ಮುಂದಿನ ಆರು ತಿಂಗಳ ಒಳಗೆ ಬಗರ್ಹುಕುಂ (Bagair Hukum) ಅರ್ಜಿಗಳ ವಿಲೇವಾರಿ ಮಾಡಿ ಮುಗಿಸಿ ಭೂ ಮಂಜೂರಾತಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ತಹಸೀಲ್ದಾರರಿಗೆ ತಾಕೀತು ಮಾಡಿದ್ದಾರೆ…
ರಾಜ್ಯದಲ್ಲಿ ಬಗರ್ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಗೆ ವೇಗದ ಅಗತ್ಯವಿದ್ದು, ಮುಂದಿನ ಆರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಹಸೀಲ್ದಾರರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ತ್ವರಿತ ಅರ್ಜಿ ವಿಲೇವಾರಿಗೆ ಕಟ್ಟುನಿಟ್ಟಿನ ಆದೇಶ
ರಾಜ್ಯದಲ್ಲಿ ಸಾವಿರಾರು ಅರ್ಜಿದಾರರು ತಮ್ಮ ಸರ್ಕಾರಿ ಭೂಮಿ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಅರ್ಜಿಗಳ ತ್ವರಿತ ವಿಲೇವಾರಿ ಕಂದಾಯ ಇಲಾಖೆಯ ಪ್ರಮುಖ ಆದ್ಯತೆಯಾಗಿದೆ. ಕೆಲವು ತಹಸೀಲ್ದಾರರು ಅರ್ಜಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು; ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ರಾಜ್ಯದ ಎಲ್ಲಾ ತಹಸೀಲ್ದಾರರು ಶೀಘ್ರವಾಗಿ ಕ್ರಮ ಕೈಗೊಂಡು ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅರ್ಹ ರೈತರಿಗೆ ಸರ್ಕಾರಿ ಜಮೀನು ಮಂಜೂರು ಮಾಡುವ ಪ್ರಯತ್ನವಾಗಬೇಕು ಎಂದು ಕಂದಾಯ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನೆ
ನಿನ್ನೆ ಮಾರ್ಚ್ 28ರ ಶುಕ್ರವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಸೀಲ್ದಾರರ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬಗರ್ಹುಕುಂ ಸಂಬಂಧಿತ ಕಾರ್ಯಗಳು ಸರಾಗವಾಗಿ ನಡೆಯಬೇಕು ಎಂದು ಸೂಚಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ಕಾರ್ಯಗಳು ನಿರೀಕ್ಷೆಗೂ ಮೀರಿ ಉತ್ತಮವಾಗಿ ನಡೆದಿದ್ದರೂ, ಇನ್ನೂ ಕೆಲವು ಅಧಿಕಾರಿಗಳು ಅಸಡ್ಡೆ ತೋರುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬಗರ್ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರರ ಬಳಿ ಸಲ್ಲಿಸಿದ ಅರ್ಜಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾನ್ಯತೆ ಪಡೆದ ಅರ್ಜಿಗಳಾಗಿವೆ. ಹೀಗಾಗಿ, ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಬೇಕು ಎಂದು ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಇದನ್ನೂ ಓದಿ: East Monsoon Rain- ಕರ್ನಾಟಕದ ಈ ಜಿಲ್ಲೆಗಳಲ್ಲಿ ಒಂದು ವಾರ ಮಳೆ | ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ
ಅರ್ಜಿ ವಿಲೇವಾರಿ ವಿಳಂಬವಾದರೆ ಕಠಿಣ ಕ್ರಮದ ಸೂಚನೆ
ಬಗರ್ಹುಕುಂ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬವಾದರೆ, ಸರ್ಕಾರಿ ಭೂಮಿ ಮಂಜೂರಾತಿಗಾಗಿ ಕಾದು ಕೂತಿರುವ ಅರ್ಹ ರೈತರು ತೀವ್ರ ಹತಾಶೆ ಅನುಭವಿಸಬೇಕಾಗುತ್ತದೆ. ಈ ಕಾರಣದಿಂದ, ಸರ್ಕಾರದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತಹಸೀಲ್ದಾರರು ಜವಾಬ್ದಾರಿ ತೆಗೆದುಕೊಳ್ಳಬೇಕು.
ಈ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಮತ್ತು ಸಂಬAಧಪಟ್ಟ ಅಧಿಕಾರಿಗಳು ಸಮರ್ಪಕ ಸಮನ್ವಯ ಸಾಧಿಸಬೇಕು. ಈ ಪ್ರಕ್ರಿಯೆಗೆ ಯಾವುದೇ ಲೋಪ ಉಂಟಾದರೆ, ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.
ಕಂದಾಯ ಸಚಿವರ ಈ ಹೊಸ ಆದೇಶದಿಂದ ಬಗರ್ ಹುಕುಂ ಅರ್ಜಿದಾರರಿಗೆ ತ್ವರಿತ ನ್ಯಾಯ ದೊರೆಯುವ ನಿರೀಕ್ಷೆಯಿದೆ. ಸರ್ಕಾರದ ಗಡುವಿನೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡುವುದರಿಂದ ಸಾವಿರಾರು ಬಡಕುಟುಂಬಗಳಿಗೆ ಭೂ ಹಕ್ಕು ಸಿಗಲಿದೆ. ತಹಸೀಲ್ದಾರರು ಹಾಗೂ ಸಂಬAಧಿತ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಾಗಿದೆ.