ವಿಮಾ ಕಂಪನಿಯ ವಿರುದ್ಧ ದೂರು (Insurance Complaint Online) ಸಲ್ಲಿಸುವುದು ಹೇಗೆ? ಕಂಪನಿಯ ನಿಯಮಗಳ ಅನ್ವಯ ಪರಿಹಾರ ಪಡೆದುಕೊಳ್ಳುವುದು ಹೇಗೆ? ಇಂತಹ ದೂರುಗಳನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು ಎಂಬುವುದನ್ನು ಇಲ್ಲಿ ತಿಳಿಯೋಣ…
ಈಗೀಗ ವಿಮೆ ಪಾಲಿಸಿಗಳನ್ನು ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಕ್ಲೈಮ್’ಗಳು ಹೆಚ್ಚುತ್ತಿವೆ. ಆದರೆ, ಬಹುತೇಕ ಸಂದರ್ಭದಲ್ಲಿ ಗ್ರಾಹಕರಿಗೆ ವಂಚನೆಯಾಗುತ್ತಿದೆ ಎಂಬ ದೂರುಗಳಿದ್ದು; ಗ್ರಾಹಕರು ಏನು ಮಾಡಬೇಕೆಂದು ತೋಚದೆ ಪರದಾಡುವ ಪರಿಸ್ಥಿತಿ ಇದೆ.
ವಿಮಾ ಕಂಪನಿಗಳ ಮೇಲೆ IRDAI ನಿಯಂತ್ರಣ
ಆರೋಗ್ಯ ವಿಮೆಯೂ ಸೇರಿದಂತೆ ಎಲ್ಲ ರೀತಿಯ ವಿಮಾ ಪಾಲಿಸಿಗಳು ಮತ್ತು ಎಲ್ಲಾ ವಿಮಾ ಕಂಪನಿಗಳ ವ್ಯವಹಾರಗಳನ್ನು ನಿಯಂತ್ರಿಸಲು ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು (IRDAI-Insurance Regulatory and Development Authority of India) ಸರಕಾರ ಸ್ಥಾಪಿಸಿದೆ.
IRDAI ಒಂದು ಸ್ವಾಯತ್ತ ಮತ್ತು ಭಾರತ ಸರಕಾರದ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಶಾಸನಬದ್ದ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಮೆ ಮತ್ತು ಮರು-ವಿಮೆ ಉದ್ಯಮಗಳನ್ನು ನಿಯಂತ್ರಿಸುವ ಮತ್ತು ಪರವಾನಗಿ ನೀಡುವ ಕಾರ್ಯವನ್ನು ಹೊಂದಿದೆ.
ಪಾಲಿಸಿದಾರರ ಸಮಸ್ಯೆಗಳನ್ನು ಪರಿಹರಿಸಲು ಒಂದು ಸೂಕ್ತ ವ್ಯವಸ್ಥೆಯನ್ನು ಸಹ ಈ ನಿಯಂತ್ರಕರು ಜಾರಿಗೆ ತಂದಿದ್ದಾರೆ. ಇದರ ಎದುರು ನಿಮ್ಮ ಸಮಸ್ಯೆಯನ್ನು ಸೂಕ್ತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅವಕಾಶವಿದೆ.
ದೂರು ಸಲ್ಲಿಸುವ ಹಂತ ಹಂತದ ಮಾಹಿತಿ
ಹಂತ-1: ಮೊದಲಿಗೆ ವಿಮಾ ಕಂಪನಿಯ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು (Grievance Redressal Officer-GRO) ಸಂಪರ್ಕಿಸಿ. ಆ ವಿಭಾಗಕ್ಕೆ ಲಿಖಿತವಾಗಿ ದೂರು ನೀಡಿ.
ಈ ದೂರಿನಲ್ಲಿ ಪಾಲಸಿ ವಿವರಗಳು (Policy Number, Claim Number), ತಿರಸ್ಕಾರದ ಕಾರಣ ಮತ್ತು ನಿಮ್ಮ ವಾದ ಸಮರ್ಥಿಸುವ ಅಂಶಗಳು ಹಾಗೂ ಮೆಡಿಕಲ್ ರಿಪೋರ್ಟ್, ವಿಮಾ ನಿಯಮದ ಪ್ರತಿಗಳು, ತಜ್ಞರ ಅಭಿಪ್ರಾಯದಂತಹ ಪೂರಕ ದಾಖಲೆಗಳು ಇರಲಿ.
ಹಂತ-2: ಕುಂದುಕೊರತೆ ನಿವಾರಣೆ ವಿಭಾಗವು ನಿಮ್ಮ ದೂರಿಗೆ 15 ದಿನಗಳೊಳಗೆ ಉತ್ತರ ನೀಡಬೇಕು. GRO ನೀಡಿದ ಉತ್ತರ ನಿಮಗೆ ತೃಪ್ತಿಕರವಾಗದಿದ್ದರೆ ಅಥವಾ ಸಮಯ ಮೀರಿದರೆ, ‘IRDAI’ಗೆ ದೂರು ಸಲ್ಲಿಸಬಹುದು.
ದೂರು ಸಲ್ಲಿಸಲು IGMS ಪೋರ್ಟಲ್ಗೆ ಭೇಟಿ ನೀಡಬಹುದು. complaints@irdai.gov.inಗೆ ಇ-ಮೇಲ್ ಸಂಪರ್ಕಿಸಬಹುದು. ಸಹಾಯವಾಣಿ 155255 ಅಥವಾ 1800 4254 732 ಸಂಖ್ಯೆ ಸಂಪರ್ಕಿಸಬಹುದು.

ಹಂತ-3: ಇಲ್ಲಿಯೂ ಸೂಕ್ತ ಪರಿಹಾರ ಅಥವಾ ಪ್ರತಿಕ್ರಿಯೆ ದೊರೆಯದಿದ್ದರೆ ನಿಮ್ಮ ಪ್ರಾದೇಶಿಕ ವಿಮಾ Ombudsman ಕಚೇರಿಗೆ ದೂರು ಸಲ್ಲಿಸಬಹುದು. ಲಿಖಿತ ಪತ್ರ ಅಥವಾ ಇಮೇಲ್ ಮೂಲಕ ದೂರು ನೀಡಲು ಅವಕಾಶವಿದೆ.
ಸದರಿ ದೂರಿನಲ್ಲಿ ಪಾಲಿಸಿ ವಿವರಗಳು, ತಿರಸ್ಕಾರದ ಕಾರಣ, ಪೂರಕ ದಾಖಲೆಗಳನ್ನು ಸೇರಿಸಿ ಮುದ್ರಿತ ಪ್ರತಿಯನ್ನು Ombudsman ಕಚೇರಿಗೆ ಕಳುಹಿಸಿ. ಈ Ombudsmanರಿಗೆ ನ್ಯಾಯಾಧೀಶರ ಅಧಿಕಾರವಿರುತ್ತದೆ.
Ombudsman ಅವರು ಎರಡೂ ಪಕ್ಷಗಳ ವಾದಗಳನ್ನು ಆಲಿಸಿ ಸೂಕ್ತ ಆದೇಶವನ್ನು ಕೊಡುತ್ತಾರೆ. ಪರಿಹಾರದ ಜೊತೆಗೆ ಖರ್ಚನ್ನೂ ಪಾಲಿಸಿದಾರರಿಗೆ ಕೊಡಿಸಿದ ಉದಾಹರಣೆಗಳಿವೆ. ಅವರು ನೀಡಿದ ನಿರ್ದೇಶನವನ್ನು ವಿಮಾ ಕಂಪನಿಗಳು ಪಾಲಿಸಬೇಕಾಗುತ್ತದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.