ಪರಿಹಾರಧನ ಹಾಗೂ ಸಾಧಾರಣ ಸಾವಿನ ಬಳಿಕ ಅಂತ್ಯಕ್ರಿಯೆ ವೆಚ್ಚದ ಸಹಾಯಧನವನ್ನು ₹1.5 ಲಕ್ಷಕ್ಕೆ ಹೆಚ್ಚಿಸುವ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಈ ಪರಿಹಾರ ಯಾರಿಗೆಲ್ಲ ಅನ್ವಯ?
ಈ ಸೌಲಭ್ಯಗಳು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಮಾತ್ರ ಅನ್ವಯವಾಗುತ್ತದೆ. ನೋಂದಣಿ ಇಲ್ಲದ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆಯಲು ಅರ್ಹರಾಗಿರುವುದಿಲ್ಲ. ನೋಂದಾಯಿತರಾದ ತಕ್ಷಣದಿಂದಲೇ ಇವರಿಗೆ ಹಲವಾರು ಕಲ್ಯಾಣ ಯೋಜನೆಗಳ ಲಾಭ ಸಿಗುತ್ತದೆ.
ಪರಿಷ್ಕೃತ ಪರಿಹಾರದ ವಿವರಗಳು
ಅಂತ್ಯಕ್ರಿಯೆ ವೆಚ್ಚ ಸಹಾಯಧನ : ಕಾರ್ಮಿಕರ ಕಲ್ಯಾಣ ಮಂಡಳಿಯು ಈ ಮೊದಲು ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚವಾಗಿ ₹75,000 ಸಹಾಯಧನ ನೀಡುತ್ತಿತ್ತು. ಇದೀಗ ಈ ಮೊತ್ತವನ್ನು ₹1.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಅಪಘಾತದಿಂದ ಮರಣ ಹೊಂದಿದರೆ ಪರಿಹಾರ ಧನ: ಕೆಲಸದ ಸ್ಥಳದಲ್ಲಿ ಸಂಭವಿಸಿದ ಅಪಘಾತದಿಂದ ಕಾರ್ಮಿಕ ಮೃತರಾದರೆ ಅವರ ಕುಟುಂಬಕ್ಕೆ ₹5 ಈ ಪರಿಹಾರ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವನ್ನು ₹8 ಲಕ್ಷಕ್ಕೆ ಏರಿಸಲಾಗಿದೆ.
E-Swathu- ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಆಸ್ತಿಗಳಿಗೂ ಇ-ಸ್ವತ್ತು ವಿತರಣೆ | ಸರ್ಕಾರದ ಹೊಸ ಆದೇಶ
ನೋಂದಣಿಗೆ ಯಾರೆಲ್ಲ ಅರ್ಹರು?
ಕನಿಷ್ಠ 18 ವರ್ಷದಿಂದ 60 ವರ್ಷ ವಯಸ್ಸಿನ ಕಟ್ಟಡ ಅಥವಾ ಇತರೆ ನಿರ್ಮಾಣ ಕ್ಷೇತ್ರದಲ್ಲಿ ಕನಿಷ್ಠ 90 ದಿನಗಳ ಕೆಲಸದ ಅನುಭವ ಹೊಂದಿರುವವರು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಆಧಾರ್ ಕಾರ್ಡ್, ಕೆಲಸದ ದೃಢೀಕರಣ ಪತ್ರ, ಬ್ಯಾಂಕ್ ಖಾತೆ ವಿವರಗಳು ಹಾಗೂ ವಯಸ್ಸು ಮತ್ತು ವಿಳಾಸದ ಪುರಾವೆಯಂತಹ ಪ್ರಮುಖ ದಾಖಲೆಗಳೊಂದಿಗೆ ಅರ್ಹ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು.
ನೋಂದಣಿ ಮಾಡುವುದು ಹೇಗೆ?
ನಿಮ್ಮ ತಾಲ್ಲೂಕು ಅಥವಾ ಜಿಲ್ಲಾ ಕಾರ್ಮಿಕ ಕಲ್ಯಾಣ ಕಚೇರಿಗೆ ಭೇಟಿ ನೀಡಿ ಮೇಲ್ಕಾಣಿಸಿದ ದಾಖಲಾತಿಗಳೊಂದಿಗೆ ನೊಂದಣಿಗೆ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಥವಾ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕೃತ ವೆಬ್ಸೈಟ್ kbocwwb.karnataka.gov.in ನಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ನೀವು ಅಥವಾ ನಿಮ್ಮ ಮನೆ, ಗ್ರಾಮದಲ್ಲಿ ಇರುವ ಕಾರ್ಮಿಕರಿಗೆ ಈ ಯೋಜನೆಯ ಬಗ್ಗೆ ತಿಳಿದಿಲ್ಲದಿದ್ದರೆ ಕೂಡಲೇ ಅವರಿಗೆ ತಿಳಿಸಿ, ಸಹಾಯ ಮಾಡಿ. ಸರಳ ದಾಖಲೆಗಳೊಂದಿಗೆ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ಸರ್ಕಾರದ ಸಹಾಯಧನ ಪಡೆಯಬಹುದಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.