ಆಹಾರ ಇಲಾಖೆ ರಾಜ್ಯದ ಎಲ್ಲ ಕುಟುಂಬಗಳಿಗೆ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಿಕೊಳ್ಳಲು ಜುಲೈ 31ರ ವರೆಗೆ ಮತ್ತೆ ಅವಕಾಶ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದ್ದು, ಜುಲೈ 08ರಿಂದ ಜುಲೈ 31, 2025ರ ವರೆಗೆ ಸಮಯ ನೀಡಲಾಗಿದೆ. ಈ ಅವಧಿಯಲ್ಲಿ ಯಾರು ಬೇಕಾದರೂ ತಮ್ಮ ಪಡಿತರ ಚೀಟಿಯಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಏನೆಲ್ಲ ತಿದ್ದುಪಡಿ ಮಾಡಬಹುದು?
ಈಗ ಆಹಾರ ಇಲಾಖೆ ನೀಡಿರುವ ತಿದ್ದುಪಡಿ ಅವಕಾಶದಲ್ಲಿ, ಹಲವು ಸೇವೆಗಳ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಪ್ರಮುಖವಾಗಿ ಹೊಸ ಸದಸ್ಯರ ಹೆಸರು ಸೇರಿಸಬಹುದು ಅಥವಾ ತಪ್ಪಾಗಿ ನಮೂದಾದ ಹೆಸರನ್ನು ಸರಿಪಡಿಸಬಹುದು.
ಸದಸ್ಯರ ಮುಖಚಿತ್ರವನ್ನು ನವೀಕರಿಸಬಹುದು. ಮುಖ್ಯಸ್ಥರು ನಿಧನರಾಗಿದ್ದರೆ ಅಥವಾ ಬದಲಾಗಿರುವುದಿದ್ದರೆ, ಹೆಸರು ಬದಲಾಯಿಸಬಹುದು. ಮರಣ ಪ್ರಮಾಣಪತ್ರದ ಆಧಾರದಲ್ಲಿ ಮೃತ ಸದಸ್ಯರ ಹೆಸರು ಡಿಲೀಟ್ ಮಾಡಬಹುದು.
ಬೆರಳುಗುರುತು ಮತ್ತು ಆಧಾರ್ ಲಿಂಕ್ ಮಾಡಲು ಅಗತ್ಯವಿರುವ ಇ-ಕೆವೈಸಿ ಬದಲಿಸಬಹುದು. ಅಗತ್ಯವಿದ್ದರೆ ಹೊಸ ನ್ಯಾಯಬೆಲೆ ಅಂಗಡಿ ಬದಲಾವಣೆ ಮಾಡಬಹುದು. ವಿಳಾಸ ಬದಲಾವಣೆ ಸೇರಿದಂತೆ ಇತರೆ ತಾಂತ್ರಿಕ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು
ತಿದ್ದುಪಡಿ ಪ್ರಕಾರ ಬೇರೆ ಬೇರೆ ದಾಖಲೆಗಳು ಅಗತ್ಯವಿರುತ್ತವೆ. ಆದರೆ ಸಾಮಾನ್ಯವಾಗಿ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ:
- ಹೆಸರು ತಿದ್ದುಪಡಿಗೆ ಆಧಾರ್ ಕಾರ್ಡ್, ಶಾಲಾ ದಾಖಲಾತಿ ಪತ್ರ
- ಸದಸ್ಯ ಸೇರ್ಪಡೆಗೆ ಸಂಬಂಧಿಸಿದವರ ಆಧಾರ್, ಜನನ ಪ್ರಮಾಣಪತ್ರ
- ಹೆಸರು ತೆಗೆದುಹಾಕಲು ಮರಣ ಪ್ರಮಾಣಪತ್ರ, ಫೋಟೋ ID
- ಇ-ಕೆವೈಸಿಗೆ ಆಧಾರ್ ಕಾರ್ಡ್, ಬೆರಳು ಗುರುತು (ಬಯೋಮೆಟ್ರಿಕ್)
- ಫೋಟೋ ಬದಲಾವಣೆಗೆ ಹೊಸ ಪಾಸ್ಪೋರ್ಟ್ ಗಾತ್ರದ ಫೋಟೋ
- ನ್ಯಾಯಬೆಲೆ ಅಂಗಡಿ ಬದಲಾವಣೆಗೆ ಹಳೆಯ ಅಂಗಡಿ ವಿವರ, ಹೊಸ ವಿಳಾಸ ಪುರಾವೆ

ಅರ್ಜಿ ಸಲ್ಲಿಸಲು ಎಲ್ಲಿಗೆ ಹೋಗಬೇಕು?
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಗ್ರಾಮ ಒನ್ ಕೇಂದ್ರಗಳು, ಕರ್ನಾಟಕ ಒನ್ ಕೇಂದ್ರಗಳು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಾರ್ವಜನಿಕರು ಸುಲಭವಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಸರ್ಕಾರಿ ರಜೆಗಳ ಹೊರತುಪಡಿಸಿ ಪ್ರತಿ ದಿನ ಬೆಳಿಗ್ಗೆ 10:00ರಿಂದ ಸಂಜೆ 05:00ರ ವರೆಗೆ ತಿದ್ದುಪಡಿಗೆ ಅವಕಾಶವಿದೆ.
ತಿದ್ದುಪಡಿ ಅಂತಿಮ ದಿನಾಂಕ: ಜುಲೈ 31, 2025
ಪ್ರಮುಖ ಸೂಚನೆಗಳು
ಈ ಅವಕಾಶ ತಿದ್ದುಪಡಿಗೆ ಮಾತ್ರ ಸೀಮಿತವಾಗಿದ್ದು; ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಈ ವೇಳಾಪಟ್ಟಿಯಲ್ಲಿ ಅವಕಾಶವಿಲ್ಲ. ಜುಲೈ 31 ನಂತರ ತಿದ್ದುಪಡಿ ಅವಕಾಶ ಮುಕ್ತಾಯವಾಗಲಿದೆ. ನಂತರ ಮತ್ತೆ ಅವಕಾಶ ಸಿಗುವ ಸಾಧ್ಯತೆ ಇರಬಹುದು.
ನಿಮ್ಮ ಪಡಿತರ ಚೀಟಿಯಲ್ಲಿ ಯಾವುದೇ ತಿದ್ದುಪಡಿ ಬೇಕಾದರೆ ಈಗಲೇ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ನಿಗದಿತ ಸಮಯಕ್ಕೆ ಒಳಗೆ ಸೇವೆ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಆಹಾರ ನಿಯಂತ್ರಕ ಕಚೇರಿಯನ್ನು ಸಂಪರ್ಕಿಸಬಹುದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.