ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ (September Heavy Rainfall) ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
2025ನೇ ಸಾಲಿನ ಮುಂಗಾರು ಋತುವಿನಲ್ಲಿ ಇದುವರೆಗೆ ದೇಶದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಅನಾಹುತ ಸಂಭವಿಸಿವೆ. ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್ ತಿಂಗಳಲ್ಲೂ ಕೂಡ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
167.9 ಮಿಲಿ ಮೀಟರ್ ಮಳೆ
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಂತೆ 109 ಮಿಲಿ ಮೀಟರ್ ಮಳೆಯಾಗಬೇಕು. ಆದರೆ, 167.9 ಮಿಲಿ ಮೀಟರ್ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದೇಶದ ಬಹುಪಾಲು ವಲಯಗಳಲ್ಲಿ ಸಾಧಾರಣ ಹಾಗೂ ಸಾಧಾರಣಕ್ಕಿಂತ ಹೆಚ್ಚಿನ ಮಳೆ ಆಗಲಿದೆ.
ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ನಿನ್ನೆ (ಆಗಸ್ಟ್ 31) ನೀಡಿದ ಮಾಹಿತಿ ಪ್ರಕಾರ ಈಶಾನ್ಯ, ಪೂರ್ವ, ದಕ್ಷಿಣ ಪರ್ಯಾಯ ದ್ವೀಪದ ಬಹಳಷ್ಟು ಭಾಗಗಳು ಹಾಗೂ ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗುವ ಸಂಭವವಿದೆ.
ಇದನ್ನೂ ಓದಿ- Mobile Canteen Subsidy- ಮೊಬೈಲ್ ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ | 4 ಲಕ್ಷ ರೂ. ಸಹಾಯಧನ

ಸೆಪ್ಟೆಂಬರ್ನಲ್ಲಿ ಮೂರು ಮಳೆ ನಕ್ಷತ್ರಗಳು
ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು ಮೂರು ಮಳೆ ನಕ್ಷತ್ರಗಳು ಬರಲಿವೆ. ಕಳೆದ ಆಗಸ್ಟ್ 30ರಿಂದ ಆರಂಭವಾಗಿರುವ ‘ಹುಬ್ಬ ಮಳೆ’ ನಕ್ಷತ್ರವು ಸೆಪ್ಟೆಂಬರ್ 12ರ ವರೆಗೂ ಮುಂದುವರೆಯಲಿದೆ. ಇದು ಉತ್ತಮ ಮಳೆಯಾಗುತ್ತಿದೆ.
ಇನ್ನು ಸೆಪ್ಟೆಂಬರ್ 13ರಿಂದ ಆರಂಭವಾಗುವ ‘ಉತ್ತರ ಮಳೆ’ ಸೆಪ್ಟೆಂಬರ್ 26ರ ವರೆಗೆ ಮುಂದುವರೆಯಲಿದ್ದು; ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಸೆಪ್ಟೆಂಬರ್ 27ಕ್ಕೆ ‘ಹಸ್ತ ಮಳೆ’ ಆರಂಭವಾಗಿ ಅಕ್ಟೋಬರ್ 09ಕ್ಕೆ ಮುಕ್ತಾಯವಾಗುತ್ತದೆ.
ಇದನ್ನೂ ಓದಿ- Har Ghar Lakhpati Yojana- ಎಸ್ಬಿಐ ಹರ್ ಘರ್ ಲಖ್ಪತಿ ಯೋಜನೆ: ಪ್ರತಿ ತಿಂಗಳು ಕೇವಲ 500 ರೂ. ಉಳಿಸಿ ಲಕ್ಷಾಧಿಪತಿ ಆಗಿ
ಕರಾವಳಿಯಲ್ಲಿ ವ್ಯಾಪಕ ಮಳೆ
ಕರ್ನಾಟಕದ ಮಳೆ ಮಾಹಿತಿಯನ್ನು ಕೂಡ ಹವಾಮಾನ ಇಲಾಖೆ ಪ್ರಕಟಿಸಿದ್ದು; ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಇಂದಿನಿಂದ (ಸೆಪ್ಟೆಂಬರ್ 1) ಸೆಪ್ಟೆಂಬರ್ 7ರ ವರೆಗೂ ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಭಾರೀ ಮಳೆ ಸುರಿಯಲಿದ್ದು; ಸೆಪ್ಟೆಂಬರ್ 4 ಮತ್ತು 5ರಂದು ಆರೆಂಜ್ ಅಲರ್ಟ್ ಮತ್ತು ಉಳಿದ ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು ರಾಜ್ಯದ ಉತ್ತರ ಒಳನಾಡಿನಲ್ಲಿ ಸೆಪ್ಟೆಂಬರ್ 2 ಮತ್ತು 3ರಂದು ಸಾಧಾರಣ ಹಾಗೂ ಉಳಿದ ನಾಲ್ಕು ದಿನ ಅತೀ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಇಂದು ಸಾಧಾರಣ ಮಳೆಯಾಗಲಿದ್ದು; ಉಳಿದ ಆರು ದಿನ ಅತೀ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಭಾರಿ ಮಳೆ
ನೆರೆಯ ತಮಿಳುನಾಡಿನ ಚೆನ್ನೈನಲ್ಲಿ ನಿನ್ನೆ ಭಾನುವಾರ ಆಗಸ್ಟ್ 31ರಂದು ಮೇಘ ಸ್ಫೋಟವಾಗಿ ವ್ಯಾಪಕ ಮಳೆಯಾಗಿದೆ. ಇದರಿಂದಾಗಿ ಸೆಪ್ಟೆಂಬರ್ 01 ಮತ್ತು 02ರಂದು ಬೆಂಗಳೂರಿನಲ್ಲಿ ಭಾರೀ ಮಳೆ ಆಗಲಿದೆ ಎಂಬು ಹವಾಮಾನ ಇಲಾಖೆ ತಿಳಿಸಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.