Bagar Hukum land Sakrama : ರಾಜ್ಯದಲ್ಲಿ ಬಗರ್ ಹುಕುಂ ಅಕ್ರಮ ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗೆ ಕಂದಾಯ ಇಲಾಖೆ ಮುಂದಾಗಿದ್ದು; ಈ ಸಂಬ೦ಧ ರಾಜ್ಯದ 163 ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಮಿತಿ (Bagar Hukum Committee) ರಚಿಸಲಾಗಿದೆ. ಈ ಸಮಿತಿಗಳ ಮೂಲಕ ಮುಂದಿನ ಎಂಟು ತಿಂಗಳಲ್ಲಿ ಹಂತಹಂತವಾಗಿ ಅರ್ಹ ರೈತರಿಗೆ ಸರಕಾರಿ ಜಮೀನು (Government Land) ಮಂಜೂರಾತಿ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸಲ್ಲಿಕೆಯಾದ ಅರ್ಜಿಗಳೆಷ್ಟು?
ಬಗರ್ ಹುಕುಂ ಸರಕಾರಿ ಜಮೀನು ಸಕ್ರಮಕ್ಕಾಗಿ ಈಗಾಗಲೇ ರೈತರಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ ನಮೂನೆ 50, ನಮೂನೆ 53 ಹಾಗೂ ನಮೂನೆ 57ರಲ್ಲಿ ಅರ್ಜಿ ಸ್ವೀಕರಿಸಲಾಗಿದೆ. 1991ರಿಂದ ಶುರುವಾದ ಅರ್ಜಿ ಸ್ವೀಕಾರ ಕಳೆದ 2023ರ ಏಪ್ರಿಲ್ಗೆ ಅಂತ್ಯವಾಗಿದೆ. ನಮೂನೆ 57ರ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಅವಧಿಯನ್ನು ಏಪ್ರಿಲ್ಗೆ ಮುಕ್ತಾಯಗೊಳಿಸಲಾಗಿದೆ.
ರಾಜ್ಯದಲ್ಲಿ ಈ ಎಲ್ಲ ನಮೂನೆಗಳಲ್ಲಿ ಬಗರ್ ಹುಕುಂ ಜಮೀನು ಸಕ್ರಮೀಕರಣ (Bagar Hukum land valid) ಕೋರಿ ಒಟ್ಟು 9,56,512 ಅರ್ಜಿ ಸಲ್ಲಿಕೆಯಾಗಿವೆ. ಬರೋಬ್ಬರಿ 54 ಲಕ್ಷ ಎಕರೆ ಭೂಮಿ ಮಂಜೂರಾತಿಗೆ ಕೋರಿಕೆ ಸಲ್ಲಿಕೆಯಾಗಿವೆ. ಹೀಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಇದೀಗ ಡಿಜಿಟಲ್ ಹಕ್ಕುಪತ್ರ ಸಿಗಲಿದೆ. ಆದರೆ ಅನರ್ಹ ರೈತರ ಜಮೀನನನ್ನು ಸರಕಾರ ಮುಲಾಜಿಲ್ಲದೇ ವಶಪಡಿಸಿಕೊಳ್ಳಲು ಮುಂದಾಗಿದೆ.
ಯಾವೆಲ್ಲ ಜಮೀನು ಸಕ್ರಮವಾಗಲಿದೆ?
ರಾಜ್ಯದಲ್ಲಿ ಸಾವಿರಾರು ಎಕರೆ ಸರಕಾರಿ ಜಮೀನು ಅಕ್ರಮವಾಗಿದೆ. ಇದರಲ್ಲಿ ಬಲಾಢ್ಯರು ಒಬ್ಬೊಬ್ಬರೇ ಹತ್ತಾರು ಎಕರೆ ವಶಪಡಿಸಿಕೊಂಡಿದ್ದಾರೆ. ಇಂಥವರಿಗೆ ಸಕ್ರಮ ಅಸಾಧ್ಯ. 4.38 ಎಕರೆಗಿಂತ ಕಡಿಮೆ ಇರುವವರ ಭೂಮಿ ಮಾತ್ರ ಸಕ್ರಮವಾಗಲಿದೆ. ಜತೆಗೆ ಗೋಮಾಳ, ಮೀಸಲು ಅರಣ್ಯ, ದೇವರ ಕಾಡು, ಗುಂಡು ತೋಪು, ಕೆರೆಯ ಅಂಗಳ, ಫೂಟ್ ಖರಾಬು, ಸ್ಮಶಾನ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ಸಿಗುವುದು ಕಷ್ಟಕರ.
ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವವರು ಸಲ್ಲಸಿರುವ ಅರ್ಜಿಗಳನ್ನು ತಿರಸ್ಕರಿಸಿ, ಆ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. ಶಿಘ್ರದಲ್ಲಿಯೇ ಮೇಲಾಣ್ಕಿಸಿದ ರೈತರ ಜಮೀನು ಸರಕಾರದ ವಶವಾಗುವ ಸಾಧ್ಯತೆ ಇದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಸಕ್ರಮ ಪ್ರಕ್ರಿಯೆ ಹೇಗೆ ನಡೆಯಲಿದೆ?
ಕಂದಾಯ ಸಚಿವರ ಮಾಹಿತಿಯಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 163 ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಲಾಗಿದೆ. ಇದೇ ಜುಲೈ ತಿಂಗಳಿAದ ಅರ್ಹ ರೈತರ ಬಗರ್ ಹುಕಂ ಜಮೀನು ಸಕ್ರಮೀಕರಣ ಪ್ರಕ್ರಿಯೆ ಆರಂಭವಾಗಲಿದೆ. ತಾಲ್ಲೂಕವಾರು ಪ್ರತಿ ತಿಂಗಳೂ ತಿಂಗಳಿಗೆ ಇಂತಿಷ್ಟು ಅರ್ಜಿ ವಿಲೇವಾರಿಗೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್ಗೆ ಸೂಚಿಸಬೇಕು.
ಶಾಸಕರ ನೇತೃತ್ವದ ಸಮಿತಿಯಲ್ಲಿ ತಹಶೀಲ್ದಾರರು ಈ ಎಲ್ಲಾ ಅರ್ಜಿಗಳಲ್ಲಿ ರೈತರಿಗೆ ಭೂ ಮಂಜೂರು ಮಾಡುವ ಮುನ್ನ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಅವರಿಗೆ ಆ ಜಾಗದ ಕಳೆದ 10 ವರ್ಷದ ಸ್ಯಾಟಲೈಟ್ ಇಮೇಜ್ ಒದಗಿಸಲಾಗುವುದು. ಇದರ ಆಧಾರದಲ್ಲಿ ಸಾಗುವಳಿ ಬಗ್ಗೆ ಖಾತರಿ ಪಡಿಸಿಕೊಂಡು, ಬೋಗಸ್ ಅರ್ಜಿಗಳಿಗೆ ಅವಕಾಶ ನೀಡದಂತೆ ಅರ್ಹ ರೈತರಿಗೆ ಭೂ ಮಂಜೂರು ಮಾಡಲಾಗುತ್ತದೆ.
ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ
ಅರ್ಹ ಬಡ ರೈತರಿಗೆ ಶೇ.100 ನೆಮ್ಮದಿ ನೀಡಬೇಕು ಮುಂದಿನ ದಿನಗಳಲ್ಲಿ ಅವರ ದಾಖಲೆಗಳ ಬಗ್ಗೆ ಸಾಸಿವೆ ಕಾಳಿನಷ್ಟೂ ಅನುಮಾನ ಇರಬಾರದು, ಕೋರ್ಟ್ ಕಚೇರಿ ಸುತ್ತುವಂತೆ ಆಗಬಾರದು ಎಂಬುದು ನಮ್ಮ ಉದ್ದೇಶ. ಹೀಗಾಗಿ ಬಗರ್ ಹುಕುಂ ಜಮೀನನ್ನು ದುರಸ್ಥಿಗೊಳಿಸಿ ಹೊಸ ಹಿಸ್ಸಾ ನಂಬರ್ ಜೊತೆಗೆ ಸಾಗುವಳಿ ಚೀಟಿಯನ್ನು ಡಿಜಿಟಲೀಕರಣ ಗೊಳಿಸಿ ನೀಡಬೇಕು ಹಾಗೂ ಭೂಮಿಯನ್ನು ಕ್ರಮ (ರಿಜಿಸ್ಟರ್) ಮಾಡಿ ರೈತರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.