ರಾಜ್ಯದಲ್ಲಿ 23 ಲಕ್ಷ ಜನರಿಗೆ ವೃದ್ಧಾಪ್ಯ ವೇತನ ಬಂದ್ (Karnataka Old Age Pension Cancelled) ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಯಾರಿಗೆಲ್ಲ ಪಿಂಚಣಿ ರದ್ದಾಗಿದೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯಾದ್ಯಂತ ಸುಮಾರು 23.19 ಲಕ್ಷ ಫಲಾನುಭವಿಗಳ ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಪಿಂಚಣಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಲು ಕ್ರಮ ಕೈಗೊಳ್ಳುತ್ತಿದೆ. ಹಲವು ವರ್ಷಗಳ ನಂತರ ಈ ಯೋಜನೆಗಳಲ್ಲಿ ತಾಂತ್ರಿಕವಾಗಿ ಪರಿಶೀಲನೆ ನಡೆಸಿ ಅನರ್ಹರನ್ನು ಪತ್ತೆ ಹಚ್ಚಲಾಗಿದೆ.
ಈ ಯೋಜನೆಗಳ ಅಡಿಯಲ್ಲಿ ಅನೇಕ ಅನರ್ಹ ಫಲಾನುಭವಿಗಳು ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದರು. ಹೀಗಾಗಿ ನೈಜ ಫಲಾನುಭವಿಗಳಿಗೆ ನ್ಯಾಯ ದೊರೆಯಬೇಕು ಎಂಬ ಉದ್ದೇಶದಿಂದ ಅನರ್ಹರನ್ನು ಯೋಜನೆಗಳಿಂದ ತೆಗೆದು ಹಾಕಲು ತೀರ್ಮಾನಿಸಲಾಗಿದೆ.
ಯಾರಿಗೆ ಎಷ್ಟೆಷ್ಟು ವೃದ್ಧಾಪ್ಯ ವೇತನ?
ವೃದ್ಧಾಪ್ಯ ವೇತನ ಯೋಜನೆ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ ಎಂಬ ಎರಡು ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಸರ್ಕಾರ ಅರ್ಹ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಯೋಜನೆಗಳ ವಿವರ ಹೀಗಿದೆ:
ವೃದ್ಧಾಪ್ಯ ವೇತನ ಯೋಜನೆ: ಇದು ಬಡವರಿಗಾಗಿ ರೂಪುಗೊಂಡ ಯೋಜನೆಯಾಗಿದ್ದು, 60 ವರ್ಷ ಅಥವಾ ಹೆಚ್ಚು ವಯಸ್ಸು ಇರುವ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ ₹800 ಪಿಂಚಣಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಪ್ರಸ್ತುತ 21.87 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಸಂಧ್ಯಾ ಸುರಕ್ಷಾ ಯೋಜನೆ: ಈ ಯೋಜನೆಯಡಿಯಲ್ಲಿ 65 ವರ್ಷ ಅಥವಾ ಮೇಲ್ಪಟ್ಟ ವಯಸ್ಸು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ತಿಂಗಳಿಗೆ ₹1,200 ಪಿಂಚಣಿ ನೀಡಲಾಗುತ್ತದೆ. ಪ್ರಸ್ತುತ ಈ ಯೋಜನೆಯಡಿ 31.33 ಲಕ್ಷ ಫಲಾನುಭವಿಗಳು ಮಾಸಿಕ ಪಿಂಚಣಿ ಪಡೆಯುತ್ತಿದ್ದಾರೆ.
ಅನರ್ಹ ಫಲಾನುಭವಿಗಳನ್ನು ಗುರುತಿಸಿದ್ದು ಹೇಗೆ?
ಸರ್ಕಾರವು ತಂತ್ರಜ್ಞಾನದ ಸಹಾಯದಿಂದ ಫಲಾನುಭವಿಗಳ ಮಾಹಿತಿಯನ್ನು ಈ ಕೆಳಗಿನ ವಿವಿಧ ಡೇಟಾಬೇಸ್ಗಳೊಂದಿಗೆ ಹೋಲಿಕೆ ಮಾಡುವ ಮೂಲಕ ಅನರ್ಹರರನ್ನು ಹೊರಗಿಡಲಾಗಿದೆ:
- ನಿಖರ ವಯೋಮಿತಿ ಖಚಿತಪಡಿಸಲು ಆಧಾರ್ ಡೇಟಾ ಮ್ಯಾಚಿಂಗ್ ಪರಿಶೀಲಿಸಲಾಗಿದೆ
- ನಿವೃತ್ತ ಸರ್ಕಾರಿ ನೌಕರರ ಪತ್ತೆಗಾಗಿ HRMS (Human Resource Management System) ದತ್ತಾಂಶ ನೋಡಲಾಗಿದೆ.
- ತೆರಿಗೆದಾರರನ್ನು ಪತ್ತೆ ಹಚ್ಚಲು ಇನ್ಕಮ್ ಟ್ಯಾಕ್ಸ್ ಪಾವತಿ ವಿವರಗಳನ್ನು ಲೆಕ್ಕಿಸಲಾಗಿದೆ.
- ಕುಟುಂಬದ ಒಟ್ಟು ಆದಾಯ, ಸದಸ್ಯರ ವಿವರಕ್ಕಾಗಿ ಕೌಟುಂಬಿಕ ದತ್ತಾಂಶ ವ್ಯವಸ್ಥೆ (FRUITS/ Kutumba Database) ಆಧರಿಸಿ ಅನರ್ಹರನ್ನು ಪತ್ತೆ ಮಾಡಲಾಗಿದೆ.

ಪಿಂಚಣಿ ಪಡೆಯಲು ಅರ್ಹತೆಗಳೇನು?
ಸರ್ಕಾರದ ವೃದ್ಧಾಪ್ಯ ವೇತನ ಯೋಜನೆ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಈ ಕೆಳಕಂಡ ಅರ್ಹತೆಯುಳ್ಳ ಹಿರಿಯ ನಾಗರಿಕರಿಗೆ ಮಾತ್ರ ಪಿಂಚಣಿ ಪಡೆಯಬಹುದು:
- 60 ಅಥವಾ 65ಕ್ಕಿಂತ ಹೆಚ್ಚು ವಯಸ್ಸಾಗಿರಬೇಕು
- ಬಿಪಿಎಲ್ ಕಾರ್ಡ್ ಹೊಂದಿರಬೇಕು
- ಸರಕಾರಿ ಉದ್ಯೋಗಿ ಅಥವಾ ನಿವೃತ್ತ ನೌಕರರು ಆಗಿರಬಾರದು
- ಕುಟುಂಬದ ಒಟ್ಟು ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಗಿಂತ ಕಡಿಮೆ ಇರಬೇಕು
- ಆದಾಯ ತೆರಿಗೆ ಪಾವತಿಸುತ್ತಿರಬಾರದು
ಪಿಂಚಣಿ ಪಟ್ಟಿಯಿಂದ ನಿಮ್ಮ ಹೆಸರು ತೆಗೆದರೆ ಏನು ಮಾಡಬೇಕು?
ಸರ್ಕಾರ ಇನ್ನೂ ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ, ನಿಮಗೆ ಪಿಂಚಣಿ ಕೈ ತಪ್ಪುವ ಅನುಮಾನವಿದ್ದರೆ ತಕ್ಷಣ ಪರಿಶೀಲಿಸಿಕೊಳ್ಳಿ. ಒಂದು ವೇಳೆ ನೀವು ಮೇಲ್ಕಾಣಿಸಿದ ಅರ್ಹತೆ ಹೊಂದಿದ್ದರೂ ಕೂಡ ನಿಮ್ಮ ಪಿಂಚಣಿ ಅಕಸ್ಮಾತ್ ನಿಲ್ಲಿಸಲಾಗಿದೆ ಅಂದರೆ, ಕೂಡಲೇ ಮರುಪರಿಶೀಲಿಸಿಕೊಳ್ಳಿ.ಈ ಕೆಳಗಿನ ಹಂತಗಳನ್ನು ಅನುಸರಿಸಿ:
ಇದಕ್ಕಾಗಿ ಗ್ರಾಮ ಪಂಚಾಯಿತಿ / ನಗರ ಪೌರಾಯುಕ್ತ ಕಚೇರಿ ಅಥವಾ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಂಪರ್ಕಿಸಿ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಆದಾಯ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಹೊಂದಿರಿಸಿ ಸೇವಾ ಸಿಂಧು ಅಥವಾ ಜನಸೇವಾ ಕೇಂದ್ರದಲ್ಲಿ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿ.
ಅರ್ಹ ಹಿರಿಯ ನಾಗರಿಕರ ಪಿಂಚಣಿ ಹಕ್ಕು ಕಾಪಾಡುವುದು ಎಲ್ಲರ ಜವಾಬ್ದಾರಿ. ಸರ್ಕಾರದ ಈ ನಿರ್ಧಾರದಿಂದಾಗಿ ಅನೇಕ ನೈಜ ಫಲಾನುಭವಿಗಳಿಗೆ ಅರ್ಥಪೂರ್ಣ ನೆರವು ಸಿಗಲಿದೆ. ಆದ್ದರಿಂದ, ನಿಮ್ಮ ಪಿಂಚಣಿ ಸ್ಥಿತಿಯನ್ನು ಇಂದೇ ಪರಿಶೀಲಿಸಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.