ಈ ವರ್ಷದ ಮುಂಗಾರು ಮಳೆ ಮುಕ್ತಾಯವಾಗಿದ್ದು; (Monsoon 2025 End) ಹಿಂಗಾರು ಮಳೆ ಸ್ಥಿತಿಗತಿ ಹೇಗಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಈ ಕುರಿತ ವರದಿ ಇಲ್ಲಿದೆ…
2025ನೇ ಸಾಲಿನ ನೈಋತ್ಯ ಮುಂಗಾರು (Southwest Monsoon) ಮಳೆ ನಿನ್ನೆ ಅಕ್ಟೋಬರ್ 30ಕ್ಕೆ ದೇಶದಿಂದ ನಿರ್ಗಮಿಸಿದೆ. ಅಕ್ಟೋಬರ್’ನಿಂದ ಶುರುವಾಗಿ ಡಿಸೆಂಬರ್ ವರೆಗೂ ಮುಂದುವರೆಯಲಿರುವ ಹಿಂಗಾರು ಮಳೆ ದೇಶದಲ್ಲಿ ವಾಡಿಕೆಗಿಂತ ಅಧಿಕ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ನೈಋತ್ಯ ಮಾನ್ಸೂನ್ ಮಾರುತಗಳು (ಮುಂಗಾರು) ಭಾರತದಲ್ಲಿ ವಾಡಿಕೆಯಂತೆ ಪ್ರತೀ ವರ್ಷ ಜೂನ್ 1ರಿಂದ ಸೆಪ್ಟೆಂಬರ್ 30ರ ವರೆಗೂ ಮಳೆ ಸುರಿಸುತ್ತವೆ. ಅಕ್ಟೋಬರ್ 1ರಿಂದ ವರ್ಷದ ಕೊನೆಯ ವರೆಗೂ ಹಿಂಗಾರು ಮಳೆ (ಈಶಾನ್ಯ ಮಾನ್ಸೂನ್ / Northeast Monsoon) ಸುರಿಯುತ್ತದೆ.
ಮುಂಗಾರು ಮಳೆ ದೇಶದಲ್ಲಿ ಶೇ.8ರಷ್ಟು ಅಧಿಕ
ಈ ಬಾರಿ ಮುಂಗಾರು ಮಾರುತಗಳು ಅವಧಿಗೆ ಮೊದಲೇ ಮೇ 24ರಂದು ಕೇರಳ ಪ್ರವೇಶಿಸಿತ್ತು. ಕಳೆದ ನಾಲ್ಕು ತಿಂಗಳುಗಳಿಂದ ಸುರಿಯುತ್ತ ಬಂದಿರುವ ಮುಂಗಾರು ಮಳೆ ಈ ಬಾರೀ ದೇಶದಲ್ಲಿ ಶೇ.8ರಷ್ಟು ಅಧಿಕವಾಗಿ ಸುರಿದಿದೆ.
ವಾಡಿಕೆಯಂತೆ ದೇಶಾದ್ಯಂತ 868.6 ಮಿ.ಮೀ ಸುರಿಯಬೇಕಿದ್ದ ಮುಂಗಾರು ಈ ಬಾರಿ 937.2 ಮಿ.ಮೀ ಸುರಿದಿದೆ ಎಂದು ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ತಿಳಿಸಿದ್ದಾರೆ.

ಹಲವು ಕಡೆ ಮೇಘಸ್ಫೋಟ
ಈ ವರ್ಷದ ಮುಂಗಾರಿನಲ್ಲಿ ದೇಶದ ಹಲವು ಕಡೆ ಮೇಘಸ್ಫೋಟ, ಭೂಕುಸಿತ ಸಂಭವಿಸಿ ಅಪಾರ ಸಾವು-ನೋವು-ನಷ್ಟ ಉಂಟಾಗಿದೆ. ಉತ್ತರ ಭಾರತದ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದ ಬಹುತೇಕ ಭಾಗಗಳಲ್ಲಿ ಸಂಭವಿಸಿದ ಭೂಕುಸಿತ, ಮೇಘಸ್ಫೋಟಕ್ಕೆ ನೂರಾರು ಜನ ಬಲಿಯಾಗಿದ್ದಾರೆ.
ಪಂಜಾಬ್ ಮತ್ತು ಆಸ್ಸಾಂ ರಾಜ್ಯಗಳಲ್ಲಿ ಪ್ರವಾಹ ಉಂಟಾಗಿ ಅಪಾರ ಹಾಲಿಯುಂಟಾಗಿತ್ತು. ಇದೀಗ ಅಕ್ಟೋಬರ್’ನಿಂದ ಆರಂಭವಾಗಿರುವ ಹಿಂಗಾರು ಮಳೆ ವಾಯುವ್ಯ ಭಾರತ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ವಾಡಿಕೆಗಿಂದ ಅಧಿಕವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ: Karnataka Old Age Pension- 4,52,451 ಜನರ ವೃದ್ಧಾಪ್ಯ ವೇತನಕ್ಕೆ ಕತ್ತರಿ | ಅನರ್ಹರ ಪತ್ತೆ ಅಭಿಯಾನಕ್ಕೆ ಮುಂದಾದ ಸರ್ಕಾರ
ರಾಜ್ಯದಲ್ಲಿ ಇನ್ನೂ 2 ವಾರ ಮುಂಗಾರು ಮುಂದುವರಿಕೆ
ಇನ್ನು ರಾಜ್ಯದ ಹವಾಮಾನ ವಿದ್ಯಮಾನ ನೋಡುವುದಾದರೆ, ಇಲ್ಲಿ ವಾಡಿಕೆಯಂತೆ ಸೆಪ್ಟೆಂಬರ್ 30ಕ್ಕೆ ಮುಗಿಯಬೇಕಿದ್ದ ಮುಂಗಾರು ಮಳೆ ಇನ್ನೂ ಎರಡು ವಾರ ಮುಂದುವರೆಯಲಿದೆ. ಅಕ್ಟೋಬರ್ 15ರ ವರೆಗೂ ಮುಂಗಾರು ಮಾರುತಗಳು ಮಳೆ ಸುರಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯ ದಿಕ್ಕಿನ ಪರಿಣಾಮದಿಂದ ಕೆಲವೊಮ್ಮೆ ಮುಂಗಾರು (ನೈಋತ್ಯ ಮಾನ್ಸೂನ್) ಹಾಗೂ ಹಿಂಗಾರು (ಈಶಾನ್ಯ ಮಾನ್ಸೂನ್) ಮಾರುತಗಳು ವ್ಯತ್ಯಾಸವಾಗುತ್ತವೆ. ಆ ಪ್ರಕಾರ ಈ ವರ್ಷ ಅಕ್ಟೋಬರ್ 15ರ ವರೆಗೂ ನೈಋತ್ಯ ಮಾರುತಗಳು ರಾಜ್ಯದಲ್ಲಿ ಮಳೆ ಸುರಿಸಲಿವೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲೂ ಮುಂಗಾರು ವಾಡಿಕೆಗಿಂತ ಹೆಚ್ಚು
ಕರ್ನಾಟಕದಲ್ಲೂ ಕೂಡ ಈ ವರ್ಷದ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ವಾಡಿಕೆಯಂತೆ ಜೂನ್ 1ರಿಂದ ಸೆಪ್ಟೆಂಬರ್ 29ರ ವರೆಗೆ 845 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ಬಾರಿ 964 ಮಿ.ಮೀ ಮಳೆಯಾಗಿದೆ.
ಇನ್ನು ಈ ವರ್ಷ ಹಿಂಗಾರು ಮಳೆ ರಾಜ್ಯದಲ್ಲಿ ಸಾಮಾನ್ಯವಾಗಿದ್ದು; ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಪ್ರಮಾಣ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.