ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಭಾರೀ (Karnataka Heavy Rain Alert) ಮಳೆಯಾಗಲಿದ್ದು; 8 ಜಿಲ್ಲೆಗಳಿಗೆ ರೆಡ್ ಅಲರ್ಟ್ (Red Alert) ಘೋಷಣೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕದ ಹವಾಮಾನದಲ್ಲಿ ಭಾರಿ ಬದಲಾವಣೆ ಕಾಣಿಸಿಕೊಂಡಿದ್ದು, ಪೂರ್ವ ಮುಂಗಾರು ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ, ಅಂದರೆ ಮೇ 24ರ ವರೆಗೆ, ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಭಾರೀ ಮಳೆಗೆ ಕಾರಣವಾದ ಹವಾಮಾನ ಸ್ಥಿತಿ
ಬಂಗಾಳ ಉಪಸಾಗರದ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿನ ವಾತಾವರಣದಲ್ಲಿ ಚುರುಕು ಚಲನವಲನ (ಸರ್ಕ್ಯುಲೇಶನ್) ಉಂಟಾಗಿದ್ದು, ಸುಮಾರು 1.5 ಕಿಮೀ ಮತ್ತು 5.8 ಕಿಮೀ ಎತ್ತರದ ಮಟ್ಟದಲ್ಲಿ ವಾಯುಭಾರ ಕುಸಿತ ಸಂಭವಿಸಿದೆ.
ಇದರ ಜೊತೆಗೆ ಅರಬ್ಬಿ ಸಮುದ್ರದ ಕರ್ನಾಟಕ ಕರಾವಳಿ ಭಾಗದಲ್ಲಿಯೂ ಮೇ 22ರಂದು ವಾಯುಭಾರ ಕುಸಿತವಾಗುವ ಸಾಧ್ಯತೆಗಳಿವೆ. ಈ ಎಲ್ಲ ಪರಿಸ್ಥಿತಿಗಳ ಪರಿಣಾಮವಾಗಿ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಟ್ರಫ್ ರೇಖೆ ಉಂಟಾಗಿ, ಅದರಿಂದಾಗಿ ಧಾರಾಕಾರ ಮಳೆಯಾಗುತ್ತಿದೆ.
ರೆಡ್ ಅಲರ್ಟ್ (Red Alert) ಪ್ರಕಟವಾದ ಜಿಲ್ಲೆಗಳು
ಮೇ 21 ಮತ್ತು 22ರಂದು ಭಾರೀ ಮಳೆಯ ಮುನ್ನೆಚ್ಚರಿಕೆಯಿಂದಾಗಿ ಹವಾಮಾನ ಇಲಾಖೆಯು ಈ ಕೆಳಗಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ:
- ದಕ್ಷಿಣ ಕನ್ನಡ
- ಉಡುಪಿ
- ಉತ್ತರ ಕನ್ನಡ
- ಶಿವಮೊಗ್ಗ
- ಕೊಡಗು
- ಹಾಸನ
- ಚಿಕ್ಕಮಗಳೂರು
- ಬೆಳಗಾವಿ
ಈ ಜಿಲ್ಲೆಗಳಲ್ಲಿ ಕೆಲವೆಡೆ 100 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಸಹಜವಾಗಿ ನದಿ-ನಾಲೆಗಳಲ್ಲೂ ನೀರಿನ ಮಟ್ಟ ಏರಿಕೆಯಾಗಲಿದ್ದು, ಪ್ರವಾಹದ ಪರಿಸ್ಥಿತಿಯೂ ಉಂಟಾಗಬಹುದು.

ಆರೆಂಜ್ ಅಲರ್ಟ್ (Orange Alert) ಇರುವ ಜಿಲ್ಲೆಗಳು
ಈ ಕೆಳಗಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು; ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇವುಗಳಲ್ಲಿ ಕೆಲವು ಸ್ಥಳಗಳಲ್ಲಿ ತೀವ್ರ ಮಳೆಯ ಜೊತೆಗೆ ಗಾಳಿಯ ಅಬ್ಬರವೂ ಕಂಡುಬರುವ ಸಾಧ್ಯತೆಗಳಿವೆ:
- ಧಾರವಾಡ
- ಗದಗ
- ಹಾವೇರಿ
- ದಾವಣಗೆರೆ
- ಮೈಸೂರು
ಹಳದಿ ಅಲರ್ಟ್ (Yellow Alert) ಜಿಲ್ಲೆಗಳು
ಈ ಕೆಳಗಿನ ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯ ಸಾಧ್ಯತೆ ಇದ್ದು, ಸಾರ್ವಜನಿಕರು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ:
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ತುಮಕೂರು
- ರಾಮನಗರ
- ಕೋಲಾರ
- ಚಿಕ್ಕಬಳ್ಳಾಪುರ
- ಬಾಗಲಕೋಟೆ
- ಕೊಪ್ಪಳ
- ಚಿತ್ರದುರ್ಗ
e-Pouthi- ಮನೆ ಬಾಗಿಲಿಗೆ ಇ-ಪೌತಿ | ರೈತರ ಖಾತೆ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಆಂದೋಲನ
ಗಾಳಿಯ ತೀವ್ರತೆ ಏರಿಕೆ, ಉಷ್ಣಾಂಶ ಇಳಿಕೆ
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಡಾ. ಸಿ. ಎಸ್. ಪಾಟೀಲ್ ಅವರ ಮಾಹಿತಿ ಪ್ರಕಾರ, ಮಳೆಯ ಜೊತೆಗೆ ಗಾಳಿಯ ವೇಗವೂ ಹೆಚ್ಚಾಗಿದ್ದು, ಪ್ರತಿ ಗಂಟೆಗೆ 50 ಕಿಲೋಮೀಟರ್ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಮರಗಳು ಬಿದ್ದು ವಿದ್ಯುತ್ ತಂತಿ ಕತ್ತರಿಸುವಂತಹ ಅಪಾಯಗಳಿರುವುದರಿಂದ ಜನರು ತುರ್ತು ಅವಶ್ಯಕತೆಗಳಿಲ್ಲದೆ ಹೊರ ಹೋಗದಂತೆ ಸಲಹೆ ನೀಡಿದ್ದಾರೆ.
ಇನ್ನು ನಿರಂತರ ಮಳೆಯ ಪರಿಣಾಮವಾಗಿ ರಾಜ್ಯದ ಹಲವೆಡೆ ಗರಿಷ್ಠ ಉಷ್ಣಾಂಶದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಬಿಸಿಲಿನ ತೀವ್ರತೆ ಕಡಿಮೆಯಾಗಿ ಶೀತದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಶೀತ ವಾತಾವರಣದಿಂದ ಇಳಿದ ಉಷ್ಣಾಂಶ 26-28 ಡಿಗ್ರಿ ಸೆಲ್ಸಿಯಸ್’ಗೆ ತಲುಪಿದೆ.
ಜೂನ್ 5ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ
ಈ ಪೂರ್ವ ಮುಂಗಾರು ಮಳೆಯ ಅಬ್ಬರದ ನಂತರ, ಅಧಿಕೃತ ಮುಂಗಾರು ಪ್ರವೇಶವು ಜೂನ್ 5ರಂದು ಕರ್ನಾಟಕಕ್ಕೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವರ್ಷ 2024ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗುವ ಈ ಸಮಯದಲ್ಲಿ ಮುಂಗಾರು ಪ್ರವೇಶವು ಅತ್ಯಂತ ನಿರ್ಣಾಯಕವಾಗಿದೆ.
ಮುಂಗಾರು ಮಳೆಯ ಈ ಆರಂಭಿಕ ಅಬ್ಬರದಿಂದ ಕರ್ನಾಟಕದ ಹಲವೆಡೆ ಪರಿಸ್ಥಿತಿ ಗಂಭೀರವಾಗಿ ಬದಲಾಗುವ ಸಾಧ್ಯತೆ ಇದೆ. ಜನಸಾಮಾನ್ಯರು ಹಾಗೂ ರೈತರು ಹವಾಮಾನ ಇಲಾಖೆಯ ನವೀಕೃತ ವರದಿಗಳ ಮೇಲೆ ಗಮನಹರಿಸಿ, ಮುನ್ನೆಚ್ಚರಿಕೆಯಿಂದ ವರ್ತಿಸುವುದು ಅತ್ಯವಶ್ಯಕವಾಗಿದೆ.