Gram Panchayat Scam New Rules : ಗ್ರಾಮ ಪಂಚಾಯತಿಗಳ ಹಗರಣ (Gram Panchayat Scam), ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಲು ಸರ್ಕಾ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 5,963 ಗ್ರಾಮ ಪಂಚಾಯತಿಗಳಿದ್ದು; ಇಷ್ಟೂ ಗ್ರಾ.ಪಂಗಳಿಗೆ ಅನ್ವಯವಾಗುವಂತೆ ಈ ಹೊಸ ನಿಯಮ ಜಾರಿಗೆ ತರಲು ಗ್ರಾಮೀಣಾಭಿವೃದ್ಧಿ ಇಲಾಖೆ ಸನ್ನದ್ಧವಾಗಿದೆ.
ಹೌದು, ಇನ್ಮುಂದೆ ಗ್ರಾಮ ಪಂಚಾಯತಿಗಳಲ್ಲಿ ಏನೇ ಅವ್ಯವಹಾರ ನಡೆದರೂ ಅದಕ್ಕೆ ಪಿಡಿಒ ಜೊತೆಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೂ ಹೊಣೆಗಾರರಾಗಲಿದ್ದಾರೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (Rural Development and Panchayat Raj Department) ನಡಾವಳಿ ರೂಪಿಸಿದ್ದು, ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಂದ ವರದಿ ಕೇಳಲಾಗಿದೆ.
ಈ ಹೊಸ ನಿಯಮ ಏಕೆ?
ರಾಜ್ಯದ ಗ್ರಾಮೀಣ ಭಾಗದ ಆಡಳಿತ ಕೇಂದ್ರವಾಗಿರುವ ಗ್ರಾಮ ಪಂಚಾಯತಿಗಳು ಈಚೆಗೆ ಹಗರಣಗಳ ಗೂಡಾಗುತ್ತಿವೆ ಎಂಬ ವ್ಯಾಪಕ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಇಲ್ಲಿ ನಡೆಯುವ ಬಹುತೇಕ ಹಣ ದುರುಪಯೋಗ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲು ಮಾಡುತ್ತಿಲ್ಲ. ಪಿಡಿಒ, ಕಾರ್ಯದರ್ಶಿಳನ್ನು ಮಾತ್ರ ಶಿಕ್ಷೆ ವಿಧಿಸಲಾಗುತ್ತಿದೆ.
ಆದರೆ, ಇದು ನ್ಯಾಯ ಸಮ್ಮತವಲ್ಲ. ಬಹಳಷ್ಟು ಹಣಕಾಸು ಅಪರಾಧಗಳು ಅಧ್ಯಕ್ಷರು, ಸದಸ್ಯರ ಒತ್ತಡದಿಂದಲೇ ನಡೆಯುತ್ತವೆ. ಹೀಗಾಗಿ ಅವರನ್ನೂ ಇವುಗಳ ಹೊಣೆಗಾರರನ್ನಾಗಿ ಮಾಡಬೇಕು ಎಂದು ಕಳೆದ ಮೇ ತಿಂಗಳಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯದ ಅಷ್ಟೂ ಜಿಲ್ಲಾ ಪಂಚಾಯತಿ ಸಿಇಒ ಗಳಿಗೆ ‘ನಿಮ್ಮ ಜಿಲ್ಲಾ ವ್ಯಾಪ್ತಿಯ ಪಂಚಾಯತಿಗಳಲ್ಲಿ ಈ ಹಿಂದೆ ನಡೆದ ಹಣ ದುರ್ಬಳಕೆ ಪ್ರಕರಣಗಳು, ಅದರಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಪಾತ್ರ ಹಾಗೂ ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees
ಹಗರಣಗಳಲ್ಲಿ ಜನಪ್ರತಿನಿಧಿಗಳ ಪಾತ್ರವೆಷ್ಟು?
‘ಗ್ರಾಮ ಪಂಚಾಯಿತಿ ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮ 2006’ರ ತಿದ್ದುಪಡಿಯಂತೆ ಪಂಚಾಯತಿಯ ಎಲ್ಲ ಹಣಕಾಸು ವ್ಯವಹಾರಗಳಿಗೂ ಪಿಡಿಒ ಹಾಗೂ ಅಧ್ಯಕ್ಷರ ಜಂಟಿ ಸಹಿ ಕಡ್ಡಾಯ ಮಾಡಲಾಗಿದೆ. ಕಾಮಗಾರಿ, ಪಂಚಾಯತಿ ತೆರಿಗೆ, ಉದ್ಯೋಗ ಖಾತ್ರಿ, ಹಣಕಾಸು ನಿಧಿ ಎಲ್ಲದಕ್ಕೂ ಇಬ್ಬರ ಸಹಿ ಬೇಕು. ಹೀಗಾಗಿ ಬಹುತೇಕ ಭ್ರಷ್ಟಾಚಾರಗಳು ಇಬ್ಬರ ಪಾಲುದಾರಿಕೆಯಲ್ಲಿಯೇ ನಡೆಯುವುದುಂಟು.
ಆದರೆ, ಇಂತಹ ಪ್ರಕರಣಗಳು ಬಯಲಾದಾಗ ಮಾತ್ರ ಪಿಡಿಒ, ಕಾರ್ಯದರ್ಶಿಗಳನ್ನಷ್ಟೇ ಹೊಣೆಗಾರರನ್ನಾಗಿ ಮಾಡಿ, ಆಯಾ ಅಧಿಕಾರಿ, ಸಿಬ್ಬಂದಿಯನ್ನು ಅಮಾನತು ಮಾಡುವ ಮೂಲಕ ವಿಚಾರಣೆಗೆ ಆದೇಶಿಸಲಾಗುತ್ತದೆ. ಆರೋಪ ಸಾಬೀತಾದರೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇದರಿಂದ ಪಿಡಿಒಗಳು ಅಭದ್ರತೆಗೆ ಒಳಗಾಗಿದ್ದಾರೆ. ಇಲ್ಲಿ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರು ಬಚಾವಾಗಿ ಬಿಡುತ್ತಾರೆ.
ರಾಜ್ಯದಲ್ಲಿ ಒಟ್ಟು 5,963 ಗ್ರಾಮ ಪಂಚಾಯತಿಗಳಿದ್ದು; 91,437 ಜನ ಗ್ರಾಮ ಪಂಚಾಯತಿ ಸದಸ್ಯರಿದ್ದಾರೆ. 5,226 ಪಿಡಿಒಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು; ಇದರಲ್ಲಿ 756 ಜನ ಕಳೆದ ಎರಡು ವರ್ಷಗಳಲ್ಲಿ ಹಗರಣ, ಭ್ರಷ್ಟಾಚಾರ ಪ್ರಕರಣ ಸಂಬಂಧ ವಿಚಾರಣೆ ಎದುರಿಸಿದ್ದಾರೆ. ದುರಂತವೆAದರೆ ಈ ಪೈಕಿ 125 ಜನ ಪಿಡಿಒಗಳು ಆತ್ಮಹತ್ಯೆ, ಅನಾರೋಗ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. ಇದನ್ನು ಪಿಡಿಒ ಕ್ಷೇಮಾಭಿವೃದ್ಧಿ ಸಂಘ ಗಂಭಿರವಾಗಿ ಪರಿಗಣಿಸಿದೆ.
ಇನ್ನು ಅಧ್ಯಕ್ಷ, ಸದಸ್ಯರಿಗೂ ದಂಡನೆ?!
ಗ್ರಾಮ ಪಂಚಾಯತಿ ಅಧ್ಯಕ್ಷರು ಚುನಾಯಿತ ಪ್ರತಿನಿಧಿಯಾಗಿರುವುದರಿಂದ ಇದುವರೆಗೂ ಇಂತಹ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರನ್ನು ಹೊಣೆಗಾರರನ್ನಾಗಿ ಮಾಡಲು ಅವಕಾಶ ಇರಲಿಲ್ಲ. ಇದೀಗ ಚುನಾಯಿತ ಪ್ರತಿನಿಧಿಗಳನ್ನೂ ಹೊಣೆಗಾರರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಮನವಿ ಸಲ್ಲಿದ್ದು; ಈ ಮನವಿಗೆ ಸರ್ಕಾರ ಸ್ಪಂದಿಸಿದೆ ಕೂಡ.
ಇನ್ಮುಂದೆ ಗ್ರಾಮ ಪಂಚಾಯತಿಯ ಯಾವುದೇ ಹಣಕಾಸು ಅವ್ಯವಹಾರಕ್ಕೆ ಚುನಾಯಿತ ಸದಸ್ಯರು, ಅಧ್ಯಕ್ಷರೂ ಕೂಡ ಹೊಣೆಗಾರರಾಗಲಿದ್ದಾರೆ. ಇವರ ವಿರುದ್ಧವೂ ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಆರೋಪ ಸಾಭೀತಾದರೆ ಅಧಿಕಾರಿಗಳ ಜೊತೆಗೆ ಚುನಾಯಿತ ಪ್ರತಿನಿಧಿಗಳಿಗೂ ದಂಡನೆ ನಿಶ್ಚಿತ ಎನ್ನಲಾಗುತ್ತಿದೆ!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.