ಅಕ್ರಮ ನಿವೇಶನ, ಕಟ್ಟಡಗಳಿಗೆ (Illegal site, Buildings) ಸಕ್ರಮಗೊಳಿಸಲು ಸರ್ಕಾರ ಹಮ್ಮಿಕೊಂಡಿರುವ ಬಿ-ಖಾತಾ (B-Khata) ವಿತರಣೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಮಹಾನಗರ ಪಾಲಿಕೆಗಳು, ನಗರಸಭೆ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಮನೆ ಮಾಲೀಕರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ.
ಇದೇ ಮೇ 10ಕ್ಕೆ ಗಡುವು ಮುಗಿದ್ದಿದ್ದ ಅನಧಿಕೃತ ನಿವೇಶನ, ಕಟ್ಟಡ, ಮನೆಗಳಿಗೆ ಬಿ-ಖಾತೆ ನೀಡುವ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ಮೂರು ತಿಂಗಳು ವಿಸ್ತರಿಸಿದೆ. ನಗರ ಪ್ರದೇಶದಲ್ಲಿ ಅನಧಿಕೃತ ಕಟ್ಟಡ, ನಿವೇಶನ ಹೊಂದಿದವರು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.
ಬಿ-ಖಾತೆ ಎಂದರೇನು ಮತ್ತು ಇದರಿಂದ ಏನು ಪ್ರಯೋಜನ?
ನಗರ ಪ್ರದೇಶಗಳಲ್ಲಿ ಸ್ಥಿರ ಆಸ್ತಿಯ ಕುರಿತು ಮಹಾನಗರ ಪಾಲಿಕೆಗಳು ಎರಡು ವಿಧದ ಖಾತೆಗಳನ್ನು ನಿರ್ವಹಿಸುತ್ತವೆ. ಈ ಪೈಕಿ ನಿಯಮಾನುಸಾರ ನಿರ್ಮಾಣವಾದ ಮನೆಗಳು, ನಿವೇಶನಗಳಿಗೆ ಎ-ಖಾತೆ ನೀಡಲಾಗುತ್ತದೆ.
ಅದೇ ರೀತಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ, ಯಾವುದೇ ನಗರ ಯೋಜನಾ ಅನುಮತಿ ಇಲ್ಲದ ಮನೆಗಳಿಗೆ ತಾತ್ಕಾಲಿಕವಾಗಿ ಆಸ್ತಿ ದಾಖಲಾತಿಯಾಗಿ ಬಿ-ಖಾತೆ ನೀಡಲಾಗುತ್ತದೆ.
ಬಿ-ಖಾತೆ ಎಂದರೆ, ಆಸ್ತಿಯ ಮಾಲೀಕರು ತಮ್ಮ ಕಟ್ಟಡ ಅಥವಾ ನಿವೇಶನವನ್ನು ಪೌರ ಸೇವೆಗಳ ಉದ್ದೇಶಕ್ಕಾಗಿ ನಗರ ಪ್ರಾಧಿಕಾರದ ದಾಖಲೆಗಳಲ್ಲಿ ದಾಖಲಿಸಿಕೊಳ್ಳುವಂತೆ ಮಾಡುವ ಕಾನೂನುಬದ್ಧ ಪ್ರಕ್ರಿಯೆಯಾಗಿದೆ.
ಇದರಿಂದ ವಿದ್ಯುತ್, ನೀರು, ತ್ಯಾಜ್ಯ ನಿರ್ವಹಣೆ ಸೌಲಭ್ಯ ಪಡೆಯಬಹುದು. ಆಸ್ತಿ ತೆರಿಗೆ ಪಾವತಿಗೆ ಅರ್ಹವಾಗುತ್ತವೆ. ಭವಿಷ್ಯದಲ್ಲಿ ಸಕ್ರಮಗೊಳಿಸುವ ನಿರ್ಧಾರ ಬಂದಾಗ ಬಿ ಖಾತೆ ಹೊಂದಿರುವ ಆಸ್ತಿಗಳನ್ನು ಮೊದಲ ಸ್ಥಾನದಲ್ಲಿ ಪರಿಗಣಿಸಲಾಗುತ್ತದೆ. ಬ್ಯಾಂಕುಗಳಿAದ ಸಾಲ ಪಡೆಯಲು ಸಹಾಯವಾಗುತ್ತದೆ.
ಬಿ-ಖಾತೆ ಯಾರು ಪಡೆದುಕೊಳ್ಳಬಹುದು?
ಹೌದು, ನೀವು ಈ ಕೆಳಗಿನ ಮಾದರಿಯ ಆಸ್ತಿಗಳನ್ನು ಹೊಂದಿದ್ದರೆ ಧಾರಾಳವಾಗಿ ಸರ್ಕಾರ ಒದಗಿಸುವ ಬಿ-ಖಾತೆಯನ್ನು ಪಡೆದುಕೊಳ್ಳಬಹುದಾಗಿದೆ:
- ನೀವು ಕಂದಾಯ ಭೂಮಿಯಲ್ಲಿ ಮನೆ ಕಟ್ಟಿದ್ದರೆ
- ನಕ್ಷೆ ಮಂಜೂರಾತಿ ಇಲ್ಲದಿದ್ದರೂ ಮನೆ ಹೊಂದಿದ್ದರೆ
- ಭೂ ಪರಿವರ್ತನೆ ಆಗದ ನಿವೇಶನಗಳಲ್ಲಿ ನೀವು ವಾಸವಾಗಿದ್ದರೆ
- ನಿಮ್ಮ ಹೆಸರಿನಲ್ಲಿ ಜಿಪಿಎ ಅಥವಾ ಕರಾರು ದಾಖಲೆಗಳಿದ್ದರೆ (ಇವುಗಳಿಗೆ ಇನ್ನೂ ಚರ್ಚೆ ನಡೆಯುತ್ತಿದೆ)
ಸರ್ಕಾರದ ಉದ್ದೇಶ ಏನು?
ಈ ಪ್ರಕ್ರಿಯೆಯ ಮೂಲಕ ಸರ್ಕಾರ ಎರಡು ಮಹತ್ವದ ಗುರಿಗಳನ್ನು ಹೊಂದಿದೆ. ಒಂದು ನಾಗರಿಕರ ಸಮಸ್ಯೆಗೆ ಪರಿಹಾರ, ಮತ್ತೊಂದು ಆದಾಯ ವೃದ್ಧಿಯ ಮಹತ್ವಾಕಾಂಕ್ಷೆ.
ಹೌದು, ಅನಧಿಕೃತ ಮನೆಗಳಲ್ಲಿ ವಾಸಿಸುವವರು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಹೆಣಗುತ್ತಿದ್ದು, ಅವರಿಗೆ ಕಾನೂನು ಬದ್ಧ ರೀತಿಯ ಪರಿಹಾರ ನೀಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಅದೇ ರೀತಿ ನಗರ ಪ್ರದೇಶಗಳಲ್ಲಿಯ ಅನಧಿಕೃತ ಆಸ್ತಿಗಳಿಗೆ ಬಿ-ಖಾತೆ ವಿತರಣೆ ಮಾಡುವುದರಿಂದ ಈ ಆಸ್ತಿಗಳು ಆಸ್ತಿ ತೆರಿಗೆ ಪಾವತಿಗೆ ಅರ್ಹವಾಗುತ್ತವೆ. ಇದರಿಂದ ಸರಕಾರಕ್ಕೆ ಆದಾಯ ಹರಿದು ಬರುತ್ತದೆ.

ಈವರೆಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು?
ರಾಜ್ಯದಲ್ಲಿ ಒಟ್ಟು 30 ಲಕ್ಷಕ್ಕೂ ಹೆಚ್ಚು ಅನಧಿಕೃತ ಆಸ್ತಿಗಳಿವೆ ಎಂದು ಅಂದಾಜಿಸಲಾಗಿದೆ. ಈತನಕ ಒಟ್ಟು 10 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 2 ಲಕ್ಷಕ್ಕೂ ಹೆಚ್ಚು ಬಿ-ಖಾತೆ ಈಗಾಗಲೇ ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆ ಮುಂದುವರಿದಿದೆ.
ಮೇ 10ರೊಳಗಿನ ಗಡುವು ಮೀರಿದ್ದು; ಈ ಅವಕಾಶ ಮತ್ತಷ್ಟು ಜನರಿಗೆ ತಲುಪಲೆಂದು ಈಗ ಮತ್ತೆ ಮೂರು ತಿಂಗಳು, ಅಂದರೆ ಆಗಸ್ಟ್ 10, 2025ರ ವರೆಗೆ ಬಿ-ಖಾತೆ ಪಡೆಯುವ ಅವಕಾಶ ನೀಡಲಾಗಿದೆ. ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ನೀವು ಬಿ-ಖಾತೆಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸಿದ್ದರೆ ಈ ಹಂತಗಳನ್ನು ಅನುಸರಿಸಬಹುದು:
- ಸ್ಥಳೀಯ ಮಹಾನಗರಪಾಲಿಕೆ/ನಗರಸಭೆ ಕಚೇರಿಗೆ ಭೇಟಿ ನೀಡಿ
- ಅರ್ಜಿ ಫಾರ್ಮ್ ಪಡೆದು, ಖಚಿತ ದಾಖಲೆಗಳೊಂದಿಗೆ ಸಲ್ಲಿಸಿ
- ನಿಗದಿತ ಶುಲ್ಕ ಪಾವತಿ ಮಾಡಿ
- ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವರು
- ಪರಿಶೀಲನೆ ಬಳಿಕ ಬಿ-ಖಾತೆ ಸಿಗುತ್ತದೆ
ಬೇಕಾಗುವ ಅವಶ್ಯಕ ದಾಖಲೆಗಳು
- ಪ್ರಾಪರ್ಟಿಯ ಒತ್ತಾಯಪತ್ರ / ಹಕ್ಕು ದಾಖಲೆ
- ಪೌರ ಗುರುತಿನ ಚೀಟಿ (ಆಧಾರ್/ಪ್ಯಾನ್/ರೇಷನ್ ಕಾರ್ಡ್)
- ಕಟ್ಟಡದ ಚಿತ್ರಗಳು
- ತೆರಿಗೆ ಪಾವತಿ ದಾಖಲೆಗಳು (ಇದ್ದರೆ)
- ಜಿಪಿಎ ಅಥವಾ ಅಗ್ರಿಮೆಂಟ್ ಪ್ರತಿಗಳು (ಅರ್ಹತೆಯಾದರೆ)
ಜಿಪಿಎ/ಅಗ್ರಿಮೆಂಟ್ ಆಸ್ತಿಗಳಿಗೂ ಬಿ-ಖಾತೆ?
ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಬಿ-ಖಾತೆ ವಿತರಣೆಗೆ ಸಂಬಂಧಿಸಿದ ನಿರ್ಧಾರವನ್ನು ಸದ್ಯದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಇದರಿಂದ ಬಹುಸಂಖ್ಯೆ ಜನರು ತಮ್ಮ ಹಕ್ಕನ್ನು ಕಾನೂನುಬದ್ಧವಾಗಿ ಸ್ಥಾಪಿಸಿಕೊಳ್ಳಬಹುದಾಗಿದೆ.
ರಾಜ್ಯ ಸರ್ಕಾರದ ಸದರಿ ಬಿ-ಖಾತೆ ವಿತರಣೆ ಯೋಜನೆ ಒಂದು ನಾಗರಿಕ ಸ್ನೇಹಿ ಹೆಜ್ಜೆಯಾಗಿದ್ದು, ಅನಧಿಕೃತ ಸ್ಥಿತಿಯಲ್ಲಿ ತಮ್ಮ ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನರಿಗೆ ಸಕ್ರಮಗೊಳಿಸುವ ದಾರಿ ತೆರೆದಿದೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಆಸ್ತಿ ದಾಖಲೆಗಳನ್ನು ನವೀಕರಿಸಿಕೊಳ್ಳಿ, ಭದ್ರತೆಯ ಬದುಕಿಗಾಗಿ ಮೊದಲ ಹೆಜ್ಜೆ ಇಡಿ…
E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ