‘ಆಶ್ರಯ ವಸತಿ ಯೋಜನೆ’ ಅಡಿಯಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 2 ಲಕ್ಷ ರೂ. ವರೆಗೂ ಆರ್ಥಿಕ ನೆರವು ನೀಡುತ್ತದೆ. ಈ ಸಹಾಯಧನ ಪಡೆಯುವ ಕುರಿತ ಮಾಹಿತಿ ಇಲ್ಲಿದೆ…
ಸ್ವಂತ ಮನೆ ಎನ್ನುವುದು ಪ್ರತಿಯೊಬ್ಬರ ಜೀವನದ ಬಹುದೊಡ್ಡ ಕನಸು. ಆದರೆ ಆರ್ಥಿಕ ಸಂಕಷ್ಟ, ಹಣ ಮತ್ತು ನಿವೇಶನ ಸಮಸ್ಯೆಗಳ ಕಾರಣದಿಂದ ಅನೇಕ ಕುಟುಂಬಗಳು ಈ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಂತಹ ಕುಟುಂಬಗಳಿಗೆ ಭರವಸೆಯ ಬೆಳಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಯೋಜನೆಯೇ ‘ಆಶ್ರಯ ವಸತಿ ಯೋಜನೆ’. ಸದರಿ ಯೋಜನೆಯನ್ನು ಆಡುಭಾಷೆಯಲ್ಲಿ ‘ಬಸವ ವಸತಿ ಯೋಜನೆ’ ಎಂದೂ ಕರೆಯಲಾಗುತ್ತದೆ.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ (RGRHCL) ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ, ರಾಜ್ಯದ ನಿರಾಶ್ರಿತ ಮತ್ತು ಬಡ ಕುಟುಂಬಗಳಿಗೆ ಪಕ್ಕಾ ಮನೆ ಒದಗಿಸುವ ಉದ್ದೇಶ ಹೊಂದಿದೆ.
Karnataka Housing Schemes – ರಾಜ್ಯದಲ್ಲಿ ಯಾವೆಲ್ಲ ವಸತಿ ಯೋಜನೆಗಳಿವೆ?
ರಾಜ್ಯದಲ್ಲಿ ಅರ್ಹರಿಗೆ ಸ್ವಂತ ಮನೆ ನಿರ್ಮಿಸಿಕೊಡಲು ಹಲವು ವಸತಿ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. SC/ST ಕುಟುಂಬಗಳಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ, ಹಿಂದುಳಿದ ವರ್ಗಗಳಿಗಾಗಿ ದೇವರಾಜ್ ಅರಸು ವಸತಿ ಯೋಜನೆಗಳಿವೆ.
ಅದೇ ರೀತಿ ಬೆಂಗಳೂರಿನ ನಿವಾಸಿಗರಿಗಾಗಿ ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಹಾಗೂ ಮೀನುಗಾರರಿಗಾಗಿ ಮತ್ಸ್ಯ ಆಶ್ರಯ ಯೋಜನೆ ಕೂಡ ಜಾರಿಯಲ್ಲಿವೆ. ಈ ಲೇಖನದಲ್ಲಿ ಆಶ್ರಯ ಯೋಜನೆ ಕುರಿತ ಮಾಹಿತಿ ನೀಡಲಾಗಿದೆ.
Ashraya Housing Scheme – ಏನಿದು ಆಶ್ರಯ ಮನೆ ಯೋಜನೆ?
ಆಶ್ರಯ ವಸತಿ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಸುರಕ್ಷಿತ ಮತ್ತು ಸುಭದ್ರವಾದ ಮನೆ ಒದಗಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಅಡಿಯಲ್ಲಿ ಸ್ವಂತ ನಿವೇಶನ ಹೊಂದಿರುವವರಿಗೆ ಹಂತ-ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಅಥವಾ ಕೆಲ ಸಂದರ್ಭಗಳಲ್ಲಿ ಸರ್ಕಾರವೇ ಮನೆ ನಿರ್ಮಿಸಿ ಹಸ್ತಾಂತರಿಸುತ್ತದೆ. ಇದೇ ವೇಳೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಸೌಲಭ್ಯಗಳನ್ನೂ ಕೂಡ ಈ ಯೋಜನೆಯೊಂದಿಗೆ ಸಂಯೋಜಿಸಲಾಗಿದೆ.
ಇದನ್ನೂ ಓದಿ: Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ
Financial Assistance Amount – ಸಹಾಯಧನ ಎಷ್ಟು ಸಿಗಲಿದೆ?
‘ಆಶ್ರಯ ವಸತಿ ಯೋಜನೆ’ ಯೋಜನೆಯಡಿ ವರ್ಗವಾರು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ಅನುಗುಣವಾಗಿ ಆರ್ಥಿಕ ಸಹಾಯಧನವನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
- ಸಾಮಾನ್ಯ ವರ್ಗ: ಗ್ರಾಮೀಣ ಪ್ರದೇಶದಲ್ಲಿ ₹1.20 ಲಕ್ಷ
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ: ಗ್ರಾಮೀಣ ಪ್ರದೇಶ: ₹1.75 ಲಕ್ಷ
- ನಗರ ಪ್ರದೇಶ: ₹2 ಲಕ್ಷದ ವರೆಗೆ ಸಹಾಯಧನ
ಫಲಾನುಭವಿಗಳು ಸಹಾಯಧನದ ಜೊತೆಗೆ ಮನೆ ನಿರ್ಮಾಣಕ್ಕೆ ಸಾಲ ಪಡೆದರೆ ವಾರ್ಷಿಕ 6.5% ಬಡ್ಡಿದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.
ಇದನ್ನೂ ಓದಿ: Zero Interest Agriculture Loan- ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ: ಯಾರಿಗೆ, ಹೇಗೆ ಸಿಗುತ್ತದೆ? ಸಂಪೂರ್ಣ ಮಾಹಿತಿ…

Priority Categories – ಈ ವರ್ಗದವರಿಗೆ ವಿಶೇಷ ಆದ್ಯತೆ
ಆಶ್ರಯ ವಸತಿ ಯೋಜನೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆ ಪೈಕಿ ಪರಿಶಿಷ್ಟ ಜಾತಿ ಶೇ.30ರಷ್ಟು, ಪರಿಶಿಷ್ಟ ಪಂಗಡ ಶೇ.10ರಷ್ಟು ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗುತ್ತದೆ.
ಇದರ ಜೊತೆಗೆ, ವಿಧವೆಯರು, ವಿಕಲಚೇತನರು, ತೃತೀಯ ಲಿಂಗಿಗಳಿಗೆ ವಿಶೇಷ ಆದ್ಯತೆಯ ಮೇಲೆ ಮನೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಸಮಾಜದ ಎಲ್ಲ ನಿರ್ಗತಿಕ ವರ್ಗಗಳಿಗೂ ಸಮಾನ ಅವಕಾಶ ದೊರೆಯುತ್ತದೆ.
Eligible Applicants – ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
- ಕನಿಷ್ಠ ವಯಸ್ಸು 18 ವರ್ಷ
- ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ
- ಅರ್ಜಿದಾರರು ಯಾವುದೇ ಪಕ್ಕಾ ಮನೆಯನ್ನು ಹೊಂದಿರಬಾರದು
- ವಸತಿ ರಹಿತರಾಗಿರಬೇಕು
Application Process – ಆಶ್ರಯ ಯೋಜನೆ ಅರ್ಜಿ ಸಲ್ಲಿಸುವ ವಿಧಾನ
ಆಶ್ರಯ ಯೋಜನೆ ಯೋಜನೆಯಡಿ ಮನೆ ಅನುಕೂಲ ಪಡೆಯಲು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಫ್ಲೈನ್’ನಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಅರ್ಜಿಗೆ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ವೆಬ್ಸೈಟ್ ashraya.karnataka.gov.inಗೆ ಭೇಟಿ ನೀಡಿ ಕ್ಷೇತ್ರ, ವಲಯ, ವಾರ್ಡ್ ವಿವರಗಳನ್ನು ನಮೂದಿಸಿ.
ಆಧಾರ್ ಸಂಖ್ಯೆ ಮತ್ತು ರೇಷನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ. ಆದಾಯ, ಜಾತಿ ಪ್ರಮಾಣಪತ್ರದ RD ಸಂಖ್ಯೆ ಸೇರಿಸಿ OTP ಮೂಲಕ ದೃಢೀಕರಣ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ಸ್ಥಿತಿಯನ್ನು ಮೊಬೈಲ್ ಸಂದೇಶದ ಮೂಲಕ ತಿಳಿಸಲಾಗುತ್ತದೆ.
Selection Process – ಆಯ್ಕೆ ಪ್ರಕ್ರಿಯೆ ಹೇಗೆ?
ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಗ್ರಾಮ ಸಭೆ / ಸ್ಥಳೀಯ ಪ್ರಾಧಿಕಾರಗಳ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರ ಪಟ್ಟಿ ಆಶ್ರಯ ಪೋರ್ಟಲ್ನಲ್ಲಿ ಪ್ರಕಟವಾಗುತ್ತದೆ.
Required Documents – ಅರ್ಜಿಗೆ ಬೇಕಾದ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- BPL / ಅಂತ್ಯೋದಯ ರೇಷನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಫೋಟೋ
- (ಕಟ್ಟಡ ಕಾರ್ಮಿಕರಿದ್ದರೆ) ಲೇಬರ್ ನೋಂದಣಿ ಸಂಖ್ಯೆ
ಆಶ್ರಯ ವಸತಿ ಯೋಜನೆ ಬಡ ಮತ್ತು ನಿರಾಶ್ರಿತ ಕುಟುಂಬಗಳ ಬದುಕಿನಲ್ಲಿ ದೊಡ್ಡ ಬದಲಾವಣೆ ತರುವ ಸರ್ಕಾರಿ ಯೋಜನೆಯಾಗಿದೆ. ಸ್ವಂತ ಮನೆ ಕನಸನ್ನು ಸಾಕಾರಗೊಳಿಸುವ ಈ ಅವಕಾಶವನ್ನು ಅರ್ಹರು ತಪ್ಪದೆ ಬಳಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಿ, ಸರ್ಕಾರದ ಈ ಮಹತ್ವದ ಸೌಲಭ್ಯದಿಂದ ಲಾಭ ಪಡೆಯಿರಿ.
- ಅಧಿಕೃತ ವೆಬ್ಸೈಟ್: ashraya.karnataka.gov.in