ಇ-ಸ್ವತ್ತು (E-Svattu 2.0) ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಮನೆಯಲ್ಲಿ ಕೂತೇ ಆನ್ಲೈನ್ ಮೂಲಕ ಇ-ಖಾತಾ ಪಡೆಯಲು ಸರ್ಕಾರ ಅವಕಾಶ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾವಿರಾರು ಅಕ್ರಮ ನಿವೇಶನಗಳಿಗೆ ಈಗ ಅಧಿಕೃತ ಮಾನ್ಯತೆ ದೊರಕುವ ಕಾಲ ಕೂಡಿ ಬಂದಿದೆ. ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ಇ-ಸ್ವತ್ತು 2.0 ತಂತ್ರಾಂಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಡಿಸೆಂಬರ್ 1) ಅಧಿಕೃತ ಚಾಲನೆ ನೀಡಿದ್ದಾರೆ.
ಇಂದಿನಿಂದಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು; ಗ್ರಾಮೀಣ ಜನರ ಆಸ್ತಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಪಾರದರ್ಶಕವಾಗಿ ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಇದನ್ನೂ ಓದಿ: Karnataka Labour Welfare Scholarship- ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಅಕ್ರಮ ನಿವೇಶನಗಳಿಗೆ ಸಕ್ರಮದ ಭಾಗ್ಯ
ಕಳೆದ ಕೆಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಮಿಯಲ್ಲಿ ಭೂ ಪರಿವರ್ತನೆ ಮಾಡಿಸದೆ ಮನೆಗಳನ್ನು ನಿರ್ಮಿಸಿಕೊಂಡು ನೆಲೆಸಿರುವ ಸಾವಿರಾರು ಕುಟುಂಬಗಳು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿವೆ. ಆದರೆ ಇದರಿಂದ ಗ್ರಾಮ ಪಂಚಾಯಿತಿಗಳ ಮೇಲೆ ಸಾಕಷ್ಟು ಆರ್ಥಿಕ ಹೊರೆ ಬೀಳುತ್ತಿತ್ತು.
ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ಮಾಡಲಾಗಿದೆ. ಪ್ರಕರಣ 199ಕ್ಕೆ ಹೊಸದಾಗಿ 199ಬಿ ಮತ್ತು 199ಸಿ ಉಪಪ್ರಕರಣಗಳನ್ನು ಸೇರಿಸಿ ಏಪ್ರಿಲ್ 7ರಂದು ಅಧಿಸೂಚನೆ ಹೊರಡಿಸಲಾಗಿದೆ.
ಇ-ಸ್ವತ್ತು 2.0: ಗ್ರಾಮೀಣ ಆಸ್ತಿ ದಾಖಲೆಗಳಿಗೆ ಡಿಜಿಟಲ್ ಕ್ರಾಂತಿ
ಈ ಹೊಸ ನಿಯಮಗಳನ್ನು ಅನುಷ್ಠಾನಗೊಳಿಸಲು ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಲಾಗಿದೆ.
ಪೂರಕವಾಗಿ ‘ಪಂಚತಂತ್ರ’ ತಂತ್ರಾಂಶ ಮತ್ತು ಇ-ಸ್ವತ್ತು 2.0 ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನೂ ಮಾಡಲಾಗಿದೆ. ರಾಜ್ಯಾದ್ಯಂತ 90 ಲಕ್ಷಕ್ಕೂ ಅಧಿಕ ಆಸ್ತಿಗಳು ಇದರಲ್ಲಿ ಸೇರಲಿದ್ದು, ಅರ್ಜಿ ಸಲ್ಲಿಸಿದ ನಂತರ ಡಿಜಿಟಲ್ ಇ-ಸ್ವತ್ತು ಪ್ರಮಾಣಪತ್ರಗಳು (ನಮೂನೆ 11ಎ ಮತ್ತು 11ಬಿ) ವಿತರಿಸಲಾಗಲಿದೆ.
ಇದನ್ನೂ ಓದಿ: KMF Maize Direct Purchase- ಕೆಎಂಎಫ್ನಿಂದ ಮೆಕ್ಕೆಜೋಳ ನೇರ ಖರೀದಿ ಆರಂಭ | ಕ್ವಿಂಟಾಲ್ಗೆ ₹2,400 ಬೆಲೆ ನಿಗದಿ

ಮನೆಯಲ್ಲಿ ಕೂತೇ ಅರ್ಜಿ ಸಲ್ಲಿಸಲು ಅವಕಾಶ
ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು ಈಗ ಸರ್ಕಾರದ ಅಧಿಕೃತ ತಾಣ eswathu.karnataka.gov.inಗೆ ಭೇಟಿ ನೀಡಿ ಮನೆಯಲ್ಲಿ ಕೂತೇ ಇ-ಸ್ವತ್ತು ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಆಧಾರ್ ಸಂಖ್ಯೆ, ಮಾರಾಟಪತ್ರ ಸಂಖ್ಯೆ (ಕಾವೇರಿ 2.0 ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿಯೇ ಪಡೆಯಲಾಗುತ್ತದೆ), ಬೆಸ್ಕಾಂ ಖಾತೆ ಐಡಿ (ಖಾಲಿ ಜಮೀನುಗಳಿಗೆ ಐಚ್ಛಿಕ) ಹಾಗೂ ಆಸ್ತಿಯ ಇತ್ತೀಚಿನ ಫೋಟೋ ಸಾಕು.
ಈ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ, ದಾಖಲೆಗಳು ಹೊಂದಿಕೆಯಾದರೆ ತಕ್ಷಣವೇ ಇ-ಖಾತಾ ಜನರೇಟ್ ಆಗುತ್ತದೆ. ಯಾವುದೇ ಅಡೆತಡೆ ಕಂಡುಬಂದರೆ ಅರ್ಜಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ಪರಿಶೀಲನೆಗಾಗಿ ಕಳುಹಿಸಲಾಗುತ್ತದೆ.
15 ದಿನಗಳೊಳಗೆ ಇ-ಖಾತಾ
ಹೊಸದಾಗಿ ಜಾರಿಯಾದ ಕಾನೂನು ಪ್ರಕಾರ, ಅರ್ಜಿ ಸಲ್ಲಿದ ನಾಲ್ಕು ದಿನಗಳಲ್ಲಿ ಪಂಚಾಯತಿ ಕಾರ್ಯದರ್ಶಿ ಸ್ಥಳ ಪರಿಶೀಲನೆ ಮಾಡಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ (PDO) ತ್ವರಿತವಾಗಿ ಅರ್ಜಿ ಪರಿಶೀಲನೆ ಮಾಡಬೇಕು.
ಮುಂದೆ ಎರಡು ದಿನಗಳಲ್ಲಿ ಪಂಚಾಯಿತಿ ಅಧ್ಯಕ್ಷರ ಅನುಮೋದನೆ ನೀಡಬೇಕು. ಬಳಿಕ ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನವಾಗಿ ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಸರಿಯಾಗಿದ್ದರೆ ಒಟ್ಟು 15 ದಿನಗಳಲ್ಲಿ ಡಿಜಿಟಲ್ ಸಹಿ ಸಹಿತ ಇ-ಖಾತಾ ನೀಡಬೇಕು.
ತಾಂತ್ರಿಕ ಸಮಸ್ಯೆಗಳಿಗೆ ಇ-ಸ್ವತ್ತು ಸಹಾಯವಾಣಿ
ಅರ್ಜಿ ಸಲ್ಲಿಕೆ ವೇಳೆ ಎದುರಾಗುವ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರವಾಗಿ 94834 76000 ಸಂಖ್ಯೆಯ ಕಾಲ್ ಸೆಂಟರ್ ಕಾರ್ಯನಿರ್ವಹಣೆ ಕೂಡ ಆರಂಭಿಸಲಾಗಿದೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಸಹಾಯವಾಣಿ ಕೇಂದ್ರದಿಂದ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಸಹಾಯ ದೊರೆಯಲಿದೆ. ಇದಕ್ಕಾಗಿ 34 ಪಿಡಿಒಗಳು ಮಾರ್ಗದರ್ಶನಕ್ಕೆ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್ನಲ್ಲೇ ಚೆಕ್ ಮಾಡಿ
ಇ-ಖಾತಾ ಪಡೆಯಲು ಅಗತ್ಯವಿರುವ ದಾಖಲಾತಿಗಳು
ಗ್ರಾಮ ಪಂಚಾಯತಿ ವ್ಯಾಪ್ತಿ ಒಂದೊಂದು ರೀತಿಯ ಸ್ವತ್ತುಗಳಿಗೆ ಒಂದೊಂದು ರೀತಿಯ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ವಿವಿಧ ಪ್ರಕರಣಗಳಿಗೆ ಬೇಕಾಗುವ ಅಗತ್ಯ ದಾಖಲೆಗಳ ವಿವಿರ ಹೀಗಿದೆ:
1. ಕೃಷಿ ಜಮೀನಿನಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿದ ಮನೆಗಳು
- ನೋಂದಾಯಿತ ಪ್ರಮಾಣಪತ್ರ
- ತೆರಿಗೆ ಪಾವತಿ ರಶೀದಿ
- ವಿದ್ಯುತ್ ಬಿಲ್ (ಏಪ್ರಿಲ್ 7, 2025ರೊಳಗಿನದು)
- ಪಹಣಿ (RTC)
- ಇಸಿ (Encumbrance Certificate)
- ಭೂ ಪರಿವರ್ತನೆ ಆದೇಶ (ಐಚ್ಛಿಕ)
2. ಭೂ ಪರಿವರ್ತನೆ ಆಗದ ನಿವೇಶನಗಳು
- ನೋಂದಾಯಿತ ಪ್ರಮಾಣಪತ್ರ
- ಪಹಣಿ (RTC)
- ಇಸಿ
- ಭೂ ಪರಿವರ್ತನೆ ಆದೇಶ (ಐಚ್ಛಿಕ)
3. ಅನುಮೋದಿತ ಲೇಔಟ್ನಲ್ಲಿ ಉಲ್ಲಂಘನೆ ಇರುವ ಕಟ್ಟಡಗಳು
- ನೋಂದಾಯಿತ ಪ್ರಮಾಣ ಪತ್ರ
- ಭೂ ಪರಿವರ್ತನೆ ಆದೇಶ
- ಲೇಔಟ್ ವಿನ್ಯಾಸ
- ನಿವೇಶನ ಬಿಡುಗಡೆ ಆದೇಶ
- ಇಸಿ
4. ಲೇಔಟ್ ಪ್ಲಾನ್ ಇಲ್ಲದೆ ಸೌಕರ್ಯ ನೀಡಿದ್ದ ಭೂಮಿ ಸೈಟ್ಗಳು
- ಪಹಣಿ
- ಪರಿತ್ಯಾಜನಾ ಪತ್ರ
- ಭೂ ಪರಿವರ್ತನೆ ಆದೇಶ
- ಇಸಿ
5. ಏಕ ನಿವೇಶನ / ಉಂಡೆ ಖಾತಾ (ಭೂ ಪರಿವರ್ತಿತ / ಭಾವಿತ ಪರಿವರ್ತಿತ)
- ಭೂ ಪರಿವರ್ತನೆ ಆದೇಶ
- ಮಂಜೂರಾತಿ ಆದೇಶ ಕಡ್ಡಾಯ
ಒಟ್ಟಾರೆ ‘ಇ-ಸ್ವತ್ತು 2.0’ ಯೋಜನೆಯ ಮೂಲಕ ಕಡೆಗೂ ಗ್ರಾಮೀಣ ಜನ ಪರದಾಟದಿಂದ ಮುಕ್ತರಾಗಿದ್ದಾರೆ. ಮನೆಯಲ್ಲಿ ಕೂತೇ ಅರ್ಜಿ ಸಲ್ಲಿಸಿ, ತಪ್ಪಿಲ್ಲದ ದಾಖಲೆಗಳಿದ್ದರೆ ಕೇವಲ 15 ದಿನಗಳಲ್ಲಿ ಡಿಜಿಟಲ್ ಇ-ಖಾತಾ ಸಿಗಲಿದೆ. ಕೂಡಲೇ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಈ ಕುರಿತ ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ…
- ಅಧಿಕೃತ ವೆಬ್ಸೈಟ್: eswathu.karnataka.gov.in
- ಸಹಾಯವಾಣಿ: 94834 76000

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.