ಅಕ್ಷಯ ತೃತೀಯ ಬರೀ ಬಂಗಾರ ಖರೀದಿಯ ದಿನವಲ್ಲ; ಹಲವು ಪರಂಪರೆ, ಆಚರಣೆಗಳ ಸುದಿನ ಕೂಡ ಹೌದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಈ ವರ್ಷ ಏಪ್ರಿಲ್ 30ರ ಬುಧವಾರ, ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ.. ಈ ತಿಥಿಯ ಆರಂಭವು ಏಪ್ರಿಲ್ 29ರ ಸಂಜೆ 5.29ಕ್ಕೆ ಆಗುವುದು. ಆದರೆ, ಉದಯ ತಿಥಿಯ ಅನುಸಾರ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ.
ಇದು ಸಮೃದ್ಧಿಯ ಸುದಿನ
ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿಕೊಂಡಿರುವ, ಜೀವನದ ಅಭಿವೃದ್ಧಿ ಕುರಿತು ಸಂಕಲ್ಪಗಳೆಲ್ಲವನ್ನೂ ಸಾಕಾರಗೊಳಿಸುವ ಮಹಾ ಸುದಿನವಾಗಿದೆ. ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆಯಿಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನತೆ ಇಲ್ಲದ್ದು ಎಂದರ್ಥ.
ಇದು ಸಮೃದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತರತೆಯ ಪ್ರತೀಕ. ಆದ್ದರಿಂದಲೇ ಈ ದಿನ ಶುಭ ಕಾರ್ಯಗಳ ಪ್ರಾರಂಭ, ಗೃಹಪ್ರವೇಶ, ಅಕ್ಷರಾಭ್ಯಾಸ, ಹೊಸ ಉದ್ಯಮ, ವ್ಯಾಪಾರ, ವ್ಯವಹಾರಗಳ ಪ್ರಾರಂಭ, ಉಪನಯನ, ವಿವಾಹ, ಹಣ ಹೂಡಿಕೆ, ಬಂಗಾರದ ಖರೀದಿ, ದಾನ ಕಾರ್ಯ, ಪೂಜೆ, ಪುನಸ್ಕಾರಗಳಿಗೆ ಅತ್ಯಂತ ಶ್ರೇಷ್ಠವಾಗಿದೆ.
ಅಕ್ಷಯ ತೃತೀಯ ದಿನದಂದು ಮಾಡಿದ ಸಮಾರಂಭ, ಸತ್ಕಾರ್ಯ, ಖರೀದಿಸಿದ ಆಭರಣ, ಮಾಡಿದ ಪೂಜೆ ಪುನಸ್ಕಾರ, ಜಪ-ತಪ, ದಾನ-ಧರ್ಮಗಳಿಗೆ ಅಕ್ಷಯಫಲ ಪ್ರಾಪ್ತವಾಗುತ್ತದೆ ಎಂದು ಹೇಳಲಾಗಿದೆ.
Bank Holidays Detail- ನಾಳೆಯಿಂದ ಬ್ಯಾಂಕುಗಳಿಗೆ ಸಾಲು ಸಾಲು ರಜೆ: ಸಂಪೂರ್ಣ ವಿವರ ಇಲ್ಲಿದೆ…

ಸಕಲ ದೋಷ ಪರಿಹಾರ
ಈ ತೃತೀಯ ತಿಥಿಯ ಜತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕಾರಕವೆಂದು ಪುರಾಣದಲ್ಲಿದೆ. ಈ ಶುಭ ದಿವಸದಂದು ವಿಷ್ಣು ಮತ್ತು ಮಹಾಲಕ್ಷ್ಮಿ, ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ.
ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ ಅಕ್ಷಯ ತೃತೀಯ. ಇದು ಕೃತ ಯುಗದ ಪ್ರಾರಂಭ ದಿನ. ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಹಾಗೂ 12ನೇ ಶತಮಾನದಲ್ಲಿ ಮಹಾ ಪುರುಷ ಬಸವೇಶ್ವರರು ಜನಿಸಿದ್ದು ಈ ದಿನದಂದೇ.
ಈ ದಿನ ಮಹಾ ವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಈ ದಿನ ವಿಷ್ಣುವಿನ ಪೂಜೆಗೆ ಮೊದಲ ಆದ್ಯತೆಯಿದೆ. ಅಕ್ಷಯ ತೃತೀಯ, ವೈಶಾಖಮಾಸ ಶುಕ್ಲಪಕ್ಷದ ತೃತೀಯ ತಿಥಿಯಂದು ಬರುತ್ತದೆ. ಈ ದಿವಸ ಸೂರ್ಯ ಮತ್ತು ಚಂದ್ರನು ತಮ್ಮ ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದುವುದರಿAದ, ಈ ದಿನವಿಡೀ ಶುಭದಾಯಕವಾಗಿರುತ್ತದೆ.
ಹಲವು ಪರಂಪರೆಗಳ ಪ್ರಾರಂಭ ದಿನ
ಹೌದು, ಅಕ್ಷಯ ತೃತೀಯ ಹಲವು ಪರಂಪರೆಗಳ ಪ್ರಾರಂಭ ದಿನ. ತೇತ್ರಾ ಯುಗ ಪ್ರಾರಂಭವಾಗಿದ್ದು ಅಕ್ಷಯ ತೃತೀಯ ದಿನದಂದೇ. ಮಹರ್ಷಿ ವೇದವ್ಯಾಸರು ಗಣಪತಿ ಅಮೃತಹಸ್ತದಿಂದ ಮಹಾ ಭಾರತದ, ಮಹಾ ಕಾವ್ಯ ಬರವಣಿಗೆ ಪ್ರಾರಂಭಿಸಿದ್ದು, ಕುಬೇರ ಸಂಪತ್ತಿಗೆ ಒಡೆಯ, ದೇವತೆಗಳಲ್ಲೆಲ್ಲ ಅತಿ ಸಿರಿವಂತ, ಅಷ್ಟ ದಿಕ್ಪಾಲಕನಾದ ಕುಬೇರ, ತಾನೇ ಮಹಾಲಕ್ಷ್ಮಿ ಪೂಜೆ ಮಾಡಿದ್ದು ಈ ಶುಭ ದಿವಸವೇ ಆಗಿದೆ.
ಹೀಗಾಗಿ ಪುರುಷಾರ್ಥ ಸಾಧನೆಗಾಗಿ ಈ ಶುಭ ದಿವಸ, ಕುಬೇರ ಹಾಗೂ ಲಕ್ಷ್ಮಿ ಇವರ ಪೂಜೆಯನ್ನು ಮಾಡಲಾಗುತ್ತದೆ. ಪಾಂಡವರು ವನಮಾಸದಲ್ಲಿದ್ದಾಗ ಶ್ರೀಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದದ್ದು ಅಕ್ಷಯ ತೃತೀಯ ದಿವಸವೇ.
ಪಾಂಡವರು ತಮ್ಮ ವನವಾಸ, ಅಜ್ಞಾತಸದ ನಂತರ ಶಸ್ತ್ರಾಸ್ತ್ರಗಳನ್ನು ಪುಃನ ಪಡೆದಿದ್ದು ಅಕ್ಷಯ ತೃತೀಯ ದಿನದಂದು. ಶ್ರೀಕೃಷ್ಣನು ಕುಚೇಲನನ್ನು ಸತ್ಕರಿಸಿದ ಶ್ರೇಷ್ಠದಿನ ಇದು. ಕೃಷ್ಣನ ಅಣ್ಣ ಬಲರಾಮನು ಜನಿಸಿದ್ದು ಈ ಶುಭ ದಿವಸದಂದೆ. ವಿಷ್ಣುವಿನ ಆರನೇ ಅವತಾರ ಪರುಶುರಾಮನು ಜನಿಸಿದ್ದು ಸಹ ಈ ದಿವಸದಂದೇ!
ನಿಜಕ್ಕೂ ಅಕ್ಷಯ ತೃತೀಯ ಹಿಂದೂಗಳ ಪಾಲಿಗೆ ಅತ್ಯಂತ ಸರ್ವಶ್ರೇಷ್ಠ ದಿವಸವಾಗಿದೆ. ಈ ವರ್ಷದ ಅಕ್ಷಯ ತೃತೀಯ ಎಲ್ಲರಿಗೂ ಸರಿ, ಸಮೃದ್ಧಿ ಸಂತಸಗಳಿಗೆ ನಾಂದಿಯಾಗಲಿ ಎಂದು mahitimane.com ಬಳಗದ ಹಾರೈಕೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.