ಪಶುಪಾಲನಾ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಹಾಗೂ ಕೆಎಂಎಫ್ ಸಂಸ್ಥೆಗಳ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಸರ್ಕಾರಿ ಸಬ್ಸಿಡಿ ಯೋಜನೆಗಳ (Hasu Kuri Koli Subsidy) ಸಂಪೂರ್ಣ ಮಾಹಿತಿ ಇಲ್ಲಿದೆ…
ಹೈನುಗಾರಿಕೆ, ಕುರಿ-ಮೇಕೆ ಸಾಕಣೆ, ಕೋಳಿ ಸಾಕಣೆ, ಮೇವು ಉತ್ಪಾದನೆ ಇವೆಲ್ಲಾ ಗ್ರಾಮೀಣ ಕುಟುಂಬಗಳಿಗೆ ನಿರಂತರ ಆದಾಯದ ಮೂಲಗಳಾಗಿವೆ.ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೈನುಗಾರಿಕೆ ಹಾಗೂ ಪಶುಪಾಲಕರನ್ನು ಪ್ರೋತ್ಸಾಹಿಸಲು ಹಲವು ಸಬ್ಸಿಡಿ ಮತ್ತು ನೆರವು ಯೋಜನೆಗಳನ್ನು ಜಾರಿಗೆ ತಂದಿವೆ.
2025-26ನೇ ಸಾಲಿನಲ್ಲಿ ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ ಮತ್ತು ಕೆಎಂಎಫ್ ಮುಂತಾದ ಸಂಸ್ಥೆಗಳ ಮೂಲಕ ಹೈನುಗಾರರು, ಕುರಿ-ಮೇಕೆ ಸಾಕಾಣಿಕೆದಾರರು ಮತ್ತು ಕೋಳಿ ಸಾಕಾಣಿಕೆದಾರರಿಗೆ ಲಭ್ಯವಿರುವ ಪ್ರಮುಖ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಮತ್ತು ಬಡ್ಡಿ ಸಹಾಯಧನ ಯೋಜನೆ
ಹಾಲು ಉತ್ಪಾದನೆಗೆ ಪ್ರೋತ್ಸಾಹ ನೀಡಿ ರೈತರ ಆದಾಯವನ್ನು ಹೆಚ್ಚಿಸಲು, ಕೆಎಂಎಫ್ಗೆ ಹಾಲು ಪೂರೈಕೆ ಮಾಡುವ ಹೈನುಗಾರರಿಗೆ ಪ್ರತಿ ಲೀಟರ್ಗೆ ₹5 ಪ್ರೋತ್ಸಾಹಧನ ನೀಡಲಾಗುತ್ತದೆ.
ಹಸು ಅಥವಾ ಎಮ್ಮೆ ಖರೀದಿಗೆ ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿದ ಮಹಿಳಾ ಫಲಾನುಭವಿಗಳಿಗೆ ಶೇ.6ರ ಬಡ್ಡಿ ಸಹಾಯಧನ ನೀಡಲಾಗುತ್ತದೆ.
ಈ ಯೋಜನೆಯ ಲಾಭವನ್ನು ಕೆಎಂಎಫ್ ಸದಸ್ಯರಾಗಿರುವ ಹೈನುಗಾರರು ಹಾಗೂ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಪಡೆಯಬಹುದು.
ಉಚಿತ ನಾಟಿ ಕೋಳಿ ಮರಿಗಳ ವಿತರಣೆ
ಗ್ರಾಮೀಣ ಮಹಿಳೆಯರ ಸ್ವಾವಲಂಬನೆಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಿದ್ದು; ಈ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಉಚಿತವಾಗಿ 20 ನಾಟಿ ಕೋಳಿ ಮರಿಗಳನ್ನು ವಿತರಿಸಲಾಗುತ್ತದೆ.
ಸುಮಾರು 4 ರಿಂದ 6 ವಾರ ವಯಸ್ಸಿನ, ಆರೋಗ್ಯ ಲಸಿಕೆ ಹಾಕಿದ ಹಾಗೂ ಗ್ರಾಮೀಣ ಪರಿಸರದಲ್ಲಿ ಬೆಳೆದ ಕೋಳಿ ಮರಿಗಳನ್ನು ವಿತರಿಸಲಾಗುತ್ತದೆ. ಈ ಯೋಜನೆಯಿಂದ ಸಾಂಪ್ರದಾಯಿಕ ನಾಟಿ ಕೋಳಿ ತಳಿಯ ಸಂರಕ್ಷಣೆ ಸಾಧ್ಯವಾಗುತ್ತದೆ.

ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ
ಹಸು, ಎಮ್ಮೆ, ಎತ್ತು, ಹೋರಿ ಮುಂತಾದ ಪ್ರಮುಖ ಜಾನುವಾರುಗಳು ರೈತರ ಕುಟುಂಬದ ಆರ್ಥಿಕ ಬಲವಾಗಿವೆ. ಆಕಸ್ಮಿಕವಾಗಿ ಜಾನುವಾರು ಸತ್ತು ಹೋದರೆ ಹೈನುಗಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದನ್ನು ಮನಗಂಡು ಸರ್ಕಾರವು ಜಾನುವಾರುಗಳ ಆಕಸ್ಮಿಕ ಸಾವಿಗೆ ಗರಿಷ್ಠ ₹1,00,000 ವರೆಗೆ ಪರಿಹಾರ ನೀಡುತ್ತದೆ.
ಈ ಯೋಜನೆ 6 ತಿಂಗಳ ಮೇಲ್ಪಟ್ಟ ಜಾನುವಾರುಗಳಿಗೆ ಮಾತ್ರ ಅನ್ವಯವಾಗುತ್ತದೆ. ರೈತರು ಅಥವಾ ಹೈನುಗಾರರು ಈ ವಿಮಾ ಪರಿಹಾರವನ್ನು ಪಡೆಯಲು ಸರಳ ಪ್ರಮಾಣ ಪತ್ರಗಳು ಹಾಗೂ ದಾಖಲೆಗಳನ್ನು ಸಲ್ಲಿಸಬೇಕು.
ಕುರಿ-ಮೇಕೆ ಸಾಕಾಣಿದಾರರಿಗೆ ಪರಿಹಾರ ಯೋಜನೆ
ಕುರಿ ಮತ್ತು ಮೇಕೆ ಸಾಕಾಣಿಕೆ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರಲ್ಲಿ ಸಂಭವನೀಯವಾದ ರೋಗಗಳಿಂದ ಅಥವಾ ಅಪಘಾತದಿಂದ ಕುರಿ ಅಥವಾ ಮೇಕೆ ಸತ್ತರೆ ಹಾನಿ ಜಾಸ್ತಿಯೇ.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯಲ್ಲಿ ನೋಂದಾಯಿತ ಸಾಕಾಣಿಕೆದಾರರಿಗೆ 6 ತಿಂಗಳ ಮೇಲ್ಪಟ್ಟ ಕುರಿ/ಮೇಕೆಯ ಆಕಸ್ಮಿಕ ಸಾವಿಗೆ ₹5,000 ಪರಿಹಾರ ಹಾಗೂ 3 ರಿಂದ 6 ತಿಂಗಳ ಕುರಿ/ಮೇಕೆ ಸಾವಿಗೆ ₹3,500 ಪರಿಹಾರ ನೀಡಲಾಗುತ್ತದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
ಈ ಯೋಜನೆ ಕುರಿ-ಮೇಕೆ ಸಾಕಾಣಿಕೆಗೆ ದೊಡ್ಡ ಉತ್ಸಾಹವನ್ನು ನೀಡುತ್ತದೆ.ಇದನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಕಾರ ಸಂಘಗಳ ಸದಸ್ಯರಿಗಾಗಿ ರೂಪಿಸಲಾಗಿದೆ.
ಪ್ರತಿ ಘಟಕಕ್ಕೆ 20+1 ಕುರಿ/ಮೇಕೆಗಳನ್ನು ಸಾಕಲು ನೆರವು ನೀಡಲಾಗುತ್ತದೆ. ₹1.75 ಲಕ್ಷ ವರೆಗೆ ಹಣಕಾಸು ನೆರವು ನೀಡಲಾಗುತ್ತದೆ. ಇದರಿಂದ ಕುರಿಗಾರರ ಉತ್ಸಾಹ ಹೆಚ್ಚಿದ್ದು; ಅನೇಕರಿಗೆ ಈ ಯೋಜನೆಯ ಪ್ರಯೋಜನ ಲಭ್ಯವಾಗಿದೆ.
ಮೇವು ಕತ್ತರಿಸುವ ಯಂತ್ರ (ಚಾಪ್ ಕಟ್ಟರ್) ಸಹಾಯಧನ
ಮೇವು ಶೇಖರಣೆ ಹಾಗೂ ಸಂಸ್ಕರಣೆ ಸುಲಭಗೊಳಿಸಲು ಶೇ.50ರ ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರವನ್ನು ನೀಡಲಾಗುತ್ತದೆ. ಅರ್ಹ ಹೈನುಗಾರರು ಅಥವಾ ಹಾಲು ಉತ್ಪಾದಕರ ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯಬಹುದು. ಈ ಯಂತ್ರದ ಬಳಕೆ ಜಾನುವಾರುಗಳಿಗೆ ಸುಲಭವಾಗಿ ತಾಜಾ ಹಾಗೂ ಉತ್ತಮ ಪೌಷ್ಠಿಕ ಆಹಾರ ತಯಾರಿಸಲು ನೆರವಾಗುತ್ತದೆ.
ಉಚಿತ ಮೇವಿನ ಬೀಜ ಕಿಟ್ ವಿತರಣೆ
ಹೈನುಗಾರ ರೈತರಿಗಾಗಿ ಉಚಿತ ಮೇವಿನ ಬೀಜಗಳ ಕಿಟ್ ವಿತರಣೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ರೈತರು ತಮ್ಮ ಹೊಲದಲ್ಲಿ ಉತ್ತಮ ಗುಣಮಟ್ಟದ ಮೇವು ಬೆಳೆಯಬಹುದು.
ಮೇವು ಉತ್ಪಾದನೆಯು ಹಸುವಿನ ಆರೋಗ್ಯ, ಹಾಲು ಉತ್ಪಾದನೆ, ಪಶುಪಾಲನೆಯ ವೆಚ್ಚ ಕಡಿಮೆ ಮಾಡುತ್ತದೆ. ಹಾಲು ಉತ್ಪಾದಕರ ಸಂಘದ ಸದಸ್ಯ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದು.
ಸಂಚಾರಿ ಪಶು ಚಿಕಿತ್ಸಾ ಘಟಕ ಸೇವೆ
ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಪಶು ಚಿಕಿತ್ಸಾ ಸೇವೆ ಒದಗಿಸಲು 1962 ಸಹಾಯವಾಣಿ ಆರಂಭಿಸಲಾಗಿದೆ. ರೈತರು 1962 ಗೆ ಕರೆ ಮಾಡಿದರೆ ಮನೆ ಬಾಗಿಲಲ್ಲೇ ಹಸು, ಎಮ್ಮೆ ಮುಂತಾದ ಜಾನುವಾರುಗಳಿಗೆ ಲಸಿಕೆ, ಗರ್ಭಪರೀಕ್ಷೆ, ಪ್ರಥಮ ಚಿಕಿತ್ಸೆ ಸೇವೆ ಪಡೆಯಬಹುದು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದೆ ಮತ್ತು ಗ್ರಾಮೀಣ ಪ್ರದೇಶದ ರೈತರ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಉಚಿತ ಲಸಿಕೆ ಕಾರ್ಯಕ್ರಮ
ಇನ್ನು ಜಾನುವಾರುಗಳ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ವಿವಿಧ ಉಚಿತ ಲಸಿಕೆ ಅಭಿಯಾನಗಳು ಜಾರಿಯಲ್ಲಿವೆ. ಕಾಲುಬಾಯಿ ರೋಗ, ಕಂದುರೋಗ, ಪಿಪಿಆರ್, ಹಂದಿಜ್ವರ, ಚರ್ಮಗಂಟು ರೋಗ ಮುಂತಾದವುಗಳಿಗೆ ಉಚಿತ ಲಸಿಕೆ ನೀಡಲಾಗುತ್ತದೆ.
ಹೈನುಗಾರರು ಮತ್ತು ಪಶುಪಾಲಕರು ಹತ್ತಿರದ ಪಶು ಆಸ್ಪತ್ರೆ ಅಥವಾ ಪಶುಪಾಲನಾ ಇಲಾಖೆಯ ಸಿಬ್ಬಂದಿಯಿಂದ ಲಸಿಕೆ ಹಾಕಿಸಿಕೊಳ್ಳಬಹುದು. ಇದು ಮಹಾಮಾರಿ ರೋಗ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಈ ಯೋಜನೆಗಳ ಲಾಭ ಪಡೆಯುವುದು ಹೇಗೆ?
ಮೇಲ್ಕಾಣಿಸಿದ ಯೋಜನೆಗಳ ಪೈಕಿ ಹಲವು ಯೋಜನೆಗಳನ್ನು ರಾಜ್ಯ ಪಶುಪಾಲನಾ ಇಲಾಖೆ ತಾನೇ ಅಭಿಯಾನದ ಮೂಲಕ ಹೈನುಗಾರರ ಮನೆಮನೆಗೆ ತಲುಪಿಸುತ್ತಿದೆ. ಕೆಲವು ಯೋಜನೆಗಳಿಗೆ ಕಾಲಕಾಲಕ್ಕೆ ಅರ್ಜಿ ಆಹ್ವಾನ ಮಾಡಲಾಗುತ್ತದೆ.
ಹತ್ತಿರದ ತಾಲ್ಲೂಕು ಪಶುಪಾಲನಾ ಇಲಾಖೆಯ ಕಚೇರಿ ಅಥವಾ ಕುರಿ ಸಹಕಾರ ಸಂಘವನ್ನು ಸಂಪರ್ಕಿಸಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಕೆಎಂಎಫ್ ಅಥವಾ ಕುರಿ ಸಹಕಾರ ಸಂಘದ ಸದಸ್ಯತ್ವ ಪ್ರಮಾಣಪತ್ರಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹತಾ ಪರಿಶೀಲನೆಯ ನಂತರ ಸಬ್ಸಿಡಿ ಅಥವಾ ನೆರವು ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗೆ 8277200300 ಉಚಿತ ಸಹಾಯವಾಣಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಿರಿ…
PM Kisan 20ne Kanthu- ರೈತರಿಗೆ PM-KISAN 20ನೇ ಕಂತಿನ ₹2,000 ರೂ. ಹಣ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ…